‘ವಿಶ್ವಕೋಶ ಪ್ರಕಟಣೆಗೆ ವಿವಿಗಳು ಸಮಗ್ರ ಯೋಜನೆ ರೂಪಿಸಬೇಕು’
ಬೆಂಗಳೂರು: ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳೂ ಒಂದೊಂದು ವಿಷಯದ ಬಗ್ಗೆ ವಿಶ್ವಕೋಶವನ್ನು ಹೊರತರುವುದು ಅಗತ್ಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್. ಜೆ. ಲಕ್ಕಪ್ಪ ಗೌಡ ಅಭಿಪ್ರಾಯಪಟ್ಟಿದ್ದಾರೆ.
ಅವರು ಶನಿವಾರ ಕನ್ನಡ ವಿವಿ ಆಯೋಜಿಸಿದ್ದ ‘ಕನ್ನಡ ವಿವಿಯ ಚರಿತ್ರೆ ವಿಶ್ವಕೋಶ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದರು. ವಿಶ್ವಕೋಶ ಹೊರತರುವುದು ಕಷ್ಟದ ಕೆಲಸ. ಎಲ್ಲ ವಿವಿಗಳು ಒಟ್ಟಾಗಿ ಒಂದೊಂದು ವಿಶ್ವಕೋಶವನ್ನು ಪ್ರಕಟಿಸಲು ಐದು ವರ್ಷಗಳ ಯೋಜನೆ ರೂಪಿಸಬೇಕು. ಸಂಶೋಧನೆ ಮತ್ತು ಪ್ರಕಟಣೆಗಾಗಿ ಎಲ್ಲ ವಿವಿಗಳ ಸಮನ್ವಯ ಸಮಿತಿ ರಚಿಸಿಕೊಳ್ಳಬೇಕು. ಹೊಸ ಹೊಸ ಅಂಶಗಳನ್ನು ವಿಶ್ವಕೋಶಕ್ಕೆ ಸೇರಿಸುವ ಮೂಲಕ ವಿಶ್ವಕೋಶಗಳನ್ನು ಪರಿಷ್ಕರಿಸಬೇಕು ಎಂದು ಲಕ್ಕಪ್ಪ ಗೌಡ ಹೇಳಿದರು.
ಎಲ್ಲ ವಿವಿಗಳು ಜತೆಯಾಗಿ ಕಾರ್ಯನಿರ್ವಹಿಸದೇ ಇದ್ದರೆ ಖರ್ಚುಗಳು ಹೆಚ್ಚಾಗುತ್ತವೆ ಎಂದ ಕುಲಪತಿಗಳು ಕನ್ನಡ ವಿವಿ ಕೇವಲ ಕನ್ನಡ ಸಾಹಿತ್ಯಕ್ಕೆ ಮೀಸಲಾಗಿಲ್ಲ. ವಿಜ್ಞಾನ ಸೇರಿದಂತೆ ಜಗತ್ತಿನ ಎಲ್ಲ ಜ್ಞಾನವನ್ನು ಉಣಬಡಿಸುತ್ತದೆ ಎಂದರು. ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರು ವಿವಿಯ ಡಾ. ಎಂ. ಎಸ್. ತಿಮ್ಮಪ್ಪ , ಬೆಂಗಳೂರು ವಿವಿಯ ಆವರಣದಲ್ಲಿ ಹಂಪಿ ವಿವಿ ಕಚೇರಿ ತೆರೆಯಲು ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದರು.
(ಇನ್ಫೋ ವಾರ್ತೆ)