ಶರಣ ಸಾಹಿತ್ಯಮೇಳದ ಅಧ್ಯಕ್ಷರಾಗಿ ಎಂಎಂ.ಕಲಬುರ್ಗಿ
ಬೆಂಗಳೂರು: ಬಾಗಲಕೋಟೆಯಲ್ಲಿ 2003 ರ ಜನವರಿ ತಿಂಗಳಲ್ಲಿ ನಡೆಯುವ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಂಪಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಂ. ಎಂ. ಕಲಬುರ್ಗಿ ಅವರನ್ನು ಆಯ್ಕೆ ಮಾಡಲಾಗಿದೆ.
ಇದು ಏಳನೆಯ ಶರಣ ಸಮ್ಮೇಳನ. 2003ರ ಜನವರಿ 17ರಂದು ಆರಂಭವಾಗುವ ಮೇಳ ಮೂರು ದಿನಗಳ ಕಾಲ ನಡೆಯಲಿದೆ ಎಂದು ಶರಣ ಸಾಹಿತ್ಯ ಪರಿಷತ್ನ ಅಧ್ಯಕ್ಷ ಗೊ. ರು. ಚನ್ನಬಸಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಲಬುರ್ಗಿಯವರು ಮೂಲತಃ ಗುಬ್ಬೇವಾಡದವರು. ಹಿರಿಯ ಸಾಹಿತಿ, ಸಂಶೋಧಕರಾದ ಕಲಬುರ್ಗಿಯವರ ಸಾರಸ್ವತ ಸಾಧನೆಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಹಂಪಿ ವಿಶ್ವ ವಿದ್ಯಾಲಯದ ಕುಲಪತಿಗಳಾಗಿದ್ದಾಗ ಕಲಬುರ್ಗಿ ಅವರು ದೇಸೀ ಚಟುವಟಿಕೆಗಳ ಮುನ್ನಡೆಗೆ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಶರಣ ಮೇಳದಲ್ಲಿ ನೂರು ಮಂದಿ ವಿದ್ವಾಂಸರು ಭಾಗವಹಿಸುವರು. ಆಧುನಿಕ ವಚನ ಗೋಷ್ಠಿ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಮೇಳದಲ್ಲಿ ಆಯೋಜಿಸಲಾಗಿದೆ. ಆಂಧ್ರ, ಮಹಾರಾಷ್ಟ್ರ ಹಾಗೂ ಕೇರಳದಿಂದಲೂ ಪ್ರತಿನಿಧಿಗಳು ಈ ಮೇಳದಲ್ಲಿ ಭಾಗವಹಿಸುವರು. ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವವರು 50 ರೂಪಾಯಿ ಪ್ರತಿನಿಧಿ ಶುಲ್ಕ ನೀಡಬೇಕು.
(ಇನ್ಫೋ ವಾರ್ತೆ)