ಎಲ್.ಎಸ್.ಶೇಷಗಿರಿರಾಯರಿಗೆ ಪ್ರತಿಷ್ಠಿತ ಮಾಸ್ತಿ ಸಾಹಿತ್ಯ ಪ್ರಶಸ್ತಿ
ಬೆಂಗಳೂರು : ಹಿರಿಯ ವಿಮರ್ಶಕ ಹಾಗೂ ಕನ್ನಡ- ಇಂಗ್ಲೀಷ್ ಭಾಷೆಗಳಲ್ಲಿ ಅಪಾರ ಪ್ರಭುತ್ವ ಪಡೆದ ವಿದ್ವಾಂಸ ಪ್ರೊ। ಎಲ್.ಎಸ್.ಶೇಷಗಿರಿರಾವ್ 2002 ನೇ ಇಸವಿಯ ಪ್ರತಿಷ್ಠಿತ ಮಾಸ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಾಸ್ತಿ ಪ್ರಶಸ್ತಿ ದಶಮಾನೋತ್ಸವ ವರ್ಷದಲ್ಲಿ ಶೇಷಗಿರಿರಾವ್ ಅವರು ಈ ಪ್ರತಿಷ್ಠಿತ ಸಾಹಿತ್ಯಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದು , ಜೂನ್ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. 25 ಸಾವಿರ ರುಪಾಯಿ ನಗದು, ಮಾಸ್ತಿ ಸಂಸ್ಮರಣಾ ಫಲಕ ಹಾಗೂ ಸನ್ಮಾನವನ್ನು ಪ್ರಶಸ್ತಿ ಒಳಗೊಂಡಿದೆ.
ವಿಮರ್ಶೆ, ಭಾಷಾ ಸಾಹಿತ್ಯ, ಮಕ್ಕಳ ಸಾಹಿತ್ಯ, ನಾಟಕ, ಸಣ್ಣಕತೆ, ಅನುವಾದ, ಸಂಪಾದನೆ, ನಿಘಂಟು, ಜೀವನ ಚರಿತ್ರೆ ಮುಂತಾದ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಯನ್ನು ಗುರ್ತಿಸಿ ಶೇಷಗಿರಿರಾವ್ ಅವರನ್ನು ಮಾಸ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಸಮಿತಿಯ ಕಾರ್ಯದರ್ಶಿ ಗೀತಾ ರಾಮಾನುಜಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಹಿತ್ಯ ಮಾತ್ರವಲ್ಲದೆ ಕನ್ನಡ ಪರ ಹೋರಾಟಗಳಲ್ಲೂ ಶೇಷಗಿರಿರಾಯರು ತಮ್ಮನ್ನು ಗುರ್ತಿಸಿಕೊಂಡಿದ್ದಾರೆ. ಕನ್ನಡ ನಾಡು ನುಡಿಗೆ ಅನ್ಯಾಯವಾದಾಗಲೆಲ್ಲ ಅವರು ತಮ್ಮ ಸಾತ್ವಿಕ ಪ್ರತಿಭಟನೆಯ ದನಿ ಎತ್ತಿದ್ದಾರೆ. ಕಳೆದ ವರ್ಷವಷ್ಟೇ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತ್ತು .
ಮುಯ್ಯಿ, ಆಲಿವರ್ ಗೋಲ್ಡ್ ಸ್ಮಿತ್, ಮಾಸ್ತಿ ; ಸಾಹಿತ್ಯ-ಜೀವನ, ಹೊಸಗನ್ನಡ ಸಾಹಿತ್ಯ, ಸಾಹಿತ್ಯ ವಿಶ್ಲೇಷಣೆ, ಟಿ.ಪಿ.ಕೈಲಾಸಂ, ಇಂಗ್ಲೀಷ್ ಸಾಹಿತ್ಯ ಚರಿತ್ರೆ, ರವೀಂದ್ರನಾಥ ಠಾಗೋರ್, ಭಾರತದ ಸ್ವಾತಂತ್ರ್ಯ ಸಂಗ್ರಾಮ, ಗ್ರೀಕ್ ರಂಗಭೂಮಿ ಮತ್ತು ನಾಟಕ- ಶೇಷಗಿರಿರಾಯರ ಕೆಲವು ಪ್ರಸಿದ್ಧ ಕೃತಿಗಳು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಸಾಹಿತ್ಯ
ಸೊಗಡು