ರಾಜ್ಯಸಭೆಗೆ ಬುದ್ಧಿಜೀವಿಗಳೇ ಭೂಷಣ -ಡಾ.ಅನಂತಮೂರ್ತಿ ಉವಾಚ
ಬೆಂಗಳೂರು: ಬುದ್ಧಿ ಜೀವಿಗಳು ಮತ್ತು ಸಾಮಾಜಿಕ ಕಳಕಳಿ ಉಳ್ಳವರನ್ನು ವಿಧಾನ ಸಭೆ ಮತ್ತು ರಾಜ್ಯಸಭೆಗೆ ಆಯ್ಕೆ ಮಾಡಿದಲ್ಲಿ ತಪ್ಪು ನಿರ್ಧಾರಗಳು ಅನುಷ್ಠಾನವಾಗುವುದಿಲ್ಲ ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಯು.ಆರ್. ಅನಂತ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಅವರು ನಗರದಲ್ಲಿ ಭಾನುವಾರ ನಡೆದ ಪರಿಸರವಾದಿ ಯಲ್ಲಪ್ಪ ರೆಡ್ಡಿ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಮೇಲ್ಮನೆಗೆ ಅಭ್ಯರ್ಥಿಗಳ ಆಯ್ಕೆ ಮಾಡುವಾಗ ರಾಜಕೀಯ ದೃಷ್ಠಿಕೋನಗಳಿಗೆ ಒತ್ತು ನೀಡಬಾರದು. ಬದಲಾಗಿ ಪರಿಸರ, ಆರೋಗ್ಯ ಮತ್ತಿತರ ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ರಾಜ್ಯಸಭೆ ಮತ್ತು ವಿಧಾನ ಸಭೆಗೆ ನೇಮಕ ಮಾಡಬೇಕು. ಹಾಗಾದಾಗ ಮಾತ್ರ ಸಾಮಾಜಿಕ ಕಾರ್ಯಗಳು ಯಶಸ್ವಿಯಾಗಿ ಮತ್ತು ವೇಗವಾಗಿ ನಡೆಯುವುದು ಸಾಧ್ಯವಾಗುತ್ತದೆ ಎಂದು ಅನಂತಮೂರ್ತಿ ಹೇಳಿದರು.
ಜನರಿಂದ ನೇರವಾಗಿ ಗೆಲ್ಲಲಾಗದ ಧೀಮಂತ ವ್ಯಕ್ತಿಗಳು ನೇರವಾಗಿ ರಾಜ್ಯಸಭೆಗಳಿಗೆ ಹೋಗಲು ಅವಕಾಶ ಮಾಡಿಕೊಡಬೇಕು. ಇದರಿಂದ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳದೇ ಇರುವ ಸಾಮಾಜಿಕ ವ್ಯಕ್ತಿಗಳೂ ಜನಪ್ರತಿನಿಧಿಗಳಾಗುವುದು ಸಾಧ್ಯವಾಗುತ್ತದೆ ಎಂದು ಅನಂತಮೂರ್ತಿ ಸರಕಾರಕ್ಕೆ ಸಲಹೆ ಮಾಡಿದರು.
ಸಮಾಜದ ಬಗ್ಗೆ ಕಾಳಜಿ ಇರುವವರು ಮಾತ್ರ ಸರಕಾರದ ತಪ್ಪು ನಿರ್ಧಾರಗಳಿಗೆ ಕಡಿವಾಣ ಹಾಕಲು ಸಾಧ್ಯ. ಆದ್ದರಿಂದ ಸರಕಾರ ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕು ಎಂದ ಅನಂತ ಮೂರ್ತಿ ಪರಿಸರ ಮತ್ತು ಸಾಮಾಜಿಕ ಕಾರ್ಯಗಳನ್ನು ಜೊತೆ ಜೊತೆಯಾಗಿ ನಡೆಸಿಕೊಂಡು ಬಂದ ಯಲ್ಲಪ್ಪ ರೆಡ್ಡಿ ಅವರನ್ನು ಶ್ಲಾಘಿಸಿದರು.
(ಇನ್ಫೋ ವಾರ್ತೆ)