ಡಾಲರ್ ಬೆನ್ನತ್ತುವವರಿಗೆ ಸಂಸ್ಕೃತಿಯ ವಿಸ್ಮೃತಿ- ಜಿ.ಎಚ್.ನಾಯಕ
ಮೈಸೂರು: ಅರ್ಥ ಸಂಸ್ಕೃತಿಯ ಬೆನ್ನತ್ತಿ ವಿದೇಶಕ್ಕೆ ಹೋಗುವವರು ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಡಾಲರ್ ಆಸೆಯಿಂದ ದೇಶ ತೊರೆಯುವ ಅವರು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿಲ್ಲ ಎಂದು ಹಿರಿಯ ವಿಮರ್ಶಕ ಪ್ರೊ. ಜಿ.ಎಚ್. ನಾಯಕ ವಿಷಾದಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರಿನ ಕಲಾಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನತೆಯತ್ತ ಕನ್ನಡ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿ.ಎಚ್. ನಾಯಕ ಮಾತನಾಡುತ್ತಿದ್ದರು.
ಇಂಗ್ಲೀಷ್ ಬೆಳವಣಿಗೆಯ ಬಗ್ಗೆ ನಾವು ಎಚ್ಚರ ವಹಿಸಬೇಕಾಗಿದೆ. ಇಂಗ್ಲೀಷ್ ಸೃಜನಶೀಲತೆಯನ್ನು ಕೊಲ್ಲುತ್ತಿದೆ. ಇಂಗೀಷ್ ಪ್ರಾಬಲ್ಯದಿಂದಾಗಿಯೇ ಪ್ರಾದೇಶಿಕ ಭಾಷೆಗಳು ಕುಗ್ಗುತ್ತಿರುವುದನ್ನು ನಾವು ಎಚ್ಚರದಿಂದ ಗಮನಿಸಬೇಕು ಎಂದು ಅವರು ಹೇಳಿದರು.
ಕನ್ನಡ ಶಾಲೆಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ಕನ್ನಡ ಭಾಷೆಯನ್ನು ಅಭಿವೃದ್ಧಿಗೊಳಿಸಬಹುದು ಎಂದು ಅಭಿಪ್ರಾಯಪಟ್ಟ ನಾಯಕ, ಭಾಷೆ ಮತ್ತು ಮತಧರ್ಮಗಳ ನಡುವೆ ಯಾವುದೇ ಸಂಬಂಧ ಇಲ್ಲ ಎಂದರು. ಸಂಸ್ಕೃತ, ಹಿಂದೂಗಳದು, ಉರ್ದು ಮುಸಲ್ಮಾನರದು ಎಂದು ಕೆಲವು ಜಾತಿವಾದಿಗಳ ಹೇಳಿಕೆಗೆ ಯಾವುದೇ ಆಧಾರಗಳಿಲ್ಲ . ಉರ್ದು ಭಾಷೆಯಲ್ಲಿ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ವ್ಯಕ್ತಿ ಮುಸ್ಲಿಮರಲ್ಲ ಎನ್ನುವುದನ್ನು ಗಮನಿಸಬೇಕು ಎಂದು ನಾಯಕ ಹೇಳಿದರು.
(ಇನ್ಫೋ ವಾರ್ತೆ)