ಕನ್ನಡದ ಕಂಪಿಗೆ ಬೆನ್ನು ತೋರಿದ ಪದ್ಮಿನಿ ಪ್ರಾಡಕ್ಟ್ಸ್ ಅಗರಬತ್ತಿಗಳು
ಕನ್ನಡಕ್ಕೆ ಮಲತಾಯಿ ಧೋರಣೆ!
ಪಕ್ಷಪಾತ, ಅನ್ಯಾಯಗಳನ್ನು ಅರಗಿಸಿಕೊಂಡೇ ಉಳಿದು ಬೆಳೆದಿರುವ ಕನ್ನಡ ನುಡಿಗಾದ ಇನ್ನೊಂದು ಅನ್ಯಾಯದ ಉದಾಹರಣೆಯಿದು. ಈ ಬಾರಿ ಕನ್ನಡ ವಿರೋಧಿ ಸ್ಥಾನದಲ್ಲಿ ನಿಂತಿರುವುದು ಪದ್ಮಿನಿ ಪ್ರಾಡಕ್ಟ್ಸ್ನ ಸುವಾಸಿತ ಅಗರಬತ್ತಿ ತಯಾರಕರು.
ಪದ್ಮಿನಿ ಪ್ರಾಡಕ್ಟ್ಸ್ , 157, ಕೆ. ಕಾಮರಾಜ್ ರಸ್ತೆ , ಬೆಂಗಳೂರು- 560042 (www.padmini.com) ಈ ವಿಳಾಸದಲ್ಲಿ ತಯಾರಾಗುವ ಸುವಾಸಿತ ಅಗರಬತ್ತಿಗಳು (ಅಧ್ಯಾತ್ಮ ಮಾರ್ಗದರ್ಶಿ ಎನ್ನುವ ವಿಶೇಷಣದ) ಕನ್ನಡ ನೆಲದಲ್ಲಿ ತಯಾರಾದರೂ, ಈ ಉತ್ಪನ್ನಗಳ ಒಡೆಯರಿಗೆ ಕನ್ನಡದ ಬಗ್ಗೆ ಒಲವೇನೂ ಇಲ್ಲ . ಪರಿಣಾಮವಾಗಿ ಅಗರಬತ್ತಿ ಪೊಟ್ಟಣದ ಮೇಲೆ ಉತ್ಪನ್ನದ ಹೆಸರು ಬಹು ಭಾಷೆಗಳಲ್ಲಿ ಮುದ್ರಿತವಾಗಿದ್ದರೂ, ಅಲ್ಲಿ ಕನ್ನಡಕ್ಕೆ ಸ್ಥಾನವಿಲ್ಲ .
ಹಿಂದಿ, ನೆರೆಯ ತೆಲುಗು, ತಮಿಳು ಭಾಷೆಗಳಲ್ಲಿ ಅಗರಬತ್ತಿಯ ಹೆಸರು ಮುದ್ರಿತವಾಗಿದೆ. ಬೆಂಗಳೂರಿನಲ್ಲಿ ತಯಾರಾಗುವ ಅಗರಬತ್ತಿ ಹೆಸರು ಬೆಂಗಾಳಿಯಲ್ಲೂ ಮುದ್ರಿತವಾಗಿದೆ. ಆದರಿಲ್ಲಿ ಕನ್ನಡದ ಅಕ್ಕರ ಹುಡುಕಿದರೂ ಸಿಕ್ಕದು.
ಅಂದಹಾಗೆ, ಪದ್ಮಿನಿಯ ಕನ್ನಡ ಅಲಕ್ಷ್ಯ ಧೋರಣೆಯನ್ನು ಗಮನಿಸಿ ದಟ್ಸ್ಕನ್ನಡದ ಗಮನಕ್ಕೆ ತಂದವರು ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಅನಿವಾಸಿ ಕನ್ನಡಿಗ ಮಂಜುನಾಥ್ ಭಟ್. ಕನ್ನಡ ನುಡಿಗುಂಟಾಗಿರುವ ಕೊರೆ ಕನ್ನಡಿಗರೆಲ್ಲರ ಗಮನಕ್ಕೆ ಬಂದು, ಆ ಮೂಲಕ ಕನ್ನಡಕ್ಕೆ ನ್ಯಾಯ ಸಲ್ಲಲಿ ಎನ್ನುವುದು ಅವರ ಅಪೇಕ್ಷೆ . ನಮ್ಮ ಅಪೇಕ್ಷೆಯೂ ಅದೇ.