ಸಿಲಿಕಾನ್ ವ್ಯಾಲಿಯಲ್ಲಿ ಕೇಂದ್ರ ಸರ್ಕಾರದಿಂದ ದಾಸ ಸಾಹಿತ್ಯ ಪ್ರತಿಷ್ಠಾನ
ಬೆಂಗಳೂರು : ಸಂಶೋಧನೆ, ಸಾಹಿತ್ಯ ರಚನೆ, ಪ್ರಸರಣ, ಅನುವಾದ ಮುಂತಾದ ದಾಸ ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗುವ ದಾಸ ಸಾಹಿತ್ಯ ಪ್ರತಿಷ್ಠಾನವನ್ನು ಕೇಂದ್ರ ಸರ್ಕಾರ ಬೆಂಗಳೂರಿನಲ್ಲಿ ಸ್ಥಾಪಿಸುವುದು ಎಂದು ಕೇಂದ್ರ ಸಂಸ್ಕೃತಿ ಸಚಿವ ಅನಂತಕುಮಾರ್ ಹೇಳಿದ್ದಾರೆ.
ದಾಸ ಸಾಹಿತ್ಯ ಕೇಂದ್ರ ಮಾತ್ರವಲ್ಲದೆ, ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ ಹಾಗೂ ರಾಷ್ಟ್ರೀಯ ರಂಗ ಶಾಲೆಯ ದಕ್ಷಿಣ ಭಾರತ ಕೇಂದ್ರ ಕಚೇರಿಗಳೂ ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿವೆ ಎಂದು ಅನಂತಕುಮಾರ್ ಹೇಳಿದರು. ನಗರದ ಎಡಿಎ ರಂಗಮಂದಿರದಲ್ಲಿ ಶುಕ್ರವಾರ ನಡೆದ ಹರಿದಾಸ ವಾಹಿನಿ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ದಾಸ ಸಾಹಿತ್ಯವನ್ನು ಕಂಪ್ಯೂಟರ್ ಡಿಸ್ಕ್ನಲ್ಲಿ ಮುದ್ರಿಸುವುದರ ಜೊತೆಗೆ ಇ- ಮೇಲ್ ಮೂಲಕ ಜಗತ್ತಿನಾದ್ಯಂತ ಪ್ರಚುರಪಡಿಸುವ ಮಹತ್ತರ ಕಾರ್ಯವನ್ನೂ ಪ್ರತಿಷ್ಠಾನ ಕೈಗೆತ್ತಿಕೊಳ್ಳಲಿದೆ . ಪ್ರತಿವರ್ಷ ಜಾಗತಿಕ ಮಟ್ಟದ ದಾಸ ಸಾಹಿತ್ಯ ಸಮಾವೇಶವನ್ನೂ ನಡೆಸಲಾಗುವುದು ಎಂದು ಅನಂತಕುಮಾರ್ ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣ ಸಚಿವ ಎಚ್. ವಿಶ್ವನಾಥ್, ಸಾಹಿತ್ಯದಿಂದ ಸಮಾಧಾನವನ್ನು ಕೊಡುವ ಕೆಲಸವನ್ನು ಪುರಂದರ, ಕನಕದಾಸರು ಮಾಡಿದ್ದಾರೆ ಎಂದರು. ಏಕಕಾಲದಲ್ಲಿ ದಾಸ ಸಾಹಿತ್ಯವನ್ನೊಳಗೊಂಡ 27 ಧ್ವನಿಸುರುಳಿಗಳನ್ನು ಹೊರತಂದ ಕೀರ್ತಿಶಿಲ್ಪ ದಾಸ ಸಾಹಿತ್ಯ ಪರಿಷತ್ತನ್ನು ಅವರು ಶ್ಲಾಘಿಸಿದರು. ಹರಿಕಥಾ ವಿದ್ವಾನ್ ಭದ್ರಗಿರಿ ಅಚ್ಯುತದಾಸ, ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಹಾಗೂ ಜಯಶ್ರೀ ಅರವಿಂದ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಆದಿಚುಂಚನಗಿರಿ ಮಠಾಧೀಶ ಬಾಲಗಂಗಾಧರನಾಥ ಸ್ವಾಮೀಜಿ, ಮುಳಬಾಗಲು ಶ್ರೀ ವಾದಿರಾಜ ಪೀಠಾಧೀಶ ಶ್ರೀ ವಿಜ್ಞಾನನಿಧಿ ತೀರ್ಥ ಸ್ವಾಮೀಜಿ, ಸಚಿವೆ ಸುಮಾ ವಸಂತ್, ಪಾರ್ವತಮ್ಮ ರಾಜ್ಕುಮಾರ್, ತಿರುಪತಿ ತಿರುಮಲ ದಾಸ ಸಾಹಿತ್ಯ ಯೋಜನೆ ಮುಖ್ಯಸ್ಥ ಅಪ್ಪಣ್ಣಾಚಾರ್, ಕೀರ್ತಿಶಿಲ್ಪ ರಾಮು ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)