ಶಿಕ್ಷಕರು ಸಾಹಿತ್ಯ, ಸಂಸ್ಕೃತಿ ವಕ್ತಾರರಾಗಲಿ -ನಿಸರ್ಗಪ್ರಿಯ
ನೆಲಮಂಗಲ : ನೀರು, ನದಿ, ಹೂವುಗಳ ಹೆಸರುಗಳನ್ನು ಊರುಗಳಿಗೆ ನಾಮಕರಣ ಮಾಡುವ ಮೂಲಕ ಸಾಹಿತ್ಯ ಸಂಸ್ಕೃತಿಯನ್ನು ಜೀವಂತವಾಗಿರಿಸುವ ಪ್ರಯತ್ನ ಅನಾದಿ ಕಾಲದಿಂದಲೂ ನಡೆದುಬಂದಿದ್ದು, ಇತ್ತೀಚೆಗೆ ಈ ಸಂಪ್ರದಾಯ ನಶಿಸುತ್ತಿದೆ ಎಂದು ನಿಸರ್ಗಪ್ರಿಯರೆಂದೇ ಪ್ರಸಿದ್ಧರಾದ ಲೇಖಕ ಬಿ.ಸಿದ್ಧಗಂಗಯ್ಯ ಕಂಬಾಳು ವಿಷಾದಿಸಿದ್ದಾರೆ.
ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲುವಿನಲ್ಲಿ ಭಾನುವಾರ (ಡಿ.15) ನಡೆದ ಮೂರನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ನಿಸರ್ಗಪ್ರಿಯ ಮಾತನಾಡುತ್ತಿದ್ದರು.
ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಗೆ ಹೆಚ್ಚಿನ ಮಹತ್ವವಿದೆ ಎಂದು ಅಭಿಪ್ರಾಯಪಟ್ಟ ನಿಸರ್ಗಪ್ರಿಯ ಅವರು, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಮನಗಾಣಿಸುವ ಮೂಲಕರು ಶಿಕ್ಷಕರು ಸಂಸ್ಕೃತಿ ದಾಸೋಹದಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದರು.
ಕನ್ನಡಿಗರು ಉದಾರಿಗಳು, ನಿರಭಿಮಾನಿಗಳು. ಗಡಿ ಪ್ರದೇಶಗಳಲ್ಲಿ ಕನ್ನಡದ ಪ್ರದೇಶಗಳು ಹರಿದು ಹಂಚಿ ಹೋಗಿರುವುದರಿಂದ ವಿಶಾಲ ಕರ್ನಾಟಕ ಸಮಗ್ರವಾಗಿಲ್ಲ ಕನ್ನಡ ಉಳಿದಿರುವುದು ಗ್ರಾಮಗಳಲ್ಲಿ ಎಂದು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ರಂಗನಟ ಮಾಸ್ಟರ್ ಹಿರಣ್ಣಯ್ಯ ಹೇಳಿದರು. ಇದೇ ಸಂದರ್ಭದಲ್ಲಿ ಶಾಸಕ ಅಂಜನಮೂರ್ತಿ ಸಮ್ಮೇಳನದ ಸ್ಮರಣ ಸಂಚಿಕೆ ಮಂಗಳ ಗಂಗಾ ಬಿಡುಗಡೆ ಮಾಡಿದರು.
ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಡಾ।ಎಚ್.ಎಸ್.ಗೋಪಾಲರಾವ್, ಶಾಸಕ ಸಿ.ಚೆನ್ನಿಗಪ್ಪ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ರಾಜಾ ಶ್ರೀಕಂಠ ಶ್ರೇಷ್ಠಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸು.ತ.ರಾಮೇಗೌಡ ಸಮ್ಮೇಳನದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)