ಪರಿಷತ್ತಿನಂತಹ ಸಂಘಟನೆಯ ಅಧ್ಯಕ್ಷತೆಗೆ ಸಮರ್ಥ ಸಂಘಟಕರೇ ಸೈ
'ಸಾಹಿತ್ಯ ಪರಿಷತ್ತಿನ ಅಧ್ಯಕ್ಷಗಿರಿಗೆ ಹೋರಾಟ’ ಲೇಖನವನ್ನು ಓದಿದೆ. ಲೇಖನ ಚರ್ಚಾಸ್ಪದ ಅನ್ನಿಸಿದ್ದರಿಂದ ಕೆಲವು ವಿಷಯಗಳನ್ನು ಪ್ರಸ್ತಾಪಿಸ ಬಯಸುತ್ತೇನೆ.
ಐ.ಎಂ. ವಿಠಲಮೂರ್ತಿ ಅವರು ಓರ್ವ ಅಧಿಕಾರಿ ಅನ್ನುವುದು ಬಹಳ ಮುಖ್ಯ. ಅವರು ಅಧಿಕಾರ ವಹಿಸಿಕೊಂಡಿದ್ದು ತೀರಾ ಸೂಕ್ಷ್ಮ ಪರಿಸ್ಥಿತಿಯಲ್ಲಿ . ಅಂಥಾ ಪರಿಸ್ಥಿತಿಯನ್ನು ನಮ್ಮ ನಡುವಿನ ಈ ಹೊತ್ತಿನ ಅಗ್ರ ಪಂಕ್ತಿಯ ಸಾಹಿತಿಗಳೇ ಸೃಷ್ಟಿಸಿದ್ದರು ಅನ್ನುವುದು ಗಮನಾರ್ಹ. ಈ ಹಿನ್ನೆಲೆಯಲ್ಲಿ ವಿಠಲಮೂರ್ತಿ ಅವರನ್ನು ಸಭ್ಯಸ್ಥರೇನಲ್ಲ ಎನ್ನುವುದು ಅಷ್ಟು ಸರಿಯಲ್ಲ .
ಅಧಿಕಾರಿಯಾಗಿ ವಿಠಲಮೂರ್ತಿ ಸರ್ಕಾರ ಹಾಗೂ ಪರಿಷತ್ತಿನ ನಿಯಮಗಳನುಸಾರ ತಮ್ಮ ಕರ್ತವ್ಯವನ್ನು ಸರಿಯಾಗಿಯೇ ನಿಭಾಯಿಸಿದ್ದಾರೆ. ಒಬ್ಬ ಸರ್ಕಾರಿ ಅಧಿಕಾರಿಯಿಂದ ನಾವು ಏನನ್ನೂ ನಿರೀಕ್ಷಿಸಬಾರದು ಅನ್ನುವುದನ್ನು ಕೂಡ ಮರೆಯಬಾರದು.
ಇನ್ನು - ಪರಿಷತ್ತಿನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಲಿಂಗಾಯತರು ಸ್ಪರ್ಧಿಸುತ್ತಿರುವುದು ಇದೇ ಮೊದಲೇನೂ ಅಲ್ಲ . ಕಳೆದ ಹತ್ತು ಹದಿನೈದು ವರ್ಷಗಳಿಂದ ಸತತವಾಗಿ ಲಿಂಗಾಯತರೇ ಪರಿಷತ್ತಿನ ಅಧ್ಯಕ್ಷ ರಾಗಿದ್ದಾರೆ. ಸಿದ್ಧಲಿಂಗಯ್ಯ (ಒಂದು ಅವಧಿಗೆ), ಗೊ.ರು.ಚನ್ನಬಸಪ್ಪ (ಎರಡು ಅವಧಿಗೆ) ಹಾಗೂ ಎನ್.ಬಸವಾರಾಧ್ಯ (ಒಂದು ಅವಧಿಗೆ) ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಆರಂಭದ ವರ್ಷಗಳಲ್ಲಿ ಕೂಡ ಪರಿಷತ್ತಿನಲ್ಲಿ ಲಿಂಗಾಯತರದೇ ಪ್ರಾಬಲ್ಯವಿತ್ತು . ಇನ್ನೂ ಒಂದು ಕುತೂಹಲಕರ ವಿಷಯವೆಂದರೆ, ಮೇಲೆ ಹೆಸರಿಸಿರುವ ಅಧ್ಯಕ್ಷರಾರೂ ಕನ್ನಡ ಸಾಹಿತ್ಯಕ್ಕೆ ನೇರವಾಗಿ ಸಂಬಂಧಿಸಿದವರಲ್ಲ . ಈ ಹಿನ್ನೆಲೆಯಲ್ಲಿ ಪುನರೂರು ಪರಿಷತ್ತಿನ ಅಧ್ಯಕ್ಷರಾದರೆ ತಪ್ಪೇನು ? ಏಕೆಂದರೆ, ಪರಿಷತ್ತಿನಂತಹ ಸಂಘಟನೆ ಬೇಡುವುದು ಸಮರ್ಥ ಸಂಘಟಕರನ್ನೆ.
ಇವೆಲ್ಲಕ್ಕಿಂತ ಮುಖ್ಯವಾಗಿ ಚಂಪಾ ಅವರಿಗಿಂತ ಪುನರೂರು ಅವರಿಗೆ ಸಾಹಿತಿಗಳ ಬಗ್ಗೆ ಹೆಚ್ಚು ಗೌರವ ಇದೆ. ವೈಯಕ್ತಿಯವಾಗಿ ಕೂಡ ಚಂಪಾ ಶುದ್ಧಹಸ್ತರೇನಲ್ಲ . ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಕಾಲದಲ್ಲಿ ಚಂಪಾ ಅವರ ಚಟುವಟಿಕೆಗಳು ಪಾರದರ್ಶಕವಾಗಿರಲಿಲ್ಲ . ಸಾಹಿತ್ಯ ವಲಯದಲ್ಲಿ ಪ್ರಬಲ ಜಾತಿವಾದಿ ಅಪೇಕ್ಷಿತನಲ್ಲ ಎನ್ನುವುದನ್ನು ಕೂಡ ಮರೆಯಬಾರದು.
ನಾನು ಪುನರೂರು ಅವರ ಪರವಾಗಲೀ ಅಥವಾ ಚಂಪಾ ವಿರುದ್ಧವಾಗಲೀ ವಕಾಲತ್ತು ವಹಿಸುತ್ತಿಲ್ಲ . ಲೇಖನ ಕೆಲವು ವಿಷಯಗಳನ್ನು ಪ್ರಸ್ತಾಪಿಸಲಿಕ್ಕೆ ಪ್ರಚೋದಿಸಿದ ಕಾರಣ ಇದೆಲ್ಲ ಬರೆಯಬೇಕಾಯಿತು. ಕೊನೆಯದಾಗಿ- ಚಂಪಾ ಅಥವಾ ಪುನರೂರು ಅವರ ಕೋಮಿಗೆ ನಾನು ಸೇರಿದವನಲ್ಲ .