ವಿಶಾಲ ಹೃದಯದ ಮಹೋನ್ನತ ವ್ಯಕ್ತಿ ಶಿವರಾಮ ಕಾರಂತ
ಹೂವಿನೊಂದಿಗೆ ನಾರು ಸ್ವರ್ಗ ಸೇರುವಂತೆ... ಅಂದಿಗೆ ಕೇವಲ ಕರಾವಳಿ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದ ನಮ್ಮ ಅಪ್ಪಟ ಕನ್ನಡ ಸಂಸ್ಕೃತಿಯ ಯಕ್ಷಗಾನ ಕಲೆಯನ್ನು ಮೊದಲ ಬಾರಿಗೆ ಕರಾವಳಿಯ ಪರಿಧಿಯಿಂದಾಚೆಗೂ, ದೇಶ ವಿದೇಶಗಳಿಗೂ ಕೊಂಡೊಯ್ದವರು ಶಿವರಾಮ ಕಾರಂತರು. ತಮ್ಮ ಅಪರಿಮಿತ ಸಾಹಿತ್ಯ ಕೃಷಿಯ ನಡುವೆಯೂ.
ಕಡಲತೀರದ ಭಾರ್ಗವ ಶಿವರಾಮ ಕಾರಂತರ ಮಾತುಗಳಲ್ಲಿ...
ತಮ್ಮದೇ ಕಲಾವಿದರ ತಂಡ ಕಟ್ಟಿಕೊಂಡು ತರಬೇತಿಗೊಳಿಸಿ ಹುಬ್ಬಳ್ಳಿ ಧಾರವಾಡ ಬೆಂಗಳೂರು ಶಿವಮೊಗ್ಗ ಭದ್ರಾವತಿ ಕುಂದಾಪುರ ಉಡುಪಿ ಪುತ್ತೂರು ಸಾಗರ ಶಿರಸಿ ಹೆಗ್ಗೋಡು ಬ್ರಹ್ಮಾವರ ಸೇರಿದಂತೆ ಕರ್ನಾಟಕದ ಹಲವು ನಗರಗಳಲ್ಲಿ, ಮುಂಬಯಿ ಪೂನಾ ಅಸ್ಸಾಂ ತಮಿಳುನಾಡು ಕೇರಳ ಆಂಧ್ರಪ್ರದೇಶ ಮಧ್ಯಪ್ರದೇಶ ಪಂಜಾಬ್ ಸೇರಿದಂತೆ ಭಾರತದ ಹಲವಾರು ರಾಜ್ಯಗಳಲ್ಲಿ, ಜಪಾನ್ ಇಂಗ್ಲೆಂಡ್ ಪೇರು ಬ್ರೆಜಿಲ್'ಗಳಂತಹ ವಿದೇಶಗಳಲ್ಲೂ ಪ್ರದರ್ಶಿಸಿ ನಮ್ಮ ದೇಶಿ ಯಕ್ಷಗಾನ ಕಲೆಯನ್ನು ವಿಶ್ವವಿಖ್ಯಾತವಾಗಿಸಿದರು.
ಅಷ್ಟೇ ಅಲ್ಲದೇ, ಯಕ್ಷಗಾನದ ಸಮಗ್ರ ಅಧ್ಯಯನದ ಕುರಿತಾಗಿ 'ಯಕ್ಷಗಾನ ಬಯಲಾಟ' ಎಂಬ ಮಹತ್ಕೃತಿಯನ್ನು ರಚಿಸಿ ಅದಕ್ಕೆ ೧೯೫೯ರ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಕೂಡ ಪಡೆದವರು.
ಕಾರಂತರು ಯಕ್ಷಗಾನಕ್ಕೆ ತಮ್ಮನ್ನು ಇಷ್ಟೆಲ್ಲಾ ಅರ್ಪಿಸಿಕೊಂಡರೂ, ಅದರಿಂದ ಗಳಿಸಿದ ಗೌರವ ಸನ್ಮಾನಗಳಿಗೆ ಅವರು ಅತ್ಯಂತ ಅರ್ಹರಾಗಿದ್ದರೂ, ಅವರಿಗೆ ಯಕ್ಷಗಾನದ ಕುರಿತಾಗಿ ಎಂತಹ ಪೂಜ್ಯ ಭಾವನೆಯಿತ್ತೆಂಬುದನ್ನು 'ಹುಚ್ಚು ಮನಸ್ಸಿನ ಹತ್ತು ಮುಖಗಳು' ಆತ್ಮಕಥೆಯಲ್ಲಿ ಬರೆದ ಅವರ ಸಾಲುಗಳಲ್ಲೇ ಓದಿ-
ರೈಗೆ ಕಾರಂತ ಪ್ರಶಸ್ತಿ : ಸಾಮಾಜಿಕ ತಾಣದಲ್ಲಿ ಭುಗಿಲೆದ್ದ ಆಕ್ರೋಶ
"ಉಡುಪಿ ನಗರದ ನನ್ನ ಅಭಿಮಾನಿಗಳಿಗೆ ಒಬ್ಬನ ಪ್ರಾಯ 65 ಆಗಲಿ 67 ಆಗಲಿ ಅವುಗಳೊಳಗೆ ವ್ಯತ್ಯಾಸವಿಲ್ಲ -ಎಂದು ಕಾಣಿಸಿತು. ಅವರೂ ಒಂದು ಸಮಾರಂಭದ ಹಂಚಿಕೆಯನ್ನು ಹೂಡಿದರು. ಉಡುಪಿಯ ಈ ಉತ್ಸವಕ್ಕೆ ನನ್ನನ್ನು ಕರೆದು ತರುವ ಹೊತ್ತಿನಲ್ಲಿ ನಾನು ಕಂಡ ಒಂದು ನೋಟ ಮಾತ್ರ ಆ ಕ್ಷಣದಲ್ಲೂ ಮತ್ತು ಇಂದಿನ ತನಕವೂ ಒಂದು ನೋವನ್ನು ಉಳಿಸಿದೆ."
"ಅದನ್ನು ಇಲ್ಲಿ ಹೇಳಿದರೆ ತಪ್ಪಾಗದು. ಆ ದಿನ ನನ್ನ ಸ್ವಾಗತಕ್ಕೆಂದು ಕಾಲೇಜಿನ ಮಹಾದ್ವಾರದಿಂದ ಸಭಾಂಗಣದ ವೇದಿಕೆಯ ತನಕವೂ ಎರಡು ಸಾಲುಗಳಲ್ಲಿ, ಯಕ್ಷಗಾನ ಕಲಾವಿದರನ್ನು ವೇಷಪೂರಿತವಾಗಿ ನಿಲ್ಲಿಸಿದ್ದರು. ಅದನ್ನು ಕಂಡು ನನಗೆ ತೀರ ನೋವಾಯಿತು. ಆ ಕಲೆಗಾಗಿ ನಾನು ಸಾಕಷ್ಟು ದುಡಿದಿದ್ದೇನೆ. ಅದು ನನಗಿಂತಲೂ ದೊಡ್ಡದು. ಯಾವುದೇ ಕಲೆಯಾದರೂ ಹಾಗೆಯೇ. ಅದರ ವೇಷಗಳು ನನಗೆ ಪ್ರಿಯವಾದವು; ಯಕ್ಷಗಾನದ ಒಂದು ದೊಡ್ಡ ಸಂಪತ್ತೆಂಬುದು - ಅತಿಮಾನವ ವ್ಯಕ್ತಿಗಳಿಗೆ ಒಂದು ಕಾಲ್ಪನಿಕ ಭೌತ ಆಕೃತಿಯನ್ನು ಕೊಟ್ಟು ಮೆರೆಯಿಸಿದ ಸೃಷ್ಟಿ."
"ಅಂಥ ವೇಷಗಳನ್ನು ಆ ಕಲೆಯ ಅಭ್ಯಾಸಿಯೂ, ಭಕ್ತನೂ ಆದ ನನ್ನ ಆಗಮನದ ಕಾಲದಲ್ಲಿ ಆಚೀಚೆ ನಿಲ್ಲಿಸಿದರಲ್ಲ! ಅದೂ ನನಗಾಗಿ - ಎಂಬ ನೋವನ್ನು ಮಾತ್ರ ಮರೆಯಲಾರೆ. ಅದು ಔಚಿತ್ಯ ಮೀರಿದ ಕೃತಿ. ಅದು ನಡೆದುದೇನೋ ನನ್ನ ಮೇಲಿನ ಅಭಿಮಾನದಿಂದಲೇ. ಯಕ್ಷಗಾನವನ್ನು ಕುರಿತು ನನಗಿರುವ ದೃಷ್ಟಿಯನ್ನು ತಿಳಿಯದೆಯೇ ಮಾಡಿದ ಕೆಲಸ ಎಂಬುದನ್ನು ಬಲ್ಲೆ."
"ಈ ಘಟನೆ ನಡೆದ ಹದಿನೈದು ವರ್ಷಗಳ ಮೇಲೆ, ಬಹಿರಂಗವಾಗಿ ಆ ನೋವನ್ನು ಕುರಿತು ಇಲ್ಲಿ ಹೇಳುತ್ತಿದ್ದೇನೆ. ನಾವು ಎಷ್ಟೇ ದೊಡ್ಡವರಿರಲಿ, ನಮ್ಮ ಬದುಕಿನ ಯಾವುದೇ ಮುಖಕ್ಕೆ ದೈವವನ್ನೋ, ಆದರ್ಶದ ಸಂಕೇತವನ್ನೋ ಇರಿಸಿಕೊಳ್ಳುವುದು ಭಯಭಕ್ತಿಗಳಿಂದ, ಆದರದಿಂದ, ಅವು ಇರುವಲ್ಲಿಗೆ ನಾವು ತಲುಪಬೇಕು - ಎಂಬ ಆಶಯದಿಂದ. ನಾವು ಇರುವಲ್ಲಿಗೆ ಅವನ್ನು ಕರೆಯಿಸಿಕೊಳ್ಳುವುದಲ್ಲ. ಅವು ಬರಲೂ ಕೂಡದು."
ಇಂತಹ ವಿಶಾಲ ಹೃದಯದ ಔನ್ನತ್ಯ ಕಾರಂತರಿಗಲ್ಲದೇ ಇನ್ನಾರಿಗಿರಲು ಸಾಧ್ಯ?