ಬೆಳಗಾವಿ ಸಾಹಿತ್ಯ ಸಮ್ಮೇಳನದಿ ಶಿವರಾಮ ಕಾರಂತರ ಅಂಚೆಚೀಟಿ ?
ಉಡುಪಿ : ಶಿವರಾಮ ಕಾರಂತರ ಅಂಚೆಚೀಟಿಯನ್ನು ಪ್ರಕಟಿಸುವಂತೆ ಅಂಚೆ ಇಲಾಖೆಯ ಮೇಲೆ ಒತ್ತಡ ಹೇರುವ ಪ್ರಯತ್ನಗಳು ಮುಂದುವರಿದಿದ್ದು, 2003 ನೇ ಇಸವಿ ಫೆಬ್ರವರಿಯಲ್ಲಿ- ಬೆಳಗಾವಿಯಲ್ಲಿ ನಡೆಯುವ 70 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾರಂತರ ಅಂಚೆ ಚೀಟಿ ಬಿಡುಗಡೆಯಾಗುವ ವಿಶ್ವಾಸವನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹರಿಕೃಷ್ಣ ಪುನರೂರು ವ್ಯಕ್ತಪಡಿಸಿದ್ದಾರೆ.
ಕಾರಂತರ ಅಂಚೆ ಚೀಟಿ ಹೊರ ತರಲು ಖುದ್ದು ಆಸಕ್ತಿ ವಹಿಸುವುದಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ಭೇಟಿಯಾದ ಕೇಂದ್ರ ಸಂಪರ್ಕ ಖಾತೆ ಸಚಿವ ಪ್ರಮೋದ್ ಮಹಾಜನ್ ಅವರು ಭರವಸೆ ನೀಡಿದ್ದಾರೆ ಎಂದು ಹರಿಕೃಷ್ಣ ಪುನರೂರು ತಿಳಿಸಿದರು. ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶುಕ್ರವಾರ (ಸೆ.27) ನಡೆದ ಪರಿಷತ್ತಿನ 86 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಇದುವರೆಗೆ ಜಿಲ್ಲಾ ಸಮ್ಮೇಳನಗಳಿಗೆ ಮಾತ್ರ ಕೇಂದ್ರ ಕಸಾಪ 10 ಸಾವಿರ ರುಪಾಯಿಗಳನ್ನು ನೀಡುತ್ತಿದ್ದು, ಈಗ ತಾಲ್ಲೂಕು ಸಮ್ಮೇಳನಗಳಿಗೂ 5 ಸಾವಿರ ರುಪಾಯಿ ಸಹಾಯ ಧನ ನೀಡಲಾಗುತ್ತಿದೆ. ಲೆಕ್ಕ ನೀಡದ ಹಾಗೂ ಅಮೃತನಿಧಿ ಚೀಟಿಗಳ ಬಾಕಿ ಉಳಿಸಿಕೊಂಡ ಪದಾಧಿಕಾರಿಗಳಿಗೆ ನೋಟಿಸು ನೀಡಲಾಗಿದೆ ಎಂದು ಪುನರೂರು ತಿಳಿಸಿದರು.
2001-02 ನೇ ಸಾಲಿನ ಲೆಕ್ಕ ತನಿಖಾ ವರದಿ ಹಾಗೂ 2002-03 ನೇ ಸಾಲಿನ ಆಯವ್ಯಯ ಅಂದಾಜು ಪಟ್ಟಿಯನ್ನು ಪರಿಷತ್ತಿನ ಸರ್ವ ಸದಸ್ಯರ ಸಭೆ ಅಂಗೀಕರಿಸಿತು.
(ಇನ್ಫೋ ವಾರ್ತೆ)
ಪೂರಕ
ಓದಿಗೆ-
ಮುಖಪುಟ
/
ಸಾಹಿತ್ಯ
ಸೊಗಡು