ಜಗತ್ತೊಂದು ಹೊಟೇಲು, ಬಿಲ್ಲು ಕೊಟ್ಟು ಹೋಗುವ ಕಾಲ ಬಂದಿದೆ-ಹಿರಣ್ಣಯ್ಯ
ಬೆಂಗಳೂರು : ‘ಕೀರ್ತಿಯ ಮೂರು ಪಾಲಿನಲ್ಲಿ ಒಂದು ನನ್ನನ್ನು ಸಹಿಸಿಕೊಂಡ ಅನ್ನದಾತರಿಗೆ. ಎರಡನೇ ಬಾಗ ಪೋಷಿಸಿದ ಮಾಧ್ಯಮಗಳಿಗೆ. ಮೂರನೇ ಪಾಲು ಭ್ರಷ್ಟ ಹಾಗೂ ಲಂಚಕೋರರನ್ನು ಸರಬರಾಜು ಮಾಡಿದ ಕಾರ್ಯಾಂಗಕ್ಕೆ’.
ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ಸನ್ಮಾನಿತರಾದ ಮಾಸ್ಟರ್ ಹಿರಣ್ಣಯ್ಯ ಹೇಳಿದ ಈ ಪರಿಯ ಧನ್ಯವಾದಕ್ಕೆ ಪಟಪಟ ಕರತಾಡನ. ಬಣ್ಣದ ಬದುಕಿನ ಸುವರ್ಣೋತ್ಸವದ ಪ್ರಯುಕ್ತ ಹಿರಣ್ಣಯ್ಯ ದಂಪತಿಗಳಿಗೆ ಸನ್ಮಾನ. ಗೌರವ ಕೊಟ್ಟಿದ್ದು ಭಾಗವತರು ಎಂಬ ಸಾಂಸ್ಕೃತಿಕ ಸಂಘಟನೆ.
ಹಿರಣ್ಣಯ್ಯನವರ ಮೊನಚು ಮಾತು. ನಡುನಡುವೆ ಅಭಿಮಾನಿಗಳ ಕರತಾಡನದ ಬೆಂಬಲ. ಕೆಲವು ನಿಮಿಷಗಳ ಮುಫತ್ತು ರಂಜನೆ.
ಹಿರಣ್ಣ-ಯ್ಯನವರ ಮಾತುಗಳಲ್ಲೇ ಕೇಳಿ....
ನಮ್ಮಪ್ಪ ಹಿರಣ್ಣಯ್ಯ ದೈಹಿಕವಾಗಿ ಸತ್ತ ದಿನವೇ ನರಸಿಂಹಮೂರ್ತಿಯಾದ ನಾನೂ ಸತ್ತೆ. ಮಾತು ಬಯಸಿದ್ದ ಅಪ್ಪ ನನ್ನಲ್ಲಿ ಸೇರಿಕೊಂಡರು. ಹಿರಣ್ಣಯ್ಯ ಅಂದರೆ ಮಾತ್ರ ನಾಟಕಕ್ಕೆ ಜನ ಸೇರೋದು. ನರಸಿಂಹಮೂರ್ತಿ ಅಂದ್ರೆ ತಿರುಗಿ ಕೂಡ ನೋಡೋಲ್ಲ. ಜನ ಇರಲಿ ಸ್ವಾಮಿ, ನನ್ನ ಹೆಂಡತಿಯೇ ಬಾಗಿಲು ತೆಗೆಯೋಲ್ಲ :)
ಭ್ರಷ್ಟರು, ಲಂಚಕೋರರು ಇಲ್ಲದೇ ಹೋಗಿದ್ರೆ ಲಂಚಾವತಾರ, ಭ್ರಷ್ಟಾಚಾರ ನಾಟಕಗಳು ಹೇಗೆ ಸೃಷ್ಟಿಯಾಗುತ್ತಿದ್ದವು, ಹೇಳಿ? ರಾಜಕಾರಣದ ಭ್ರಷ್ಟಾಚಾರ ಖಂಡಿಸಲೆಂದೇ ನಾಮಕರಣಕೊಂಡ ನಾನು ಸೆಲೆಕ್ಟೆಡ್ ಸದಸ್ಯ, ಎಲೆಕ್ಟೆಡ್ ಅಲ್ಲ. ಅಕಸ್ಮಾತ್ ಭ್ರಷ್ಟಾಚಾರ ರಹಿತ ವ್ಯವಸ್ಥೆ ಬಂದರೆ ಅದನ್ನು ಪೌರಾಣಿಕ ನಾಟಕವಾಗಿ ಆಡ್ತೀನಿ :)
ಜಗತ್ತು ಒಂದು ಹೊಟೇಲು. ಇಲ್ಲಿ ಮಾಡಿದ್ದ ರೂಮು ಬಿಟ್ಟು, ಬಿಲ್ ಸಲ್ಲಿಸಿ ಹೊರಡೋ ಕಾಲ ಬಂದಿದೆ. ಇಬ್ಬರೂ ಒಟ್ಟಿಗೆ ಹೋಗೋದು ನಮ್ಮ (ತಮ್ಮ ಹಾಗೂ ಹೆಂಡತಿಯ) ಬೇಡಿಕೆ. ರಂಗಭೂಮಿಯ ಕೈ ಬಿಡಬೇಡಿ. ಉಳಿದ ಮಾಧ್ಯಮಗಳೂ ಅಕ್ಕ- ತಂಗಿ ಎಂಬ ಹಿರಣ್ಣಯ್ಯನವರ ಗಂಭೀರವಾದ ಮಾತುಗಳಿಗೆ ಸಭೆ ಕ್ಷಣ ಕಾಲ ಮೌನ.
ನಾನು ಪ್ರತಿಪಕ್ಷದ ತಾತ್ಕಾಲಿಕ ನಾಯಕ. ಹಿರಣ್ಣಯ್ಯನವರು ಪ್ರತಿಪಕ್ಷದ ಕಾಯಂ ನಾಯಕ. ನಾನು ನಾಯಕ ಪಟ್ಟ ಕಳೆದುಕೊಂಡರೂ, ಹಿರಣ್ಣಯ್ಯನವರು ಮೊದಲಿಂದಲೂ ಅದೇ ಸ್ಥಾನದಲ್ಲಿದ್ದಾರೆ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಕೆ.ಎಚ್.ಶ್ರೀನಿವಾಸ್ ಶ್ಲಾಘಿಸಿದರು.
ವಾರ್ತಾ ಇಲಾಖೆ ನಿರ್ದೇಶಕ ಡಾ.ಡಿ.ವಿ.ಗುರುಪ್ರಸಾದ್, ಶಾಂತಾ ಹಿರಣ್ಣಯ್ಯ, ಭಾಗವತರು ಸಂಸ್ಥೆಯ ರೇವಣ್ಣ, ಎ.ಪಿ.ಕಾಂತ, ಸಂಘಟಕ ನಾಗರಾಜ ಮೂರ್ತಿ ಮೊದಲಾದವರು ಸಮಾರಂಭದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚ-ಯ
ಮುಖಪುಟ
/
ಸಾಹಿತ್ಯ
ಸೊಗಡು