ಕನ್ನಡ ರಂಗಭೂಮಿಯ ಹಿರಿಯ ರಂಗತಜ್ಞ ಬಿ.ವಿ. ಕಾರಂತ್ ನಿಧನ
ಬೆಂಗಳೂರು: ಕನ್ನಡ ರಂಗಭೂಮಿಯಲ್ಲಿ ಹೊಸ ಸಂಚಲನೆ ಮೂಡಿಸಿದ್ದ ಕನ್ನಡದ ಖ್ಯಾತಿಯನ್ನು ಅಖಿಲ ಭಾರತ ಮಟ್ಟಕ್ಕೆ ಏರಿಸಿದ್ದ ಹಿರಿಯ ರಂಗ ಕರ್ಮಿ ಬಿ. ವಿ. ಕಾರಂತರು ಭಾನುವಾರ ರಾತ್ರಿ ನಿಧನರಾದರು.
74 ವರ್ಷ ವಯಸ್ಸಿನ ಬಾಬುಕೋಡಿ ವೆಂಕಟರಮಣ ಕಾರಂತರು, ಪ್ರಸಿದ್ಧ ನಿರ್ದೇಶಕಿ ಪ್ರೇಮಾ ಕಾರಂತ್ ಅವರನ್ನು ಅಗಲಿದ್ದಾರೆ. ರಂಗಭೂಮಿ ಹಾಗೂ ಚಲನಚಿತ್ರ ರಂಗಕ್ಕೆ ಸೃಜನಾತ್ಮಕ ಸಂಪರ್ಕವನ್ನು ಸ್ಥಾಪಿಸುವುದರಲ್ಲಿ ಕಾರಂತರು ಪ್ರಮುಖ ಪಾತ್ರ ವಹಿಸಿದ್ದರು. ಮೈಸೂರಿನಲ್ಲಿ ರಂಗಾಯಣವನ್ನು ಸ್ಥಾಪಿಸಿ ಕನ್ನಡ ರಂಗಭೂಮಿ ಕಲಾವಿದರಿಗೆ ಒಂದು ವೇದಿಕೆಯನ್ನು ಕಲ್ಪಿಸಿದ್ದರು.
ಪ್ರೊಸ್ಟೇಟ್ ಗ್ರಂಥಿಯ ಕ್ಯಾನ್ಸರ್ನಿಂದ ಬಳಲುತ್ತಿದ್ದ ಕಾರಂತರು ಭಾನುವಾರ ಸಂಜೆ 7.30 ರ ಹೊತ್ತಿಗೆ ಕೊನೆಯುಸಿರೆಳೆದರು. ಅವರ ಪಾರ್ಥಿವ ಶರೀರವನ್ನು ಸೋಮವಾರ ಬೆಳಗ್ಗೆ 11ರಿಂದ ಅಪರಾಹ್ನ 1.30ರವರೆಗೆ ರವೀಂದ್ರ ಕಲಾಕ್ಷೇತ್ರದ ಹಿಂಭಾಗದ ಸಂಸ ಬಯಲು ರಂಗಮಂದಿರದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಅಪರಾಹ್ನ 1.30ಕ್ಕೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
ಕಾರಂತರ ನಿಧನಕ್ಕೆ ಕನ್ನಡ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಹಾಗೂ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಹಾಗೂ ಮತ್ತಿತರ ಸಚಿವರು ತಮ್ಮ ಸಂತಾಪ ಸೂಚಿಸಿದ್ದಾರೆ.
(ಇನ್ಫೋ ವಾರ್ತೆ)