ರಾಜ್ಯ ಪಠ್ಯ ಪುಸ್ತಕ ಸೊಸೈಟಿಯ ಮಹಾ ಎಡವಟ್ಟಿನಿಂದ ವಿದ್ಯಾರ್ಥಿಗಳ ಓದಿಗೆ ತೊಂದರೆ!
ಬೆಂಗಳೂರು, ಆ. 13 : ಕೊರೊನಾ ಸೋಂಕಿನಿಂದ ಬಂದ್ ಆಗಿದ್ದ ಶಾಲೆಗಳನ್ನು ರಾಜ್ಯದಲ್ಲಿ ಹಂತ ಹಂತವಾಗಿ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ. ಇದೀಗ ಆರನೇ ತರಗತಿಯಿಂದ 10 ನೇ ತರಗತಿ ವರೆಗಿನ ಶಾಲೆಗಳು ಕಾರ್ಯಾರಂಭವಾಗಿ ಒಂದು ತಿಂಗಳು ಸಮೀಪಿಸಿದೆ. ರಾಜ್ಯದಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಲು ಸಾಧ್ಯವಾಗಿಲ್ಲ. ಶೇ. 20 ರಷ್ಟು ಪಠ್ಯ ಪುಸ್ತಕಗಳು ವಿದ್ಯಾರ್ಥಿಗಳು ಕೈ ತಲುಪಿಲ್ಲ!
ಕರ್ನಾಟಕ ಪಠ್ಯಪುಸ್ತಕ ಸೊಸೈಟಿ ಬಿಡುಗಡೆ ಮಾಡಿರುವ ಅಂಕಿ ಅಂಶಗಳಲ್ಲೇ ಈ ಸಂಗತಿ ಹೊರ ಬಿದ್ದಿದೆ. ರಾಜ್ಯದಲ್ಲಿ ಸರ್ಕಾರ ಹಾಗೂ ಖಾಸಗಿ ಶಾಲೆಗಳು ಸೇರಿದಂತೆ ಒಂದನೇ ತರಗತಿಯಿಂದ ಹತ್ತನೇ ತರಗತಿ ವರೆಗಿನ ರಾಜ್ಯ ಪಠ್ಯಕ್ರಮ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 5, 34, 76, 336 ಪಠ್ಯ ಪುಸ್ತಕಗಳು ಅಗತ್ಯವಿದೆ. ಆದರೆ, ಈವರೆಗೂ ಕೇವಲ 4,77,43,004 ಪಠ್ಯ ಪುಸ್ತಕಗಳು ಮುದ್ರಣವಾಗಿವೆ. ಮುದ್ರಣವಾದ ಪಠ್ಯ ಪುಸ್ತಕಗಳಲ್ಲಿ ಒಟ್ಟು 4,35,59,807 ಪಠ್ಯ ಪುಸ್ತಕಗಳು ವಿತರಣೆಯಾಗಿವೆ. ಇನ್ನು ಸರಾಸರಿ ಒಂದು ಕೋಟಿ ಪಠ್ಯ ಪುಸ್ತಕಗಳು ಮುದ್ರಣವಾಗಿ ವಿದ್ಯಾರ್ಥಿಗಳಿಗೆ ತಲುಪಬೇಕಿದೆ. ವಾಸ್ತವದಲ್ಲಿ ಅರ್ಧ ಶೈಕ್ಷಣಿಕ ವರ್ಷ ಮುಗಿದ್ದು, ಆಕ್ಟೋಬರ್ 10 ರಿಂದ ದಸರಾ ರಜೆ ಆರಂಭವಾಗಲಿದ್ದು, ಶಿಕ್ಷಣ ಇಲಾಖೆ ಕಳೆದ ವರ್ಷ ಮಾಡಿದ ಎಡವಟ್ಟಿನಿಂದ ಈ ವರ್ಷ ವಿದ್ಯಾರ್ಥಿಗಳು ಪಠ್ಯ ಪುಸ್ತಕ ಇಲ್ಲದೇ ಓದುವಂತಾಗಿದೆ.
ಶಿಕ್ಷಣ ಇಲಾಖೆ ಎಡವಟ್ಟು: ಕೊರೊನಾ ಸೋಂಕಿನಿಂದ ಕಳೆದ ಒಂದೂವರೆ ವರ್ಷ ಶಾಲೆಗಳು ಪ್ರಾರಂಭವಾಗಲಿಲ್ಲ. ಆರ್ಥಿಕ ಸಂಕಷ್ಟಕ್ಕೆ ಒಳಗಾದ ಶಾಲೆಗಳು ಪಠ್ಯ ಪುಸ್ತಕಗಳನ್ನು ಖರೀದಿ ಮಾಡಲಿಲ್ಲ. ಹೀಗಾಗಿ ಈ ವರ್ಷವೂ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮುದ್ರಣವಾಗಬೇಕಿದ್ದ ಪಠ್ಯ ಪುಸ್ತಕಗಳ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಕೊರೊನಾ ಸೋಂಕು ಕಡಿಯೆ ಆಗಿ ಶಾಲೆಗಳು ಪ್ರಾರಂಭವಾಗುವ ಮುನ್ಸೂಚನೆ ಸಿಕ್ಕರೂ ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ ಎಚ್ಚೆತ್ತುಕೊಳ್ಳಲಿಲ್ಲ. ಹೀಗಾಗಿ ಇರುವ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಲು ಶಿಕ್ಷಣ ಇಲಾಖೆ ತೀರ್ಮಾನಿಸಿತ್ತು. ಈ ವರ್ಷ ಶಾಲೆಗಳು ಪ್ರಾರಂಭಾಗಿದ್ದು, ಪ್ರಾಥಮಿಕ ಶಾಲೆಗಳು ಕೂಡ ಶೀಘ್ರದಲ್ಲಿಯೇ ಪ್ರಾರಂಭವಾಗುವ ಮುನ್ಸೂಚನೆ ಸಿಕ್ಕಿದೆ. ಆದರೆ ಪಠ್ಯ ಪುಸ್ತಕ ಮಾತ್ರ ಪೂರ್ಣ ಪ್ರಮಾಣದಲ್ಲಿ ಶಾಲೆಗಳಿಗೆ ಸರಬರಾಜು ಮಾಡುವಲ್ಲಿ ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ ವಿಫಲವಾಗಿದೆ.
ಆತುರದಲ್ಲಿ ಮುದ್ರಣಗಾರರಿಗೆ ತಾಕೀತು: ಶಾಲೆಗಳು ಆರಂಭವಾದ ಕೂಡಲೇ ಪಠ್ಯ ಪುಸ್ತಕ ಮುದ್ರಣದ ಗುತ್ತಿಗೆ ಪಡೆದವರಿಗೆ ತ್ವರಿತವಾಗಿ ಮುದ್ರಣ ಮಾಡಿಕೊಡುವಂತೆ ತಾಕೀತು ಮಾಡಲಾಗಿದೆ. ಕಳೆದ ಒಂದೂವರೆ ವರ್ಷದಿಂದ ಕೊರೊನಾ ಸಂಕಷ್ಟಕ್ಕೆ ಒಳಗಾಗಿರುವ ಪಠ್ಯ ಪುಸ್ತಕ ಮುದ್ರಣ ಗುತ್ತಿಗೆ ಪಡೆದವರು ಶೇ.60 ರಷ್ಟು ಪಠ್ಯ ಪುಸ್ತಕಗಳನ್ನು ಮುದ್ರಣ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಪಠ್ಯ ಪುಸ್ತಕ ಮುದ್ರಣ ಸಾಧ್ಯವಾಗಿಲ್ಲ.
ಮುದ್ರಣ ರಂಗ ಕೂಡ ಬಾಗಿಲು: ಕೊರೊನಾ ಸಂಕಷ್ಟಕ್ಕೆ ಒಳಗಾಗಿದ್ದ ಮುದ್ರಣ ರಂಗ ಕೂಡ ಬಾಗಿಲು ಹಾಕಿತ್ತು. ಇದೀಗ ಏಕಾಏಕಿ ಪಠ್ಯ ಪುಸ್ತಕ ಮುದ್ರಣ ಮಾಡಿಕೊಡುವುದು ದೊಡ್ಡ ಸವಾಲಿನ ಕೆಲಸ. ಮೊದಲ ಆದ್ಯತೆ ಮೇರೆಗೆ ಪಠ್ಯ ಪುಸ್ತಕಗಳನ್ನು ಮುದ್ರಣ ಮಾಡುತ್ತಿದ್ದೇವೆ. ಹದಿನೈದು ದಿನದಲ್ಲಿ ಪೂರ್ಣ ಪ್ರಮಾಣದಲ್ಲಿ ರಾಜ್ಯಕ್ಕೆ ಅಗತ್ಯವಿರುವ ಪಠ್ಯ ಪುಸ್ತಕಗಳು ಮುದ್ರಣವಾಗಲಿವೆ ಎಂದು ಸರ್ಕಾರಿ ಪಠ್ಯ ಪುಸ್ತಕಗಳ ಮುದ್ರಣದ ಗುತ್ತಿಗೆ ಪಡೆದಿರುವ ಸಂಸ್ಥೆಯ ಮಾಲೀಕರು ತಿಳಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಸಿಲಬಸ್ ತಯಾರಿ: ರಾಜ್ಯದಲ್ಲಿ ಪಠ್ಯ ಪುಸ್ತಕಗಳ ಗುಣಮಟ್ಟ ಸರಿಯಿಲ್ಲ. ಮಕ್ಕಳು ಅಕ್ವಿಟಿವಿಟಿ ಆಧಾರಿತ ಕಲಿಕಾ ವ್ಯವಸ್ಥೆಗೆ ಅವಕಾಶ ನೀಡಿ ಸಿಬಿಎಸ್ಇ ಮಾದರಿಯಲ್ಲಿ ಪಠ್ಯ ಪುಸ್ತಕ ಮುದ್ರಣ ಮಾಡುವಂತೆ National Council of Educational Research and Training ಸಂಸ್ಥೆ 2017 ರಲ್ಲಿ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿತ್ತು. ಆದರೆ, ರಾಜ್ಯದ ಪಠ್ಯ ಪುಸ್ತಕ ಮುದ್ರಣ ಸೊಸೈಟಿ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. 2014 ರಲ್ಲಿ ಹೈಸ್ಕೂಲ್ ನ ಕೆಲವು ಪಠ್ಯ ಪುಸ್ತಕ ಪರಿಷ್ಕರಣೆ ಹೊರತು ಪಡಿಸಿದರೆ ಆನಂತರ ಯಾವ ಪಠ್ಯ ಪುಸ್ತಕವೂ ಪರಿಷ್ಕರಣೆಯಾಗಲಿಲ್ಲ. ಇದೀಗ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಹಂತದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದೆ. ಎನ್ಇಪಿ ಅಡಿ ದಾಖಲಾಗುವ ಮಕ್ಕಳಿಗೆ ಎನ್ಇಪಿ ಸಿಲಬಸ್ ಆಧಾರಿತವಾಗಿ ಪಠ್ಯ ಪುಸ್ತಕಗಳನ್ನು ಮುದ್ರಣ ಮಾಡಬೇಕಾಗುತ್ತದೆ. ಅದರೆ, ರಾಜ್ಯದ ಪಠ್ಯ ಪುಸ್ತಕ ಮುದ್ರಣ ಸೊಸೈಟಿ ಇನ್ನೂ ನಿದ್ದೆಯಿಂದ ಎದ್ದಂತೆ ಕಾಣುತ್ತಿಲ್ಲ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಅನಿವಾರ್ಯತೆ ಎದುರಾಗಿದೆ.