ಪ್ರಶಸ್ತಿಗಾಗಿ ದುಂಬಾಲು ಬೀಳುವುದುನಾಚಿಗೇಡಿನ ವಿಷಯ -ಚಂಪಾ
ಪಕ್ಕದ ಮನೆಯವರು ಕಾರು ಕೊಂಡರೆ ತಾನೂ ಕೊಳ್ಳಬೇಕು ಎಂಬ ಆಸೆ ಯಾರಿಗಿಲ್ಲ ! ಆದರೆ ಇಂತಹುದೇ ಆಸೆ ಪ್ರಶಸ್ತಿಗಳಿಗೂ ಅನ್ವಯವಾದರೆ ಹೇಗೆ..? ಪ್ರಶಸ್ತಿಗಳಿಗಾಗಿ ದುಂಬಾಲು ಬೀಳುವ ಪ್ರವೃತ್ತಿಯಿಂದ ಪ್ರಶಸ್ತಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇದರಿಂದ ಪ್ರಶಸ್ತಿಗಳ ಮೌಲ್ಯ ಕುಸಿಯುತ್ತದೆ ಎಂದು ಸಾಹಿತಿ ಚಂದ್ರಶೇಖರ್ ಪಾಟೀಲ್ ವಿಷಾದಿಸಿದ್ದಾರೆ.
ಭಾನುವಾರ ಅತ್ತಿಮಬ್ಬೆ ಪ್ರತಿಷ್ಠಾನ ಟ್ರಸ್ಟ್ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಪ್ರಶಸ್ತಿ ಪಡೆಯುವುದನ್ನು ಉದ್ದೇಶವನ್ನಾಗಿರಿಸಿಕೊಂಡು ಕೆಲಸ ಮಾಡುವುದು ಸರಿಯಲ್ಲ. ಪ್ರಶಸ್ತಿಯನ್ನು ಪಡೆಯುವ ಮತ್ತು ಪ್ರಶಸ್ತಿಯನ್ನು ಹೊಡೆಯುವ ಪ್ರವೃತ್ತಿ ಶೋಭೆ ತರುವಂತಹುದಲ್ಲ ಎಂದು ಚಂಪಾ ಪ್ರಶಸ್ತಿಗಾಗಿ ಆಸೆಪಡುವವರಿಗೆ ಕಿವಿಮಾತು ಹೇಳಿದರು.
ನನಗೊಂದು ಪ್ರಶಸ್ತಿ ಕೊಡಿಸಿ ಎಂದು ದುಂಬಾಲು ಬೀಳುವುದು ನಾಚಿಕೆಗೇಡಿನ ವಿಷಯ. ಪ್ರಶಸ್ತಿಗೆ ಹೆಚ್ಚಿನ ಗೌರವ ತಂದುಕೊಡುವ ಕೆಲಸ ಮಾಡಬೇಕು ಎಂದು ಚಂಪಾ ಸಲಹೆ ಮಾಡಿದರು. ಕಾರ್ಯಕ್ರಮದಲ್ಲಿ ಜಾನಪದ ತಜ್ಞ ಡಾ. ಎಂ. ಜಯಚಂದ್ರ ಅವರಿಗೆ ರನ್ನ ಸಾಹಿತ್ಯ ಪ್ರಶಸ್ತಿ ಮತ್ತು ಜಯಾರಾಜಶೇಖರ್ ಅವರಿಗೆ ಅತ್ತಿಮಬ್ಬೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
(ಇನ್ಫೋ ವಾರ್ತೆ)