ಕನ್ನಡಿಗರಿಗೆ ಅಭಿಮಾನ ಶೂನ್ಯತೆಯ ನೊಬೆಲ್ !
ಬೆಂಗಳೂರು : ಅಭಿಮಾನ ಶೂನ್ಯತೆಗೆ ನೊಬೆಲ್ ಪ್ರಶಸ್ತಿಯೇನಾದರೂ ಕೊಡುವಂತಿದ್ದರೆ ಅದು ಕನ್ನಡಿಗರಿಗೇ ಸಲ್ಲಬೇಕು ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಗಾಯಕ ಶಿವಮೊಗ್ಗ ಸುಬ್ಬಣ್ಣ ವ್ಯಂಗ್ಯವಾಡಿದ್ದಾರೆ.
ನ್ಯಾಷನಲ್ ಇನ್ಷೂರೆನ್ಸ್ ಸಂಸ್ಥೆ ಶುಕ್ರವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಶಿವಮೊಗ್ಗ ಸುಬ್ಬಣ್ಣ ಕನ್ನಡದ ಬಗೆಗಿನ ಪ್ರೀತಿಯನ್ನು ನವಂಬರ್ಗೆ ಮಾತ್ರ ಮೀಸಲಿಡದೆ ವರ್ಷ ಪೂರ್ತಿ ಜೀವಂತವಾಗಿರಿಸಿಕೊಳ್ಳುವಂತೆ ಕನ್ನಡಿಗರಿಗೆ ಕರೆ ನೀಡಿದರು.
ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಬೇರೆ ಯಾವ ರಾಜ್ಯದಲ್ಲೂ ಈ ರೀತಿಯ ಉತ್ಸವ ಆಚರಿಸುವುದಿಲ್ಲ . ಕರ್ನಾಟಕದಲ್ಲಿ ಮಾತ್ರ ಕನ್ನಡಿಗರನ್ನು ಎಚ್ಚರಿಸಲು ನವಂಬರ್ನಲ್ಲಿ ರಾಜ್ಯೋತ್ಸವ ಆಚರಿಸಲಾಗುತ್ತದೆ ಎಂದು ವಿಷಾದಿಸಿದ ಸುಬ್ಬಣ್ಣ , ಅಭಿಮಾನ ಶೂನ್ಯತೆಗೆ ನೊಬೆಲ್ ಪ್ರಶಸ್ತಿ ಕೊಡುವುದಾದರೆ ಕನ್ನಡಿಗರಿಗೇ ಕೊಡಬೇಕು ಎಂದು ತೀಕ್ಷ್ಣವಾಗಿ ನುಡಿದರು.
ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಬೇಕಾದುದು ಕನ್ನಡಿಗರಾದ ನಮ್ಮೆಲ್ಲರ ಧರ್ಮ ಎಂದು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್ ಅಭಿಪ್ರಾಯಪಟ್ಟರು.
ನ್ಯಾಷನಲ್ ಇನ್ಷೂರೆನ್ಸ್ ಸಂಸ್ಥೆಯ ಬೆಂಗಳೂರು ಪ್ರಾಂತ್ಯದ ಅಸಿಸ್ಟೆಂಟ್ ಜನರಲ್ ಮೇನೇಜರ್ ಎಸ್.ಸೆನ್ಗುಪ್ತ ಕಾರ್ಯಕ್ರಮದಲ್ಲಿ ಹಾಜರಿದ್ದರು. ಕುವೆಂಪು ಹಾಗೂ ಶರೀಫರ ಗೀತೆಗಳನ್ನು ಹಾಡುವ ಮೂಲಕ ಶಿವಮೊಗ್ಗ ಸುಬ್ಬಣ್ಣ ಸಭಿಕರನ್ನು ರಂಜಿಸಿದರು.
(ಇನ್ಫೋ ವಾರ್ತೆ)