ಬರವಣಿಗೆಯಲ್ಲಿ ಇರಲಿ ಹೊಸ ಚಿಗುರು ಹಳೆ ಬೇರು : ಎಚ್ಚೆಸ್ಕೆ
ಗುಲ್ಬರ್ಗಾ : ಸುಮ್ಮನೆ ಜೀನು ಹಾಕಿದ ಕುದುರೆಗಳಂತೆ ದಂತದ ಮನೆಯಲ್ಲಿ ಬರವಣಿಗೆಗೆ ಕೂರೋದು ಸರಿಯಲ್ಲ. ಸುತ್ತಣ ಆಗುಹೋಗುಗಳ ಒಳನೋಟವನ್ನು ತಿಳಿದು ಬರೆಯಬೇಕು ಎಂದು ಯುವ ಬರಹಗಾರರಿಗೆ ಖ್ಯಾತ ಅಂಕಣಕಾರ ಎಚ್.ಎಸ್.ಕೃಷ್ಣಸ್ವಾಮಿ ಅಯ್ಯಂಗಾರ್ ಕಿವಿ ಮಾತು ಹೇಳಿದರು.
ಹೈದರಾಬಾದ್ ಕರ್ನಾಟಕದ ಜಿಲ್ಲೆಗಳ ಯುವ ಬರಹಗಾರರಿಗಾಗಿ ಆಯೋಜಿತವಾಗಿರುವ ಎರಡು ದಿನಗಳ ಕಾಲದ ಕಮ್ಮಟವನ್ನು ಉದ್ಘಾಟಿಸಿ, ಶನಿವಾರ ಅವರು ಮಾತಾಡುತ್ತಿದ್ದರು. ಈ ಒಳ್ಳೆಯ ಕಮ್ಮಟವನ್ನು ಉದಯೋನ್ಮುಖ ಯುವ ಬರಹಗಾರರ ಬಳಗವು ಕರ್ನಾಟಕ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ 60ನೇ ಹುಟ್ಟುಹಬ್ಬದ ಆಚರಣೆ ಸಲುವಾಗಿ ಆಯೋಜಿಸಿದೆ.
ಸುತ್ತಲ ಪರಿಸರದ ಸಕಲ ವಿಷಯಗಳ ಪರಿಚಯವಿದ್ದಾಗ ಮಾತ್ರ ಸಾಹಿತ್ಯದಲ್ಲಿ ಸೃಜನಶೀಲತೆ ಸ್ಖಲಿಸುತ್ತದೆ. ಪ್ರಚಲಿತ ವಿದ್ಯಮಾನಗಳನ್ನು ಅರಿತುಕೊಂಡು, ಅವುಗಳ ಬಗ್ಗೆ ಜನರೊಡನೆ ಮಾತಾಡಬೇಕು. ಹಳೆಯ ಮೌಲ್ಯಗಳಿಗೆ ಬೆಲೆ ಕೊಟ್ಟು, ಹೊಸ ವಿಚಾರಗಳ ಆಳ ಮೊಗೆದುಕೊಂಡಾಗ ಮಾತ್ರ ಬರವಣಿಗೆ ಗಟ್ಟಿಯಾಗುತ್ತದೆ. ಅಂತಹ ಬರವಣಿಗೆಗೆ ಯುವಕರು ತೊಡಗಬೇಕು ಎಂದು ಎಚ್ಚೆಸ್ಕೆ ಕರೆ ಕೊಟ್ಟರು.
ಜನರ ಮಿದುಳಿಗೆ ಕಸರತ್ತು ಕೊಡಬಲ್ಲ, ವಿಚಾರಗಳನ್ನು ಒರೆಗೆ ಹಚ್ಚುವಂತೆ ಪ್ರೇರೇಪಿಸಬಲ್ಲ, ಸರಿದಾರಿಯಲ್ಲಿ ನಡೆಯುವಂತೆ ಮಾಡಬಲ್ಲ ಕೆಲಸವನ್ನು ಸಾಹಿತ್ಯ ಮಾಡಿದಾಗ ಮಾತ್ರ ಅದಕ್ಕೆ ಪೂರ್ಣ ಅರ್ಥವಿರುತ್ತದೆ. ಒಬ್ಬನ ಮೆರಿಟ್ ಅಥವಾ ಆತನ ಬೌದ್ಧಿಕತೆಯ ಮಟ್ಟದ ಪ್ರದರ್ಶನ ಸೃಜನಶೀಲತೆ ಎನಿಸಿಕೊಳ್ಳುವುದಿಲ್ಲ. ಸಾಮಾಜಿಕ ಕಳಕಳಿ ಇಟ್ಟುಕೊಂಡು ಹೃದಯದ ಮೂಸೆಯಿಂದ ಹೊಮ್ಮುವ ಬರವಣಿಗೆಯೇ ಸೃಜನಶೀಲ ಸಾಹಿತ್ಯ ಎಂದು ಎಚ್ಚೆಸ್ಕೆ ಅಭಿಪ್ರಾಯ ಪಟ್ಟರು.
(ಇನ್ಫೋ ವಾರ್ತೆ)