ಜಾನಪದದ ಗುಂಗಿನಿಂದ ಹಿಡಿದು ಕನ್ನಡಕೀಬೋರ್ಡ್ವರೆಗೆ
ಕನ್ನಡಿಗರಾದ ನಾವು, ದೇವರೊಂದಿಗೆ ಸಂಸ್ಕೃತದಲ್ಲಿ ಮಾತನಾಡುತ್ತೇವೆ, ಅಧಿಕಾರಿಗಳೊಂದಿಗೆ ಇಂಗ್ಲಿಷ್ನಲ್ಲಿ ಮಾತನಾಡುತ್ತೇವೆ, ಅನ್ಯ ಭಾಷಿಕರೊಂದಿಗೆ ಅವರದೇ ಭಾಷೆಯಲ್ಲಿ ಮಾತನಾಡುತ್ತೇವೆ. ಹೀಗಿರುವಾಗ ಕನ್ನಡ ಕನ್ನಡ ಎಂದು ಏಕೆ ಬೊಬ್ಬೆ ಹೊಡೆಯಬೇಕು? ಕನ್ನಡ.ಇಂಡಿಯಾ ಇನ್ಫೋ.ಕಾಂನ ಓದುಗರ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದ ಡಾ. ಚಂದ್ರಶೇಖರ ಕಂಬಾರರು ಕನ್ನಡಿಗರಿಗೇ ಕೇಳಿದ ಪ್ರಶ್ನೆಯಿದು.
ಕಲ್ಯಾಣದ ಪ್ರಧಾನ ಮಂತ್ರಿಗಳಾಗಿದ್ದ ಕ್ರಾಂತಿಕಾರಿ ಬಸವಣ್ಣನವರು, ಕನ್ನಡ ಆಡಳಿತವನ್ನು ಅಂದೇ ಜಾರಿಗೆ ತಂದಿದ್ದರು. ತನ್ನ ಕೂಡಲ ಸಂಗಮದೇವನೂ ಕನ್ನಡ ಬಲ್ಲವನೆಂದು ಕನ್ನಡದಲ್ಲೇ ಪೂಜಿಸಿದರು. ಅದನ್ನೇ ಶ್ರೀಸಾಮಾನ್ಯರೂ ಅನುಸರಿಸಿದರು. ವಚನಕಾರರ ಕೊಡುಗೆಯಿಂದಲೇ ಕನ್ನಡಕ್ಕೆ ಇಂದು ಬಲ ಬಂದಿದೆ.
ಇಂದು ಕನ್ನಡ ಉಳಿಯಬೇಕಾದರೆ, ಬೆಳೆಯಬೇಕಾದರೆ ‘ವಿಧಾನ ಸೌಧ’ ಮೊದಲು ಕನ್ನಡೀಕರಣ ಆಗಬೇಕು. ಅಲ್ಲಿಯ ತನಕ ಕರ್ನಾಟಕದಲ್ಲಿ ಕನ್ನಡ ಉಳಿಯಲು, ಬೆಳೆಯಲು ಸಾಧ್ಯವಿಲ್ಲ... ಎಂದು ಅವರು, ಪ್ರತಿಪಾದಿಸಿದರು.
ನಮ್ಮ ಓದುಗರು ಕೇಳಿದ ಪ್ರಶ್ನೆಗಳಿಗೆ ಡಾ. ಚಂದ್ರಶೇಖರ ಕಂಬಾರರು ನೀಡಿರುವ ಉತ್ತರಗಳ ಮೊದಲ ಕಂತು ಇಲ್ಲಿದೆ....
ಪ್ರ: ನೀವು ಆರಂಭದಿಂದ ಇಲ್ಲಿಯ ತನಕ ಜಾನಪದದ ಗುಂಗಿನಿಂದ ಹೊರಬಂದಿಲ್ಲ. ಅದು ನಿಮ್ಮ ಸಾಹಿತ್ಯ ಕೃಷಿಗೆ ಅಡ್ಡಿಯಾಗಿಲ್ಲ ಅಂತೀರಾ? - ಜಯತೀರ್ಥ, ವಾಷಿಂಗ್ಟನ್ ಡಿ.ಸಿ.
ಉ: ಖಂಡಿತ ಅಡ್ಡಿ ಆಗಿಲ್ಲ. ಜಾನಪದ ನನ್ನ ಭಾಷೆ. ನೀವು ಭಾವಿಸಿದಂತೆ ಗುಂಗಲ್ಲ. ಅದು ರೂಪಕಗಳನ್ನು, ಮನುಷ್ಯನನ್ನು ಆದಿಮ ಅನುಭವಗಳಿಗೆ ಒಯ್ಯುವ ರೂಪಕಗಳನ್ನು ಹೆರುವ ಭಾಷೆ. ಅದಕ್ಕೆ ಅದು ನಿತ್ಯವೂ ಸೃಜನಶೀಲ.
ಪ್ರ: ಸಿಂಗಾರೆವ್ವ ಮತ್ತು ಅರಮನೆಯ ನಂತರ ನೀವು ಕಾದಂಬರಿ ಪ್ರಕಾರ ಮೇಲಿನ ಹಿಡಿತ ಮತ್ತು ಆಸಕ್ತಿ ಕಳಕೊಂಡಿದ್ದೀರೆಂದು ವಿಮರ್ಶಕರು ಹೇಳುತ್ತಾರೆ. ನೀವೇನಂತೀರಿ?- ಪ್ರಹ್ಲಾದ, ಕುಂದಾಪುರ
ಉ: ಹಾಗಲ್ಲ. ನಾನು ಇತ್ತೀಚೆಗೆ ಹೊಸ ಕಾದಂಬರಿ ಬರೆಯುತ್ತಿದ್ದೇನೆ. ಹಿಡಿತ ಮತ್ತು ಆಸಕ್ತಿ ಕಳೆದುಕೊಂಡಿದ್ದೇನೆಂದು ಹೇಳುವುದು ನಿಮಗೂ ಸದರಿ ವಿಮರ್ಶಕರಿಗೂ ಶೋಭೆಯಲ್ಲ.
ಪ್ರ: ಹಂಪಿ ವಿಶ್ವವಿದ್ಯಾಲಯದ ಉಪಕುಲಪತಿಗಳಗಿ ನಿಮ್ಮ ಸಾಧನೆ ಏನು? ಇವತ್ತಿಗೂ ಹಂಪಿ ಕನ್ನಡ ವಿವಿ ಪುಸ್ತಕ ಪ್ರಕಾಶನ ಸಂಸ್ಥೆಯಾಗಿ ಹೆಸರು ಮಾಡಿದಷ್ಟು ವಿಶ್ವವಿದ್ಯಾಲಯವಾಗಿ ಹೆಸರು ಮಾಡಿಲ್ಲ ಏಕೆ?- ಶಿವರಾಮ, ಬೆಂಗಳೂರು.
ಉ: ಹಂಪಿ ವಿಶ್ವವಿದ್ಯಾಲಯ ಕಟ್ಟುವಲ್ಲಿ ಪ್ರಥಮ ಕುಲಪತಿ ಮಾಡಬೇಕಾದ ಎಲ್ಲಾ ಕರ್ತವ್ಯವನ್ನೂ ಮಾಡಿದ್ದೇನೆ. ಅದೊಂದು ಉತ್ತಮ ವಿ.ವಿ. ಒಮ್ಮೆ ಹೋಗಿ ನೋಡಿ ಬನ್ನಿ.
ಪ್ರ: ಕಾನೂನಿನಿಂದ ಕನ್ನಡ ಉಳಿಸಲು, ಬೆಳೆಸಲು ಸಾಧ್ಯವೇ? ಕರ್ನಾಟಕದಲ್ಲಿ ಕನ್ನಡ ಉಳಿಸಲು ರಾಜ್ಯ ಸರಕಾರ ಏನು ಮಾಡಬೇಕು ? - ಕೆ.ಆರ್. ರಾಮಪ್ರಸಾದ್, ಬೆಂಗಳೂರು.
ಉ: ಸಾಧ್ಯ. ವಿಧಾನಸೌಧವನ್ನು ಮೊದಲು ಕನ್ನಡೀಕರಿಸಬೇಕು.
ಪ್ರ: ನಿಮ್ಮ ಕಾವ್ಯಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆದಿಲ್ಲ. ನಿಮಗಿಂತ ಎಳಸು ಕವಿಗಳೇ ಸಾಕಷ್ಟು ವಿಮರ್ಶೆಗೆ ಒಳಗಾಗಿದ್ದಾರೆ. ನಿಮ್ಮನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿದೆ ಅಂತಿರಾ?- ಮಂಜುನಾಥ ಪ್ರಸಾದ್ ಎಚ್.ಎನ್., ಯಲಹಂಕ.
ಉ: ಅದು ಆಯಾ ವಿಮರ್ಶಕರಿಗೆ ಬಿಟ್ಟ ವಿಚಾರ. ನಾಡಿನ ಮಹತ್ವದ ವಿಮರ್ಶಕರಾದ ಕೀರ್ತಿನಾಥ ಕುರ್ತಕೋಟಿ, ಡಿ.ಆರ್. ನಾಗರಾಜ್, ಡಾ. ಯು.ಆರ್. ಅನಂತಮೂರ್ತಿ, ಲಂಕೇಶ್, ಟಿ.ಪಿ. ಅಶೋಕ್, ಓ.ಎಲ್. ನಾಗಭೂಷಣಸ್ವಾಮಿ ಮುಂತಾದವರೆಲ್ಲ ಸುದೀರ್ಘವಾಗೇ ನನ್ನ ಕಾವ್ಯಗಳ ಬಗ್ಗೆ ಬರೆದಿದ್ದಾರೆ.
ಪ್ರ: ಅಮೆರಿಕದ ಕನ್ನಡ ಕೂಟದ ಬಗ್ಗೆ ನಿಮಗೇನನ್ನಿಸುತ್ತದೆ? ಹೊರನಾಡ ಕನ್ನಡ ಸಂಘಗಳು ಹೇಗೆ ಕನ್ನಡ ಸೇವೆ ಮಾಡಬೇಕೆನ್ನುತ್ತೀರಿ? - ವಿ. ಎಂ. ಕುಮಾರಸ್ವಾಮಿ, ಅಮೆರಿಕ.
ಉ: ಅಮೆರಿಕದಲ್ಲಿರುವ ‘ಅಕ್ಕ’ ಕನ್ನಡ ಸಂಸ್ಥೆ ಬಹಳ ಅದ್ಭುತ ಕಾರ್ಯ ಮಾಡುತ್ತಿದೆ. ಪ್ರತಿಭಾವಂತ ಕನ್ನಡಿಗರನ್ನು ಮತ್ತು ಕರ್ನಾಟಕ ಕಲಾಮೇಳಗಳನ್ನು ಅಮೆರಿಕೆಗೆ ಆಮಂತ್ರಿಸಿ ಕನ್ನಡದ ಸಾಂಸ್ಕೃತಿಕ ಪರಂಪರೆಯನ್ನು ಅಲ್ಲಿನ ಕನ್ನಡಿಗರಿಗೆ ನೆನಪಿಸುತ್ತಾ ಅಮೆರಿಕದ ಪ್ರಜೆಗಳಿಗೆ ಪರಿಚಯಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಾ ಬಂದಿದೆ.
ಕನ್ನಡ ವಿಶ್ವವಿದ್ಯಾಲಯದೊಂದಿಗೆ ಸಹಭಾಗಿಯಾಗಿ ಕುವೆಂಪು ಅವರ ಸಮಗ್ರ ಕಾವ್ಯವನ್ನು ಪುನರಚ್ಚು ಮಾಡಿಸಿದೆ. ಇವೆಲ್ಲ ಅದ್ಭುತ ಕಾರ್ಯಗಳು. ಅಲ್ಲದೆ, ಇನ್ನೂ ಅನೇಕ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದೆ. ಇಂಥ ಕಾರ್ಯವನ್ನೂ ಯಾರೂ ಮಾಡಿಲ್ಲ.
ಅಲ್ಲದೆ ಶತಮಾನದ ಪುರುಷನಾಗಿ ಕುವೆಂಪು ಅವರನ್ನೂ, ಸಹಸ್ರಮಾನದ ವ್ಯಕ್ತಿಯಾಗಿ ಬಸವಣ್ಣನವರನ್ನೂ ಹೆಸರಿಸಿದ್ದು ಕೂಡ ಅಕ್ಕ ಸಂಸ್ಥೆಯ ವಿವೇಕ ಎಷ್ಟು ಉತ್ಕೃಷ್ಟ ಎಂಬುದನ್ನು ತೋರಿಸುತ್ತದೆ.
ಅಕ್ಕ ಸಂಸ್ಥೆ ಅಲ್ಲಿದ್ದು ಕೂಡ ಇಷ್ಟೆಲ್ಲಾ ಸೇವೆ ಸಲ್ಲಿಸುತ್ತಿದ್ದರೂ, ಇನ್ನೂ ಮಹತ್ವವಾದ ಸೇವೆ ಸಲ್ಲಿಸಬಹುದಾಗಿದೆ. ಆ ಸಂಸ್ಥೆಯ ಅನೇಕ ಪ್ರತಿಭಾವಂತರು ಅಮೆರಿಕದ ಆಧುನಿಕ ವಿಜ್ಞಾನದ ಬೆಳೆವಣಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರಾಗಿದ್ದಾರೆ. ಅಂತಹವರು ಅಲ್ಲಿದ್ದುಕೊಂಡೇ ತಮ್ಮ ಅನುಭವಗಳನ್ನು ಮತ್ತು ಆಧುನಿಕ ವಿಜ್ಞಾನದ ಬಗ್ಗೆ ಕನ್ನಡದಲ್ಲಿ ಲೇಖನಗಳನ್ನು ಬರೆಯುತ್ತಾ ಹೋದರೆ, ಕನ್ನಡಕ್ಕೆ ಹೊಸ ಶಕ್ತಿ ನೀಡಬಹುದಾಗಿದೆ.
ಕನ್ನಡದ ಬೆಳವಣಿಗೆಗೆ ಪೂರಕವಾದ ಕಾರ್ಯಗಳನ್ನು ಮಾಡಿದರೆ, ಕರ್ನಾಟಕವೇ ಮೆಚ್ಚುತ್ತದೆ. ಬರಹ ತಂತ್ರಾಂಶ ನೀಡಿದ ಶೇಷಾದ್ರಿವಾಸು ಅವರ ಕೊಡುಗೆಯನ್ನು ಕರ್ನಾಟಕ ಮರೆಯಲು ಸಾಧ್ಯವೇ?
ಪ್ರ: ಕನ್ನಡದ ಕೀಬೋರ್ಡ್ ಬರುವುದು ಯಾವಾಗ? - ಕೆ. ಮೂರ್ತಿ, ಊರು ತಿಳಿಸಿಲ್ಲ.
ಉ:
ಕನ್ನಡ.ಇಂಡಿಯಾಇನ್ಫೋ
ಈ
ಬಗ್ಗೆ
ಸಮಗ್ರ
ಮಾಹಿತಿ
ನೀಡಿದೆ.
ಈ
ಕೆಳಗಿನ
ಸುದ್ದಿ
ಓದಿ
ಮುಖಪುಟ
/
ಸಾಹಿತ್ಯ
ಸೊಗಡು