ಕಣ್ವದಲ್ಲಿ ಹೂಡಿಕೆ: ಮೋಸ ಹೋದವರಿಗೆ ಸಂತಸದ ಸುದ್ದಿ !
ಬೆಂಗಳೂರು ಡಿಸೆಂಬರ್ 16: ಹೆಚ್ಚಿನ ಬಡ್ಡಿ ನೀಡುವುದಾಗಿ ಹೂಡಿಕೆ ಮಾಡಿಸಿಕೊಂಡು ನೂರಾರು ಕೋಟಿ ವಂಚನೆ ಮಾಡಿದ್ದ ಕಣ್ವ ಸಮೂಹ ಸಂಸ್ಥೆಯ ಅಕ್ರಮಕ್ಕೆ ಅಂತೂ ಸಿಐಡಿ ಪೊಲೀಸರು ತೆರೆ ಎಳೆದಿದ್ದಾರೆ. ಹೂಡಿಕೆ ಮಾಡಿದ್ದವರಿಗೆ ಹಣ ಸಿಗುವ ಭರವಸೆಯ ಬೆಳಕು ಮೂಡಿಸಿದ್ದಾರೆ.
ಕಣ್ವದಲ್ಲಿ ಹೂಡಿಕೆ ಮಾಡಿ ಮೋಸ ಹೋಗಿರುವ ಮೊತ್ತಕ್ಕಿಂತೂ ಎರಡು ಪಟ್ಟು ಆಸ್ತಿಯನ್ನು ಪತ್ತೆ ಹಚ್ಚಿ ಸಿಐಡಿ ಪೊಲೀಸರು ದಾಖಲೆ ಬರೆದಿದ್ದಾರೆ. ಕಣ್ವದಲ್ಲಿ ಹೂಡಿಕೆ ಮಾಡಿ ಮೋಸ ಹೋದವರಿಗೆ ತಡವಾದರೂ ಪರವಾಗಿಲ್ಲ ಕಳೆದುಕೊಳ್ಳಲಿದ್ದ ಹಣ ಸಿಗುವಂತಹ ನಂಬಿಕೆ ಮೂಡಿಸಿದ್ದಾರೆ.
ನೀಲಮ್ಮನ ಚೀಟಿ ವ್ಯವಹಾರದಲ್ಲಿ ಓನ್ಲಿ ಇನ್ ಕಮಿಂಗ್, ನೋ ಔಟ್ ಗೋಯಿಂಗ್
ನಂಜುಂಡಯ್ಯ ಎಂಬ ಅನಕ್ಷರಸ್ತ ದೊರೆ ಕಣ್ವ ಸಮೂಹ ಸಂಸ್ಥೆಗಳನ್ನು ಹುಟ್ಟು ಹಾಕಿದ್ದ. ಹಣ ಹೂಡಿಕೆ ಮಾಡಿಸಲು ಕಮೀಷನ್ ಆಧಾರದ ಮೇಲೆ ಏಜೆಂಟರನ್ನು ನೇಮಿಸಿದ್ದ. ಕಣ್ವ ಸಂಸ್ಥೆಯ ಕಂಪನಿಗಳನ್ನು ಕಣ್ಣು ತುಂಬಿಸಿಕೊಂಡಿದ್ದ ಜನರು ಎರಡನೇ ಆಲೋಚನೆ ಇಲ್ಲದೇ ಕಣ್ವ ಸೌಹಾರ್ದ ಕೋ ಆಪರಟೀವ್ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಿದ್ದರು. ಒಂದು ಲಕ್ಷ ಹೂಡಿಕೆ ಮಾಡಿಸಿದ್ದರೆ, ಮೂವತ್ತು ಸಾವಿರ ಕಮೀಷನ್ ಕೊಡುತ್ತಿದ್ದ ನಂಜುಂಡಯ್ಯನನ್ನು ನಂಬಿ ಏಜೆಂಟರು ಸರ್ಕಾರಿ ಸೇವೆಯಿಂದ ನಿವೃತ್ತರಾದವರನ್ನು ಟಾರ್ಗೆಟ್ ಮಾಡಿದ್ದರು. ಹೆಚ್ಚಿನ ಬಡ್ಡಿ ಆಸೆಗೆ ಬಿದ್ದು ನಿವೃತ್ತ ಅಧಿಕಾರಿಗಳು, ಜನ ಸಾಮಾನ್ಯರು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದರು.
2005 ರಲ್ಲಿ ನಂಜುಂಡಯ್ಯ ಹುಟ್ಟು ಹಾಕಿದ ಕಣ್ವ ಸೌಹಾರ್ದ ಬ್ಯಾಂಕ್ ನಲ್ಲಿ ಹೂಡಿಕೆ ಪ್ರಮಾಣ ಕೋಟಿಗಳಷ್ಟು ಹೆಚ್ಚಾಯಿತು. ಇದನ್ನೇ ಬಳಸಿಕೊಂಡ ನಂಜುಂಡಯ್ಯ ಎಂಬ ಕ್ರಿಮಿನಲ್, ಕಣ್ವ ಫ್ಯಾಷನ್ಸ್, ಕಣ್ವ ರೆಸಾರ್ಟ್, ಕಣ್ವ ರಿಯಲ್ ಎಸ್ಟೇಟ್ ಎಂದು ಸಿಕ್ಕ ಸಿಕ್ಕ ಉದ್ಯಮಕ್ಕೆ ಕೈ ಹಾಕಿದ್ದ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂದು ಮಜಾ ಮಾಡಿದ್ದ ನಂಜುಂಡಯ್ಯ ಹೂಡಿಕಕೆದಾರರಿಗೆ ಹಣ ನೀಡದೇ ಕೈ ಕೊಟ್ಟಿದ್ದ. ಹೂಡಿಕೆದಾರರು ಬೀದಿಗೆ ಬಿದ್ದರು. ನಿವೃತ್ತಿ ಅಂಚಿನಲ್ಲಿದ್ದವರು ಬಡ್ಡಿ ಆಸೆಗೆ ಬಿದ್ದು ಹೂಡಿಕೆ ಮಾಡಿ, ಆತ್ಮಹತ್ಯೆ ಯತ್ನ ನಡೆಸಿದ್ದರು.
200 ಕೋಟಿ ರೂ. ವಂಚನೆ
ನಂಜುಂಡಯ್ಯ ಹಾಗೂ ಇತರರ ವಿರುದ್ಧ ವಂಚನೆ ದೂರುಗಳು ದಾಖಲಾದವು. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಸಕ್ತ ವರ್ಷದಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಮಹತ್ವ ಅರಿತು ಸಿಐಡಿ ತನಿಖೆಗೆ ವಹಿಸಲಾಗಿತ್ತು. ಕಣ್ವ ಸೌಹಾರ್ದ ಸಹಕಾರ ಸಂಘದಲ್ಲಿ ಹೂಡಿಕೆ ಮಾಡಿದವರೆಲ್ಲರೂ ದೂರು ನೀಡಿದ್ದರು. ಬರೋಬ್ಬರಿ 200 ಕೋಟಿ ರೂಪಾಯಿ ವಂಚನೆ ಮಡಿದ್ದ ಸಂಗತಿ ಆರಂಭಿಕ ತನಿಖೆಯಲ್ಲಿ ಬಯಲಾಗಿತ್ತು. ಹೂಡಿಕೆ ಮಾಡಿದವರಿಗೆ ಒಂದು ರೂಪಾಯಿ ನಿಡದೇ ನೀವು ಏನು ಮಾಡಿಕೊಳ್ತೀರೋ ಮಾಡಿಕೊಳ್ಳಿ ಎಂದು ಆರೋಪಿ ಕೈ ಎತ್ತಿದ್ದರು. ಕಣ್ವ ಸಮೂಹ ಸಂಸ್ಥೆಗಳ ಅಧ್ಯಕ್ಷ ನಂಜುಂಡಯ್ಯ ಅವರನ್ನು ವಿಚಾರಣೆ ನಡೆಸಿದಾಗ ಜನರಿಗೆ ಮೋಸ ಮಾಡಿರುವ ವಿಚಾರವನ್ನು ಒಪ್ಪಿಕೊಂಡಿದ್ದ. ಆದರೆ ಆತನ ಆಸ್ತಿಯ ಮೂಲ, ಹಣಕಾಸಿನ ವಹಿವಾಟಿನ ಬಗ್ಗೆ ಯಾವುದೇ ವಿಚಾರ ಬಾಯಿಬಿಟ್ಟಿರಲಿಲ್ಲ.
ಪ್ರಕರಣ ಬೆಳಕಿಗೆ ಬಂದಾಗ ಸುಮಾರು 13 ಸಾವಿರ ಜನರು 650 ಕೋಟಿ ರೂಪಾಯಿ ಹೂಡಿಕೆ ಮಡಿದ್ದರು ಎಂಬ ಮಾಹಿತಿ ಹೊರ ಬಂದಿತ್ತು. ಸಿಐಡಿ ಪೊಲೀಸರಿಗೆ ಈವರೆಗೂ ಕೊಟ್ಟಿರುವ ದೂರುಗಳ ಪ್ರಕಾರ 200 ಕೋಟಿ ರೂ. ಆಗಿದ್ದು, ಮತ್ತಷ್ಟು ದೂರುಗಳು ದಾಖಲಾಗುವ ಸಾಧ್ಯತೆಯಿದೆ. ವಂಚನೆ ಮಾಡಿರುವ ಮೊತ್ತದ ಪ್ರಮಾಣ ಹೆಚ್ಚಾಗಲಿದೆ.
426 ಕೋಟಿ ಮೌಲ್ಯದ ಆಸ್ತಿ ಜಪ್ತಿ !
ಕಣ್ವ ಆಸ್ತಿ ಮತ್ತು ಸಂಪತ್ತಿನ ಬಗ್ಗೆ ನಂಜುಂಡಯ್ಯ ಬಾಯಿ ಬಿಟ್ಟಿರಲಿಲ್ಲ. ಇನ್ನೂ ನಂಜುಂಡಯ್ಯ ಅವರನ್ನು ಬೇನಾಮಿ ವಹಿವಾಟಿನಲ್ಲಿ ಈಡಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲು ಮುಂದಾಗಿದ್ದರು. ಇದೇ ಹಂತದಲ್ಲಿ ಕಾರ್ಯಾಚರಣೆಗೆ ಇಳಿದ ಸಿಐಡಿ ಪೊಲೀಸರು ಹಗಳಿರುಳು ಎನ್ನದೇ ಶ್ರಮ ವಹಿಸಿ ಮೋಸ ಹೋದವರಿಗೆ ದುಡ್ಡು ಸಿಗುವ ದಾರಿ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಕಣ್ವ ಸಮೂಹ ಸಂಸ್ಥೆಗಳ ಬಗ್ಗೆ ಸಾಕಷ್ಟು ಮಾಹಿತಿದಾರರನ್ನ ಪತ್ತೆ ಮಾಡಿ ನಂಜುಂಡಯ್ಯ ಮತ್ತು ಕಣ್ವ ಸಮೂಹ ಸಂಸ್ಥೆಗಳ ಹೆಸರಿನಲ್ಲಿದ್ದ ಆಸ್ತಿಗಳನ್ನು ಪತ್ತೆ ಮಾಡಿದ್ದಾರೆ. ಕೊರಟಗೆರೆ, ನೆಲಮಂಗಲ, ಬೆಂಗಳೂರು ಗ್ರಾಮಾಂತಗರ ಸೇರಿದಂತೆ ಎಲ್ಲಾ ಕಡೆ ನೂರಾರು ಎಕರೆ ಜಮೀನಿನ ದಾಖಲೆಗಳನ್ನು ಪತ್ತೆ ಮಾಡಿದ್ದಾರೆ. ಡಿವೈಎಸ್ಪಿ ಮಹಮದ್ ರಫಿ ಹಾಗೂ ತಂಡ ಬರೋಬ್ಬರಿ ಒಂದು ತಿಂಗಳು ಕಣ್ವ ಆಸ್ತಿಗಳನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬರೋಬ್ಬರಿ 426 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ. ಆರೋಪಿ ನಂಜುಡಯ್ಯ ವಂಚನೆ ಮಾಡಿದ್ದ ಮೊತ್ತ ಸುಮಾರು 200 ಕೋಟಿ ರೂ. ಆದರೆ, ಸಿಐಡಿ ಪೊಲೀಸರು 426 ಕೋಟಿ ಪತ್ತೆ ಮಾಡಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಐಎಂಎ ಗಿಂತಲೂ ಗ್ರೇಟ್ ಕಣ್ವ ತನಿಖೆ
ಬೆಂಗಳೂರಿನಲ್ಲಿ ಐಎಂಎ ವಂಚನೆ ಪ್ರಕರಣ ಇದೇ ರೀತಿ ಆಗಿತ್ತು. ಆದರೆ, ಅಲ್ಲಿ ಐಎಂಎ ಕಂಪನಿ ವಂಚನೆ ಮಾಡಿರುವುದು ಬರೋಬ್ಬರಿ ನಲವತ್ತು ಸಾವಿರ ಮಂದಿಗೆ ಸಾವಿರಾರು ಕೋಟಿ ಮೋಸ ಮಾಡಿತ್ತು. ಆದರೆ, ಈವರೆಗೆ ಐಎಂಎಗೆ ಸೇರಿದ ಸುಮಾರು 475 ಕೋಟಿ ಮಾತ್ರ. ಇನ್ನೂ ಒಂದು ಸಾವಿರ ಕೋಟಿ ಇದ್ದರೂ ಮೋಸ ಹೋದವರಿಗೆ ಹಣ ನೀಡಲು ಸಾಧ್ಯವಾಗುವುದಿಲ್ಲ. ಆದರೆ ಕಣ್ವ ಸಮೂಹ ಸಂಸ್ಥೆಯ ವಂಚನೆ ಪ್ರಕರಣದಲ್ಲಿ ಮೋಸ ಹೋದವರೆಲ್ಲರಿಗೂ ಹಣ ಸಿಗುವ ಭರವಸೆ ಸಿಐಡಿ ಪೊಲೀಸರು ನೀಡಿದ್ದಾರೆ. ಯಾಕೆಂದರೆ ಮೋಸ ಹೋಗಿ ಈವರೆಗೂ ದಾಖಲಾಗಿರುವ ದೂರುಗಳ ಪ್ರಕಾರ ಲೆಕ್ಕ ಹಾಕಿದರೆ ಸುಮಾರು 200 ಕೋಟಿ ರೂಪಾಯಿ ನೀಡಬೇಕು. ಆದರೆ, 426 ಕೋಟಿ ರೂಪಾಯಿ ಆಸ್ತಿ ಜಪ್ತಿ ಮಾಡಿರುವುದು ವಿಶೇಷ.
ಹಣ ಯಾವಾಗ ಬರುತ್ತೆ ?
ಸದ್ಯ ಸಿಐಡಿ ಪೊಲೀಸರು ಮೊದಲು ಕಣ್ವ ಸಮೂಹ ಸಂಸ್ಥೆಯ ಆಸ್ತಿಯನ್ನು ಜಪ್ತಿ ಮಾಡಿ ತನಿಖೆ ಪೂರ್ಣಗೊಳಿಸಿದ್ದಾರೆ. ಹಣ ಕಳೆದುಕೊಂಡವರು ನೀಡಿದ ದೂರುಗಳ ಸತ್ಯಾಸತ್ಯತೆ ಪರಿಶೀಲಿಸಿ ಸಮಗ್ರ ವರದಿಯನ್ನು ಮುಂದಿನ ಒಂದು ತಿಂಗಳಲ್ಲಿ ನೀಡಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಸಿಐಡಿ ಪೊಲೀಸರು ನೀಡುವ ವರದಿ ಆಧರಸಿ ಐಎಂಎ ಪ್ರಕರಣದಲ್ಲಿ ಇಲ್ಲೂ ಸಹ ಸಕ್ಷಮ ಪ್ರಾಧಿಕಾರ ರಚನೆಯಾಗಲಿದೆ. ಸಿಐಡಿ ತನಿಖೆ ಆಧಾರದ ಮೇಲೆ ಅಷ್ಟೂ ಆಸ್ತಿಯನ್ನು ಹರಾಜು ಹಾಕಿ ಮೋಸ ಹೋದವರಿಗೆ ಹಣ ನೀಡುವ ಕೆಲಸವನ್ನು ಸಕ್ಷಮ ಪ್ರಾಧಿಕಾರ ಮಾಡಲಿದೆ. ಸಿಐಡಿ ಪೊಲೀಸರು ಹೇಳುವ ಪ್ರಕಾರ ಇನ್ನೊಂದು ವರ್ಷದಲ್ಲಿ ಎಲ್ಲಾ ಪ್ರಕ್ರಿಯೆ ಮುಗಿದು ಸಾರ್ವಜನಿಕರಿಗೆ ಹಣ ಸಿಗಲಿದೆ.
ಈಗಲೂ ದೂರು ಕೊಡಲು ಅವಕಾಶ
ಇನ್ನು ಕಣ್ವ ಸೌಹಾರ್ದ ಸಹಕಾರ ಸಂಘದಲ್ಲಿ ಹೂಡಿಕೆ ಮಾಡಿ ಇನ್ನೂ ದೂರು ದಾಖಲಿಸದಿದ್ದರೆ ಕೂಡಲೇ ಈ ಕೆಳಕಂಡ ತನಿಖಾಧಿಕಾರಿಯನ್ನು ಸಂಪರ್ಕಿಸಿ ದೂರು ಸಲ್ಲಿಸಬಹುದು ಎಂದು ಸಿಐಡಿ ಪ್ರಕಟಣೆ ತಿಳಿಸಿದೆ. ಮಹಮದ್ ರಫಿ, ಡಿವೈಎಸ್ಪಿ, ಸಿಐಡಿ ಘಟಕ, ದೂರವಾಣಿ: 080-22094417 ಸಂಪರ್ಕಿಸಿ. ಸರ್ಕಾರಿ ಕಚೇರಿ ಕೆಲಸದ ಅವಧಿಯಲ್ಲಿ ಸಾರ್ವಜನಿಕರು ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ.