ಸಾಹಿತ್ಯಾಧ್ಯಯನಕ್ಕೆ ಧರ್ಮದ ಚೌಕಟ್ಟು ಕೂಡದು- ಬರಗೂರು
ಚಾಮರಾಜನಗರ : ಪಂಪನನ್ನು ಜೈನರಿಗೆ, ಬಸವಣ್ಣನನ್ನು ಶೈವರಿಗೆ, ಕುಮಾರ ವ್ಯಾಸನನ್ನು ವೈಷ್ಣವರಿಗೆ ಸೀಮಿತಗೊಳಿಸುವುದು ಸಾಹಿತ್ಯಕ್ಕೆ ಹಾಗೂ ಈ ಮಹಾನ್ ವ್ಯಕ್ತಿಗಳಿಗೆ ಮಾಡುವ ಅಪಚಾರ ಎಂದು ಬರಗೂರು ರಾಮಚಂದ್ರಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ಸಾಹಿತ್ಯ ಅಧ್ಯಯನಕ್ಕೆ ಧರ್ಮದ ಚೌಕಟ್ಟು ಇರಕೂಡದು. ಇಂಥಾ ಧರ್ಮ ನಿರಪೇಕ್ಷ ಪರಿಸರ ನಿರ್ಮಿಸುವುದು ಅತ್ಯಗತ್ಯ ಎಂದು ಇತ್ತೀಚೆಗೆ ಇಲ್ಲಿನ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಚಾಲನೆನೀಡಿ, ಬರಗೂರು ಹೇಳಿದರು.
ಪುರಾಣ ಹಾಗೂ ಕಾವ್ಯಗಳಿಗೆ ಸಂಬಂಧಿಸಿದಂತೆ ಕಮ್ಮಟಗಳನ್ನು ಆಯೋಜಿಸಬೇಕು. ಆರ್ಥಿಕ ಹಾಗೂ ಜಾತಿ ನೆಲೆಗಟ್ಟಿನ ಆಧಾರದ ಮೇಲೆ ಪ್ರತಿಭೆಗಳನ್ನು ಹೆಕ್ಕುತ್ತಿರುವುದು ಖೇದಕರ. ಸಾಹಿತ್ಯ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ಒತ್ತಡ ಹೇರಬೇಕೇ ಹೊರತು ಸಾಮಾಜಿಕ ನಿಷೇಧಗಳನ್ನಲ್ಲ ಎಂದರು.
ಕಿವಿಮಾತು : ಯುವಕರು ತಮ್ಮ ಸುತ್ತಮುತ್ತಲ ಸಹಜ ಪರಿಸರವನ್ನು ಕೃತಿಯಾಗಿಸಬೇಕು. ಕೇವಲ ಕಾಲ್ಪನಿಕ ಲೋಕದಲ್ಲಿ ವಿಹರಿಸ ಕೂಡದು. ಕೃತಿಯಲ್ಲಿ ಸಹಜತೆ ಇದ್ದಲ್ಲಿ ಸಾಮಾಜಿಕ ಬದಲಾವಣೆ ತರುವುದು ಸಾಧ್ಯ ಎಂದು ಯುವ ಬರಹಗಾರರಿಗೆ ಬರಗೂರು ಕಿವಿಮಾತು ಹೇಳಿದರು.
(ಇನ್ಫೋ ವಾರ್ತೆ)