ಚಲಂ ಕುಲಂ ಎಂದ ಪಂಪನಿಗೆ ಶುಭಕಾಲ ಬಂದೈತೆ
ಬೆಂಗಳೂರು : ಕನ್ನಡಿಗರ ಮನಸ್ಸಿನಿಂದ ಅಳಿಸಿಹೋಗುತ್ತಿರುವ ಆದಿ ಕವಿ ಪಂಪನ ನೆನಪನ್ನು ಜನಮನದಲ್ಲಿ ಮತ್ತೆ ನೆಲೆಗೊಳಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಈ ಬಾರಿ ಪಂಪ ಕವಿಯ 1100ನೇ ಜನ್ಮ ವರ್ಷ. ಆ ಪ್ರಯುಕ್ತ ನವೆಂಬರ್ 12ರಿಂದ ಒಂದು ವರ್ಷ ಪೂರ್ತಿ ಪಂಪ ಉತ್ಸವವನ್ನು ಆಚರಿಸಲು ಕನ್ನಡ ಸಂಸ್ಕೃತಿ ಇಲಾಖೆ ನಿರ್ಧರಿಸಿದೆ.
ರಾಜ್ಯದ ವಿಶ್ವ ವಿದ್ಯಾಲಯಗಳಲ್ಲಿ ಪಂಪನ ಕುರಿತ ವಿಚಾರ ಸಂಕಿರಣಗಳನ್ನು ಆಯೋಜಿಸಲು ಈಗಾಗಲೇ 1 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ. ಹಣ ಬಿಡುಗಡೆ ಮಾಡುವುದು ದೊಡ್ಡ ಮಾತಲ್ಲ. ಆದರೆ ಎಲ್ಲ ಉತ್ಸವ ಆಚರಣೆಗಳ ನಂತರ ಜನರಿಗೆ ಪಂಪನೆಂದರೆ ಯಾರೆಂದು ತಿಳಿಯಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಸಿ. ಸೋಮಶೇಖರ ತಮ್ಮ ಕಾರ್ಯಕ್ರಮಗಳ ಉದ್ದೇಶವನ್ನು ಬಣ್ಣಿಸುತ್ತಾರೆ.
10ನೇ ಶತಮಾನದಲ್ಲಿ ಬದುಕಿದ ಪಂಪ ಕುಲಂ ಕುಲಮಾಳ್ತು, ಚಲಂ ಕುಲಂ... ಎಂಬ ಜಾತ್ಯತೀತ ಸಾರ್ವಕಾಲಿಕ ಮೌಲ್ಯಗಳನ್ನು ಕಾವ್ಯದಲ್ಲಿ ಪ್ರತಿಪಾದಿಸಿದ ಕವಿ ಇವತ್ತಿಗೂ ಸ್ಮರಣಾರ್ಹ. ಪ್ರಸ್ತುತ. ಆತ ಚಾಲುಕ್ಯ ವಂಶದ ಎರಡನೆ ಅರಿಕೇಸರಿಯ ಆಸ್ಥಾನ ಕವಿ.ಪಂಪನ ಕಾವ್ಯ ಹಳಗನ್ನಡದಲ್ಲಿ ಇರುವುದರಿಂದ ಇಂದಿನ ಜನತೆಗೆ ಆತನ ಕಾವ್ಯ ಕಬ್ಬಿಣದ ಕಡಲೆಯಾಗಿದೆ. ಪಂಪನ ಕೃತಿಗಳಾದ ಆದಿ ಪುರಾಣ ಮತ್ತು ವಿಕ್ರಮಾರ್ಜುನ ವಿಜಯಂ ಪ್ರದರ್ಶನವನ್ನು ಈ ವರ್ಷ ಏರ್ಪಡಿಸಲಾಗುವುದು. ಆತನ ಕೃತಿಗಳ ಇಂಗ್ಲಿಷ್ ಅನುವಾದವನ್ನು ಮರು ಪ್ರಕಾಶನ ಮಾಡಲಾಗುವುದು. ಪಂಪ ಕಾವ್ಯವನ್ನು ಆಧರಿಸಿ ನತ್ಯ ನಾಟಕವನ್ನು ನಿರ್ದೇಶಿಸುವ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದು ಸೋಮಶೇಖರ್ ಹೇಳುತ್ತಾರೆ. (ಇನ್ಫೋ ವಾರ್ತೆ)
ಪೂರಕ
ಓದಿಗೆ-
ಮುಖಪುಟ
/
ಸಾಹಿತ್ಯ
ಸೊಗಡು