ಡಾ.ಪಿ.ಎ. ಇಂದಿರೇಶನ್ಗೆ ಶ್ರೇಷ್ಠ ಹೊರನಾಡ ಕನ್ನಡಿಗ ಪ್ರಶಸ್ತಿ ಪ್ರದಾನ
ನವದೆಹಲಿ : ದೆಹಲಿ ಕನ್ನಡಿಗ ಮಾಸಪತ್ರಿಕೆಯ ಆಶ್ರಯದಲ್ಲಿ ಇತ್ತೀಚೆಗೆ ಇಲ್ಲಿ ಜರುಗಿದ 18ನೇ ರಾಷ್ಟ್ರೀಯ ಕನ್ನಡ ಸಮ್ಮೇಳನದಲ್ಲಿ ಚೆನ್ನೈನ ಐ.ಟಿ.ಐ.ನ ಮಾಜಿ ನಿರ್ದೇಶಕ ಡಾ. ಪಿ.ಎ. ಇಂದಿರೇಶನ್ ಅವರಿಗೆ ಶ್ರೇಷ್ಠ ಹೊರನಾಡ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎ. ರಮೇಶ್ರಾವ್ ಅವರಿಗೆ ಶ್ರೇಷ್ಠ ದೆಹಲಿ ಕನ್ನಡಿಗ ಹಾಗೂ ಸಿಂಡಿಕೇಟ್ ಬ್ಯಾಂಕಿನ ಅಧ್ಯಕ್ಷ ಡಿ.ಟಿ. ಪೈ ಅವರಿಗೆ ಟಿ.ಎ. ಪೈ ಸ್ಮ್ಮಾರಕ ಶ್ರೇಷ್ಠ ಬ್ಯಾಂಕರ್ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಯಿತು.
ಸಮ್ಮೇಳನದಲ್ಲಿ ಕನ್ನಡಕ್ಕೆ ಸಂಬಂಧಿಸಿದಂತೆ ವಿಚಾರ ಸಂಕಿರಣ, ಕವಿಗೋಷ್ಠಿ, ಮಹಿಳಾ ಉತ್ಸವ, ಸಂಗೀತ, ನೃತ್ಯ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗನ್ನೂ ಏರ್ಪಡಿಸಲಾಗಿತ್ತು. ಕರ್ನಾಟಕ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವೆ ನಫೀಸಾ ಫಜಲ್ ಅವರು ರಾಷ್ಟ್ರೀಯ ಕನ್ನಡ ಸಮ್ಮೇಳನ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ವಿ.ವಿ. ಮಾಜಿ ಉಪಕುಲಪತಿ ಎನ್.ಆರ್. ಶೆಟ್ಟಿ, ಕೇಂದ್ರ ಜಾಗೃತ ಆಯುಕ್ತ ಎನ್. ವಿಠಲ್, ಲೋಕಸೇವಾ ಆಯೋಗದ ಸದಸ್ಯ ಎಲ್. ಸಿದ್ಧವೀರೇಗೌಡ, ನೀರಜಾ ರಾಜ್ಕುಮಾರ್ ಅವರಲ್ಲದೆ, ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಸಾಹಿತಿ, ಕಲಾವಿದರು ಪಾಲ್ಗೊಂಡಿದ್ದರು ಎಂದು ಸಮ್ಮೇಳನದ ಸಂಚಾಲಕ ಬ. ಸಾಮಗ ತಿಳಿಸಿದ್ದಾರೆ.