ರಂಗಭೂಮಿ ಪುನರುತ್ಥಾನಕ್ಕೆ ವಾಟಾಳ್ ಟೊಂಕ, ಜೂನ್ನಲ್ಲಿ ಮಹಾ ಸಮ್ಮೇಳನ
ಬೆಂಗಳೂರು : ಮಸುಕಾಗುತ್ತಿರುವ ರಂಗಭೂಮಿ ಸುಧಾರಣೆಗೆ ಸೂಕ್ತ ಮಾರ್ಗ ಚಿಂತನೆಯ ಸಲುವಾಗಿ ಜೂನ್ ತಿಂಗಳಲ್ಲಿ ವೃತ್ತಿ ರಂಗಭೂಮಿ ಕಲಾವಿದರ ಮಹಾ ಸಮ್ಮೇಳನ ನಡೆಸಲಾಗುವುದು ಎಂದು ಕನ್ನಡ ಚಳವಳಿ ಪಕ್ಷದ ನಾಯಕ ವಾಟಾಳ್ ನಾಗರಾಜ್ ಹೇಳಿದ್ದಾರೆ.
ತಮ್ಮ ಪಕ್ಷದ ವತಿಯಿಂದ ಹಿರಿಯ ರಂಗ ಕಲಾವಿದರನ್ನು ಬುಧವಾರ ಸನ್ಮಾನಿಸಿದ ಸಂದರ್ಭದಲ್ಲಿ ಅವರು ಮಾತಾಡುತ್ತಿದ್ದರು. ಹಿರಣ್ಣಯ್ಯ, ಚಾಮುಂಡೇಶ್ವರಿ, ಸುಬ್ಬಯ್ಯನಾಯ್ಡು, ಮಹಮ್ಮದ್ ಪೀರ್, ವರದಾಚಾರ್ ಮೊದಲಾದ ನಾಟಕ ಕಂಪನಿಗಳು ಮರೆಯಾಗುತ್ತಿವೆ. ಉತ್ತರ ಕರ್ನಾಟಕದ ಕೆಲವು ಕಡೆ ಮಾತ್ರ ನಾಟಕ ಕಂಪನಿಗಳು ಏದುಸಿರು ಬಿಡುತ್ತಿವೆ. ಹಳೇ ಮೈಸೂರು ಪ್ರಾಂತದಲ್ಲಿ ರಂಗಭೂಮಿ ಹೇಳ ಹೆಸರಿಲ್ಲದಂತಾಗಿದೆ. ಹೀಗಿದ್ದೂ ಸರ್ಕಾರ ಸುಮ್ಮನೆ ಕೂತಿದೆ ಎಂದು ವಾಟಾಳ್ ಟೀಕಿಸಿದರು.
ಹಳೆಯ ನಾಟಕ ಕಂಪನಿಯಾಂದಕ್ಕೆ ಪ್ರತಿವರ್ಷ 5 ಲಕ್ಷ ರುಪಾಯಿ ಸಹಾಯ ಧನ ಕೊಡಬೇಕು. ರಂಗಭೂಮಿ ಅಭಿವೃದ್ಧಿಗೆ 2 ಕೋಟಿ ರುಪಾಯಿ ಮೀಸಲಿಡಬೇಕು. ಪ್ರತಿಯಾಂದು ತಾಲ್ಲೂಕು ಕೇಂದ್ರದಲ್ಲಿ ರಂಗಮಂದಿರದ ನಿರ್ಮಾಣವಾಗಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಇದು ಕೇವಲ ಸನ್ಮಾನ ಸಮಾರಂಭವಲ್ಲ. ರಂಗಭೂಮಿ ಉಳಿಸುವ ಹೋರಾಟಕ್ಕೆ ನಾಂದಿಯಾಗಬೇಕು. ರಂಗ ಕಲಾವಿದರೆಲ್ಲಾ ಒಗ್ಗೂಡಿ, ರಂಗಭೂಮಿ ಪುನರುತ್ಥಾನಕ್ಕೆ ಟೊಂಕ ಕಟ್ಟಬೇಕು. ಹಿಂದೆ ರಾಜಕಾರಣಿಗಳ ಪಾತ್ರ ಮಾಡಿ ಮೆರೆದಿದ್ದ ಅನೇಕ ಕಲಾವಿದರು ಬೀದಿ ಪಾಲಾಗಿದ್ದಾರೆ. ಅವರ ಉಳಿವಿಗೆ ಶ್ರಮಿಸಬೇಕು ಎಂದು ವಾಟಾಳ್ ನಾಗರಾಜ್ ಕರೆ ಕೊಟ್ಟರು.
ನಾಟಕಕಾರ ಬಷೀರ್, ಹಾರ್ಮೋನಿಯಂ ವಾದಕ ಪರಮಶಿವನ್, ನಿರ್ದೇಶಕ- ನಟ ವಜ್ರಪ್ಪ, ರಂಗಸಜ್ಜಿಕೆ-ವಸ್ತ್ರಾಲಂಕಾರ ಕಲಾವಿದ ವೀರಭದ್ರಾಚಾರ್, ಕಲಾವಿದರಾದ ಆರ್.ನಾಗರತ್ನಮ್ಮ, ಸತ್ಯವತಿ, ಚಂದ್ರಮ್ಮ ಮೊದಲಾದವರನ್ನು ಸನ್ಮಾನಿಸಲಾಯಿತು.
(ಇನ್ಫೋ ವಾರ್ತೆ)