ಕಾಶ್ಮೀರಿ ಪಂಡಿತರ ಪಿಎಂ ಯೋಜನೆಯಡಿ ಕಾಶ್ಮೀರಿ ಹಿಂದೂಗಳಿಗಿಲ್ಲ ಸರ್ಕಾರಿ ಉದ್ಯೋಗ
ಶ್ರೀನಗರ, ಸೆಪ್ಟೆಂಬರ್ 18: ಕಾಶ್ಮೀರಿ ಹಿಂದೂಗಳು ಕಾಶ್ಮೀರಿ ಪಂಡಿತರ ಪಿಎಂ ಯೋಜನೆಯಡಿ ಉದ್ಯೋಗವನ್ನು ದಕ್ಕಿಸಿಕೊಳ್ಳಲಾಗದೆ ನೀರಸವಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರಿ ಉದ್ಯೋಗವನ್ನು ಪಡೆಯುವುದು ಕಾಶ್ಮೀರಿ ಹಿಂದೂಗಳಿಗೂ ತಮ್ಮ ಗುರುತಿನ ವಿರುದ್ದ ಹೋರಾಟ ನಡೆಸಬೇಕಾಗಿ ಬಂದಿದೆ. ನವ್ ಜೋತ್ ಕುಮಾರ್ ಎಂಬ ಕಾಶ್ಮೀರಿ ಹಿಂದೂವನ್ನು ಕೋರ್ಟ್ ಆತ ಕಾಶ್ಮೀರಿ ಪಂಡಿತನಲ್ಲ ಎಂಬ ಕಾರಣಕ್ಕೆ ಸರ್ಕಾರಿ ಉದ್ಯೋಗ ಲಭಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ನವ್ ಜೋತ್ ಕುಮಾರ್ನಂತೆಯೇ ಹೀಗೆಯೇ ಉರಿ ವಲಯದ ನಿಯಂತ್ರಣ ರೇಖೆಯ ಬಳಿ ವಾಸಿಸುತ್ತಿರುವ ಎರಡು ಡಜನ್ಗಿಂತಲೂ ಹೆಚ್ಚು ಹಿಂದುಗಳು ಕಾಶ್ಮೀರಿ ಪಂಡಿತರಿಗೆ ಪ್ರಧಾನ ಮಂತ್ರಿಗಳ ವಿಶೇಷ ಉದ್ಯೋಗ ಪ್ಯಾಕೇಜ್ ಅಡಿಯಲ್ಲಿ ಕೆಲಸಕ್ಕೆ ಅರ್ಹತೆ ಪಡೆದಿದ್ದರು. ಕಾಶ್ಮೀರಿ ಪಂಡಿತರ ಉದ್ಯೋಗ ಯೋಜನೆಯಲ್ಲಿ ಕಾಶ್ಮೀರಿ ಹಿಂದೂಗಳು ಮತ್ತು ಸಿಖ್ಖರನ್ನು ಸೇರಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಮಂಗಳವಾರ ವಜಾ ಮಾಡಿದೆ. "ಕಾಶ್ಮೀರದಲ್ಲಿ ಇರುವ ಹಿಂದೂಗಳು ಕಾಶ್ಮೀರ ಪಂಡಿತರು ಅಲ್ಲ. ಕಾಶ್ಮೀರ ಪಂಡಿತರಿಗೆ ಬೇರೆಯದ್ದೇ ಆದ ಗುರುತು ಇದೆ. ಕಾಶ್ಮೀರಿ ಹಿಂದೂಗಳನ್ನು ಕಾಶ್ಮೀರಿ ಪಂಡಿತರು ಎಂದು ಗುರುತಿಸಲಾಗದು," ಎಂದು ಕೋರ್ಟ್ ಹೇಳಿದೆ.
'ನಾನು ಕಾಶ್ಮೀರಿ ಪಂಡಿತ, ಮನೆಯಲ್ಲಿದಂತಹ ಭಾವ': ವೈಷ್ಣೋ ದೇವಿ ದೇಗುಲ ಭೇಟಿ ಬಳಿಕ ರಾಹುಲ್
ಈ ಬಗ್ಗೆ ಹೇಳಿಕೆ ನೀಡಿರುವ ಕಾಶ್ಮೀರಿ ಹಿಂದೂ ನವ್ ಜೋತ್ ಕುಮಾರ್, "ಕಾಶ್ಮೀರಿ ಪಂಡಿತ ವರ್ಗದಲ್ಲಿ ಕಾಶ್ಮೀರಿ ಹಿಂದೂಗಳು, ರಜಪೂತರು, ಕ್ಷತ್ರೀಯರು ಬರುವುದಿಲ್ಲ ಎಂದು ಹೇಳಿ ಜಮ್ಮು ಮತ್ತು ಕಾಶ್ಮೀರ ಆಡಳಿತ ನಮ್ಮ ಯೋಜನೆಯಡಿ ಉದ್ಯೋಗ ಪಡೆಯುವ ಹಕ್ಕನ್ನು ನಿರಾಕರಿಸಿದೆ. ಕೋರ್ಟ್ ಒಂದೇ ನಮ್ಮ ಭರವಸೆ ಆಗಿತ್ತು. ಆದರೆ ನಮ್ಮ ಪರವಾಗಿ ಕೋರ್ಟ್ನಲ್ಲಿಯೂ ತೀರ್ಪು ಬಂದಿಲ್ಲ. ಕೋರ್ಟ್ ಕಾಶ್ಮೀರಿ ಪಂಡಿತರು ಹಾಗೂ ರಜಪೂತರು ಬೇರೆ ಬೇರೆ ಆಗುತ್ತಾರೆ ಎಂದು ಹೇಳಿದೆ. ನಮ್ಮ ಸಮುದಾಯದ ಮೇಲೆ ತಾರತಮ್ಯ ಮಾಡಲಾಗುತ್ತಿದೆ. ನಮಗೆ ನ್ಯಾಯ ಬೇಕು," ಎಂದು ನೊಂದು ಹೇಳಿದ್ದಾರೆ.
'ಕಾಶ್ಮೀರದ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕು ನಮಗಿದೆ' ಎಂದ ತಾಲಿಬಾನ್
ವಿವಾದ ಆರಂಭವಾಗಲು ಕೇಂದ್ರ ಸರ್ಕಾರ ಕಾರಣವಾದದ್ದು ಹೇಗೆ?
ಪ್ರಧಾನ ಮಂತ್ರಿ ವಿಶೇಷ ಉದ್ಯೋಗ ಯೋಜನೆಯಡಿಯಲ್ಲಿ 2009 ರಲ್ಲಿ ವಲಸೆ ಹೋದ ಕಾಶ್ಮೀರಿ ಪಂಡಿತರಿಗೆ ಸುಮಾರು 6,000 ಸರ್ಕಾರಿ ಉದ್ಯೋಗಗಳನ್ನು ಘೋಷಣೆ ಮಾಡಲಾಗಿದೆ. ಈ ಪೈಕಿ ಸುಮಾರು 4,000 ಹುದ್ದೆಯನ್ನು ಭರ್ತಿ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರ ಸೇವಾ ಆಯ್ಕೆ ಮಂಡಳಿಯುದ 2,000 ಉದ್ಯೋಗಗಳ ಜಾಹೀರಾತನ್ನು ಇತ್ತೀಚೆಗೆ ಮಾಡಿದೆ. ಕಳೆದ ವರ್ಷ ಕೇಂದ್ರ ಸರ್ಕಾರವು ಈ ನೇಮಕಾತಿ ಯೋಜನೆಯಲ್ಲಿ ವಲಸೆ ಹೋಗದ ಕಾಶ್ಮೀರಿ ಪಂಡಿತರನ್ನು ಕೂಡಾ ಸೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಕಾಶ್ಮೀರಿ ಹಿಂದೂಗಳು ಹಾಗೂ ಕಾಶ್ಮೀರಿ ಸಿಖ್ಖರು ಕೂಡಾ ಈ ಯೋಜನೆಯಲ್ಲಿ ತಮ್ಮನ್ನು ಸೇರಿಸಿಕೊಳ್ಳುವಂತೆ ಒತ್ತಾಯ ಮಾಡಿದ್ದಾರೆ. ಕಾಶ್ಮೀರದ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ನಾವು ತೊಂದರೆಗೆ ಒಳಗಾಗಿದ್ದೇವೆ ಹಾಗೂ ಆದರೂ ನಾವು ವಲಸೆಯನ್ನು ಹೋಗಿಲ್ಲ. ಆದ್ದರಿಂದ ನಮ್ಮನ್ನು ಕೂಡಾ ಈ ಯೋಜನೆಯಲ್ಲಿ ಸೇರಿಸಿಕೊಳ್ಳಬೇಕು ಎಂದು ಕಾಶ್ಮೀರಿ ಹಿಂದೂಗಳು ಹಾಗೂ ಕಾಶ್ಮೀರಿ ಸಿಖ್ಖರು ಆಗ್ರಹ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ಗೆ ಹೋಗುತ್ತೇವೆ ಎಂದ ಕಾಶ್ಮೀರಿ ಸಿಖ್ಖರು
ಈ ಹಿನ್ನೆಲೆ ಕಾಶ್ಮೀರಿ ಸಿಖ್ಖರು ನಾವು ಸುಪ್ರೀಂ ಕೋರ್ಟ್ಗೆ ಹೋಗುತ್ತೇವೆ ಎಂದು ಹೇಳಿದ್ದಾರೆ. "ಕೇಂದ್ರ ಸರ್ಕಾರವು ಕೇವಲ ಒಂದು ಸಮುದಾಯಕ್ಕೆ ಮಾತ್ರ ಈ ರೀತಿ ಯೋಜನೆಯನ್ನು ಮಾಡಿರುವುದು ಸಂಪೂರ್ಣವಾಗಿ ತಾರತಮ್ಯ. ಈ ಹಿನ್ನೆಲೆ ನಾವು ಸುಪ್ರೀಂ ಕೋರ್ಟ್ಗೆ ಹೋಗುತ್ತೇವೆ," ಎಂದು ಸಿಖ್ಖರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ಈ ಬಗ್ಗೆ ಮಾತನಾಡಿದ ಸಿಖ್ ಸಮನ್ವಯ ಸಮಿತಿಯ ಅಧ್ಯಕ್ಷ ಜಗಮೋಹನ್ ಸಿಂಗ್ ರೈನಾ, "ಇಲ್ಲಿ ಎಲ್ಲರೂ ಸಂಕಷ್ಟವನ್ನು ಅನುಭವಿಸಿದ್ದಾರೆ. ಬರೀ ಒಂದು ಸಮುದಾಯ ಸಂಕಷ್ಟವನ್ನು ಅನುಭವಿಸಿರುವುದು ಅಲ್ಲ. ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರು ಎಲ್ಲರೂ ತೊಂದರೆ ಅನುಭವಿಸಿದ್ದಾರೆ. ಅಲ್ಪಸಂಖ್ಯಾತರಲ್ಲಿ ಹಿಂದೂಗಳು, ಪಂಡಿತರು ಹಾಗೂ ಸಿಖ್ಖರು ಬರುತ್ತಾರೆ. ಆದರೆ ಬರೀ ಕಾಶ್ಮೀರಿ ಪಂಡಿತರು ಇಲ್ಲಿ ತೊಂದರೆಯನ್ನು ಅನುಭವಿಸಿದ್ದಾರೆ ಎಂದು ಹೇಳುವುದು ಸಂಪೂರ್ಣವಾಗಿ ಅನ್ಯಾಯ. ನಾವು ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆ," ಎಂದು ತಿಳಿಸಿದ್ದಾರೆ.
'ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಭದ್ರತೆ ನಮ್ಮ ಹಿಡಿತದಲ್ಲಿದೆ, ತಾಲಿಬಾನ್ ಭಯ ಬೇಡ': ಸೇನೆ
ಕಾಶ್ಮೀರಿ ಪಂಡಿತರು ಪ್ರತ್ಯೇಕವಾಗಿ ಗುರುತಿಸಬಹುದಾದ ಸಮುದಾಯ ಎಂದ ಕೋರ್ಟ್
"ಕಾಶ್ಮೀರಿ ಪಂಡಿತರು ಕಾಶ್ಮೀರ ಕಣಿವೆಯಲ್ಲಿ ಇರುವ ರಜಪೂತರು, ಬ್ರಾಹ್ಮಣರು, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡ ಹಾಗೂ ಬೇರೆ ಸಮುದಾಯದ ನಡುವೆ ನಾವು ಪ್ರತ್ಯೇಕವಾಗಿ ಗುರುತಿಸಬಹುದಾದ ಸಮುದಾಯ," ಎಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ನ ನ್ಯಾಯಾಧೀಶ ಸಂಜೀವ ಕುಮಾರ್ ತನ್ನ ತೀರ್ಪಿನಲ್ಲಿ ಹೇಳಿದ್ದಾರೆ. "ಪ್ರಧಾನ ಮಂತ್ರಿಯ ಪರಿಷ್ಕೃತ ಪ್ಯಾಕೇಜ್ನ ಪ್ರಯೋಜನಗಳನ್ನು ನಮಗೂ ಅವಕಾಶ ನೀಡಬೇಕು ಎಂಬ ಕ್ಷತ್ರಿಯರು, ರಜಪೂತರು, ಪರಿಶಿಷ್ಟ ಜಾತಿಗಳು ಮತ್ತು ಕಾಶ್ಮೀರಿಗಳಲ್ಲದ ಬ್ರಾಹ್ಮಣರಾಗಿರುವ ಅರ್ಜಿದಾರರ ವಾದವನ್ನು ಒಪ್ಪಿಕೊಳ್ಳುವುದು ಕಷ್ಟಕರವಾಗಿದೆ," ಎಂದು ಕೋರ್ಟ್ ತೀರ್ಪಿನಲ್ಲಿ ಹೇಳಿದೆ.
ಕೋರ್ಟ್ ತೀರ್ಪನ್ನು ಸ್ವಾಗತಿಸಿದ ಕಾಶ್ಮೀರಿ ಪಂಡಿತರು
ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ನ ಈ ತೀರ್ಪನ್ನು ಕಾಶ್ಮೀರಿ ಪಂಡಿತರು ಸ್ವಾಗತಿಸಿದ್ದಾರೆ. "ಅಧಿಕ ಸಂಖ್ಯೆಯಲ್ಲಿ ಇರುವ ಹಿಂದೂಗಳ ಗುರುತಿಗೂ ಹಾಗೂ ಕಾಶ್ಮೀರಿ ಪಂಡಿತರ ಗುರುತಿಗೂ ನಡುವೆ ಒಂದು ರೇಖೆಯಿದೆ," ಎಂದು ಕಾಶ್ಮೀರಿ ಪಂಡಿತರು ಹೇಳಿದ್ದಾರೆ. "ನಮಗೆ ಬೇರೆಯದ್ದೇ ಆದ ಆಚಾರ, ವಿಚಾರ, ಸಂಸ್ಕೃತಿ, ಗುರುತು ಇದೆ. ಬೇರೆ ಎಲ್ಲರಿಗಿಂತ ನಮ್ಮ ಆಚಾರ ವಿಚಾರಗಳು ಭಿನ್ನವಾಗಿದೆ. ಹಿಂದೂಗಳು ಕಾಶ್ಮಿರದಲ್ಲಿ ಇದ್ದರೂ ಕೂಡಾ ಕಾಶ್ಮೀರಿ ಪಂಡಿತರ ನೀಲಮಠ ಪುರಾಣ ಆಚರಣೆಗಳನ್ನು ಪಾಲಿಸುವುದಿಲ್ಲ. ಈ ಆಚರಣೆಯು ಬೇರೆ ಎಲ್ಲರ ಆಚರಣೆಗಿಂತ ಬೇರೆಯೇ ಆಗಿದೆ," ಎಂದು ಕಾಶ್ಮೀರಿ ಪಂಡಿತ ಮುಖಂಡ, ಸತೀಶ್ ಮಹಲ್ದಾರ್ ಹೇಳಿದ್ದಾರೆ.
ಪ್ರಧಾನ ಮಂತ್ರಿಯ ಈ ಯೋಜನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ತೀವ್ರತರವಾದ ಹಿಂಸೆ ಮತ್ತು ಭಯೋತ್ಪಾದನೆಯ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಇದ್ದವರಿಗೆ ಆಗಿದ್ದರೆ, ಇದು ಎಲ್ಲರಿಗೂ ದೊರೆಯಬೇಕು. ಏಕೆಂದರೆ ಆ ಸಂದರ್ಭದಲ್ಲಿ ಸಮಾಜದ ಎಲ್ಲಾ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅರ್ಜಿದಾರರು ಇನ್ನೂ ಸಮರ್ಥಿಸಿಕೊಂಡಿದ್ದಾರೆ.
(ಒನ್ ಇಂಡಿಯಾ ಸುದ್ದಿ)