‘ಪುನರ್ಜನ್ಮ ಇದ್ದರೆ ಮೇಷ್ಟ್ರಾಗಿ ಹುಟ್ಟೋದು ಬೇಡ’ -ಸಾ.ಶಿ.ಮ
*ದಿನೇಶ್ ಕೆ. ಕಾರ್ಯಪ್ಪ
‘ಓದೋದು ಬರೆಯೋದು ಬಿಟ್ಟರೆ ಬೇರೆ ಹವ್ಯಾಸಗಳಿಲ್ಲವಲ್ಲಾ ! ಟಿ.ವಿ. ಸೀರಿಯಲ್ ಹೆಚ್ಚು ನೋಡೋಲ್ಲ. ವಾರ್ತೆ, ಕ್ರಿಕೆಟ್, ಟೆನ್ನಿಸ್ ವೀಕ್ಷಿಸುತ್ತೇನೆ’ ಎಂದು ತಮ್ಮ ಟೈಂಪಾಸ್ ವಿವರ ನೀಡುತ್ತಾರೆ ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಡಾ. ಸಾ. ಶಿ. ಮರುಳಯ್ಯ.
‘ಬೆಳಗ್ಗೆ ಪಾರ್ಕ್ಗೆ ವಾಕಿಂಗ್ ಹೋಗುತ್ತೇನೆ. ನಂತರ ಕೇಳಿದವರಿಗೆ ಮಾರ್ಗದರ್ಶನ ಮಾಡುತ್ತೇನೆ. ಕನ್ನಡದಲ್ಲಿ ಐಎಎಸ್, ಕೆಎಎಸ್ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ಸಂಜೆ ಗೈಡ್ ಮಾಡುತ್ತೇನೆ. ಜಿಲ್ಲಾಧಿಕಾರಿಗಳಾಗಿರುವ ಶಿವರಾಂ, ಬಸವರಾಜು, ಕುಮಾರ್ ನಾಯಕ್ ಮತ್ತು ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಮಗಳು ವಿಜಯಲಕ್ಷ್ಮಿಗೆ ಗೈಡ್ ಮಾಡಿದ್ದೇನೆ. ನನ್ನಿಂದ ಮಾರ್ಗದರ್ಶನ ಪಡೆದವರಲ್ಲಿ ಇಪ್ಪತ್ತರಿಂದ ಇಪ್ಪತ್ತಮೂರು ಜನ ಆಯ್ಕೆಯಾಗಿದ್ದಾರೆ’ ಎಂದು ಮರುಳಯ್ಯ ಹೆಮ್ಮೆಯಿಂದ ಹೇಳುತ್ತಾರೆ.
‘ನಾಟಕಗಳನ್ನು ನೋಡುತ್ತೇನೆ. ಸಿನಿಮಾಗಳನ್ನು ಹೆಚ್ಚಿಗೆ ನೋಡೋಲ್ಲ. ಸಿನೆಮಾ ಥಿಯೇಟರ್ಗೆ ಹೋಗೋದು ಅಪರೂಪ ’ ಎನ್ನುತ್ತಾರೆ.
‘ಪುನರ್ಜನ್ಮ ಎನ್ನುವುದಿದ್ದರೆ ಮೇಷ್ಟ್ರಾಗಿ ಹುಟ್ಟೋದು ಬೇಡ ಅನ್ನೋದು ಮಾತ್ರ ನನ್ನ ಪ್ರಾರ್ಥನೆ. ಮೇಷ್ಟ್ರಾಗಿ ಒಳ್ಳೆ ಮಾರ್ಗದಲ್ಲಿ ನಡೆಯಲು ಉಪದೇಶ ಮಾಡುತ್ತೇವೆ. ನುಡಿಯುವುದೊಂದು ನಡೆಯುವುದೊಂದು ಎಂಬಂತಾಗಿದೆ. ಸದಾ ಆತ್ಮವಂಚನೆಯ ಸುಳಿಗೆ ಸಿಲುಕುತ್ತೇವೆ. ನಾವೇನು ಹರಿಶ್ಚಂದ್ರನ ಮಕ್ಕಳಾ ?! ’ ಎಂದು ಪ್ರಶ್ನಿಸುತ್ತಾರೆ.
‘ಮೇಷ್ಟ್ರಾಗಿ ಪಾಠ ಮಾಡೋದೇನೋ ಖುಷಿ ನೀಡುತ್ತೆ. ಸಮಾರಂಭಗಳಲ್ಲಿ ಭಾಷಣ ಮಾಡೋಕೆ ಮೇಷ್ಟ್ರನ್ನೇ ಕರೀತಾರೆ. ಭಾಷಣದ ಅವಧಿ ಜಾಸ್ತಿ, ಆಗಲ್ಲ ಅಂದ್ರೆ ಜನ ಬಿಡಲ್ಲ. ಹಿಂಸಿಸ್ತಾರೆ, ಆಕ್ಷೇಪಿಸ್ತಾರೆ. ಅನಿವಾರ್ಯವಾಗಿ ಗುಲ್ಪರ್ಗದಲ್ಲಿ ಮತ್ತೊಂದು ಪ್ರೋಗ್ರಾಂ ಇದೆ ಅಥವಾ ಮತ್ತೊಂದೆಡೆಗೆ ಹೋಗಬೇಕಾಗಿದೆ’ ಎಂದು ಸುಳ್ಳು ಹೇಳ್ಬೇಕಾಗುತ್ತದೆ ಎಂದವರು ಹೇಳುತ್ತಾರೆ.
‘ ಸದ್ಯಕ್ಕೆ ಆನ್ವಯಿಕ ಕಾವ್ಯ ಮೀಮಾಂಸೆ ಬರೆಯುತ್ತಿದ್ದೇನೆ. ಬಿಡುವು ದೊರೆತಾಗ ಮನೆಯಲ್ಲಿರುವ ಇಬ್ಬರು ಮೊಮ್ಮಕ್ಕಳೊಂದಿಗೆ ಆಟ ಆಡುತ್ತೇನೆ. ಇನ್ನಿಬ್ಬರು ಮೊಮ್ಮಕ್ಕಳು ಅಮೆರಿಕದಲ್ಲಿದ್ದಾರೆ’ ಎನ್ನುವ ಸಾ.ಶಿ.ಮ. ಅವರಿಗೆ ಸರಳ ಆಹಾರ ಇಷ್ಟವಂತೆ. ಚಪಾತಿ, ಅನ್ನ, ರಸಂ ಮೊಸರು ಇಷ್ಟಿದ್ದರೆ ಸಾಕು ಎನ್ನುತ್ತಾರೆ.
(ವಿಜಯ ಕರ್ನಾಟಕ )