ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಯಕ್ಷಗಾನ ಕಲಾವಿದ ರಾಮ ಗಾಣಿಗರ ಜನ್ಮ ಶತಾಬ್ಧಿ

By Staff
|
Google Oneindia Kannada News

ನವದೆಹಲಿ : ಬಡಗುತಿಟ್ಟು ಯಕ್ಷಗಾನಕ್ಕೆ ಹೊಸ ವೇಗ ದಕ್ಕಿಸಿಕೊಟ್ಟ ಹಾರಾಡಿ ರಾಮ ಗಾಣಿಗರ ಜನ್ಮ ಶತಮಾನೋತ್ಸವವನ್ನು ಅನೇಕ ಸಾಹಿತಿಗಳು, ಕಲಾವಿದರು ಹಾಗೂ ಕಲಾಸಕ್ತರ ಸಮ್ಮುಖದಲ್ಲಿ ಜೂನ್‌ 3ರಂದು ಅದ್ಧೂರಿಯಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದೆಹಲಿ ಕನ್ನಡಿಗ ಪತ್ರಿಕೆ ಸಂಪಾದಕ ಬಾ.ಸಾಮಗ ಹಾರಾಡಿಯವರ ಪ್ರತಿಭೆಯನ್ನು ನೆನಪಿಸಿಕೊಂಡದ್ದು ಹೀಗೆ- 1964ರಲ್ಲಿ ಹಾರಾಡಿ ರಾಮ ಗಾಣಿಗರು ಯಕ್ಷಗಾನಕ್ಕೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದರು. ಆ ಮೂಲಕ ಕರಾವಳಿಯ ಈ ಜಾನಪದ ಕಲೆಗೆ ಮೊದಲ ಬಾರಿಗೆ ಕೇಂದ್ರದ ಮಾನ್ಯತೆ ಸಿಗುವಂತಾಯಿತು. ಮಂದರ್ತಿ ಮೊದಲಾದ ಮೇಳಗಳಲ್ಲಿ ಕರ್ಣ, ಭೀಷ್ಮ, ಅರ್ಜುನ ಮುಂತಾದ ಪಾತ್ರಗಳಲ್ಲಿ ಮುಂಡಾಸು ವೇಷಧಾರಿಯಾಗಿ ಹಾಗೂ ತಮ್ಮ ಪರಂಪರಾಗತ ನೃತ್ಯ ಶೈಲಿಯಿಂದ ಯಕ್ಷಗಾನ ಕಲೆಗೇ ಹೊಸ ಆಯಾಮ ದಕ್ಕಿಸಿಕೊಟ್ಟರು.

ಬರುವ ನವೆಂಬರ್‌ ತಿಂಗಳಲ್ಲಿ ಹಾರಾಡಿಯವರ ನೆನಪಿಗಾಗಿ ದೆಹಲಿಯಲ್ಲಿ ಯಕ್ಷಗಾನ ಉತ್ಸವ ಸಪ್ತಾಹ ನಡೆಸುವುದರ ಜೊತೆಗೆ, ಅವರ ಸ್ಮರಣಾರ್ಥ ಯಕ್ಷಗಾನ ಕಲಾವಿದರೊಬ್ಬರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಸಾಮಗ ಪ್ರಕಟಿಸಿದರು.

ರಂಗಸ್ಥಳದ ರಾಜ : ಕಲಾ ಪಾರಂಗತರಾಗಿ ಎರಡನೇ ವೇಷಧಾರಿಯಾಗಿ ರಂಗಸ್ಥಳದ ರಾಜನೆಂದು ಜನಮನ್ನಣೆ ಗಿಟ್ಟಿಸಿದ ಹಾರಾಡಿ ರಾಮ ಗಾಣಿಗರು 14ನೇ ವಯಸ್ಸಿನಿಂದಲೇ ಯಕ್ಷಗಾನಕ್ಕೆ ಕಾಲಿಟ್ಟು ಹಂತಹಂತವಾಗಿ ಯಶಸ್ಸಿನ ಏಣಿ ಏರಿದವರು. ಕೇಂದ್ರ ಸರ್ಕಾರ ಯಕ್ಷಗಾನ ಕಲೆಯನ್ನು ಬೆಂಬಲಿಸಲು ಪ್ರದರ್ಶನಗಳನ್ನು ಆಯೋಜಿಸುವುದರ ಮೂಲಕ ರಾಷ್ಟ್ರ ವ್ಯಾಪಿ ಪ್ರಚಾರ ಮಾಡಬೇಕು ಎಂದು ಹಿರಿಯ ಕನ್ನಡ ಕಾರ್ಯಕರ್ತ ಡಾ.ರಾಮಕೃಷ್ಣ ವೈಲಾಯ ಆಗ್ರಹಿಸಿದರು.

ಯಕ್ಷಗಾನ ಕಲಾವಿದರಿಗೆ ಭದ್ರತೆ ಕೊಡಿ : ಬಡತನವಿದ್ದರೂ ಯಕ್ಷಗಾನ ಕಲೆಗಾಗಿ ಜೀವನ ಪರ್ಯಂತ ಸೇವೆಗೈದ ಗಾಣಿಗರ ಸಾಧನೆಯನ್ನು ಕೊಂಡಾಡಿದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಜನರಲ್‌ ಮ್ಯಾನೇಜರ್‌ ಕೆ.ಎನ್‌.ಪೃಥ್ವಿರಾಜ್‌, ಯಕ್ಷಗಾನ ಕಲಾವಿದರಿಗೆ ಆರ್ಥಿಕ ಭದ್ರತೆ ಒದಗಿಸಿದರೆ, ಈ ಕಲೆ ಇನ್ನಷ್ಟು ಹೊಳಹು ಕಾಣಬಹುದು ಎಂದರು.

ಸ್ವಪ್ರತಿಭೆಯಿಂದ ಯಕ್ಷಗಾನದಲ್ಲಿ ಶಾಶ್ವತ ಸ್ಥಾನ ಪಡೆದವರು ಗಾಣಿಗರು. ಇವತ್ತಿನ ಪರಿಸ್ಥಿತಿಯಲ್ಲಿ ಸರಿಯಾದ ಶಿಕ್ಷಣ ನೀಡಿಯೇ ಯಕ್ಷಗಾನವನ್ನು ಬೆಳೆಸಬೇಕು ಎಂದು ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ. ಎ. ರಮೇಶ ರಾವ್‌ ಅಭಿಪ್ರಾಯಪಟ್ಟರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಲಾವಿದೆ ವಸಂತಿಗಾಂಧಿ ಗಾಣಿಗರ ಜೊತೆ ಮೇಳದಲ್ಲಿ ತಾವು ಕಳೆದ ಗಳಿಗೆಗಳನ್ನು ಮೆಲುಕು ಹಾಕಿದರು. ಎಲ್ಲ ಕಲಾವಿದ ಹಾಗೂ ಹಿಮ್ಮೇಳದವರ ನಡುವೆ ಸೌಹಾರ್ದ ಬಾಂಧವ್ಯ ಬೆಳೆಸುತ್ತಿದ್ದ ಗಾಣಿಗರಿಂದ ಇಡೀ ಪ್ರದರ್ಶನ ಜನಮೆಚ್ಚುಗೆಗೆ ಪಾತ್ರವಾಗುತ್ತಿತ್ತು. ಹೆಂಗಸರೂ ಸೇರಿದಂತೆ ಎಲ್ಲ ವರ್ಗದವರೂ ಗಾಣಿಗರ ಸೇವೆಯಿಂದ ಸ್ಫೂರ್ತಿ ಪಡೆದು, ಯಕ್ಷಗಾನವನ್ನು ವಿಶ್ವದ ಅದ್ವಿತೀಯ ಕಲೆ ಯಾಗಿಸಬೇಕು ಎಂದು ಕರೆ ಕೊಟ್ಟರು.

ಇದೇ ಸಂದರ್ಭದಲ್ಲಿ ರಾಮ ಗಾಣಿಗರಿಗೆ ಸಂಬಂಧಿಸಿದ ಹಾಗೂ ಯಕ್ಷಗಾನದ ಚಿತ್ರ ಮತ್ತು ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X