ಯುವಕರು ನಮ್ಮ ದೇಶದ ದೊಡ್ಡ ಸಂಪತ್ತು: ಸಚಿವ ಶಿವರಾಮ್ ಹೆಬ್ಬಾರ್
ಮೈಸೂರು, ಫೆಬ್ರವರಿ 20: ದೇಶದ ದೊಡ್ಡ ಸಂಪತ್ತು ಯುವಕರಾಗಿದ್ದು, ಅವರ ಮೂಲಕ ದೇಶದ ಮುಂದಿನ ಭವಿಷ್ಯವನ್ನು ಕಾಣುತ್ತಿದ್ದೇವೆ. ವಿಶ್ವದಲ್ಲಿ ಅತೀ ಹೆಚ್ಚು ಯುವ ಸಮುದಾಯವನ್ನು ಭಾರತದಲ್ಲಿ ಮಾತ್ರ ಕಾಣಬಹುದಾಗಿದೆ ಎಂದು ಕಾರ್ಮಿಕ ಇಲಾಖೆಯ ಸಚಿವರಾದ ಶಿವರಾಮ್ ಹೆಬ್ಬಾರ್ ಅವರು ಹೇಳಿದರು.
ಶುಕ್ರವಾರ ಮೈಸೂರಿನಲ್ಲಿ ವಸ್ತು ಪ್ರದರ್ಶನದ ಆವರಣದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್-19 ಕಾರಣದಿಂದ ರಾಷ್ಟ್ರದಲ್ಲಿ ಹಾಗೂ ರಾಜ್ಯದಲ್ಲಿ ಅನೇಕ ಯುವಕರು ಉದ್ಯೋಗವನ್ನು ಕಳೆದುಕೊಂಡರು. ಆದರೆ ಇತ್ತೀಚಿಗೆ ಸಾಕಷ್ಟು ಉದ್ಯೋಗಗಳು ಲಭ್ಯವಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ಕಂಟೋನ್ಮೆಂಟ್ ಬೋರ್ಡ್ ಬೆಳಗಾಂನಲ್ಲಿ ವಿವಿಧ ಹುದ್ದೆ ಖಾಲಿ
ಇಂದು ರಾಜ್ಯದಲ್ಲಿ ಒಳ್ಳೆಯ ವಾತಾವರಣ ಇದೆ. ಕರ್ನಾಟಕ ರಾಜ್ಯ ಕೈಗಾರಿಕೆಗಳ ಸ್ನೇಹಿ ಆಗಬೇಕು ಎಂಬ ಕಾರಣಕ್ಕಾಗಿ ಕಾರ್ಮಿಕರ ರಕ್ಷಣೆ ಹಾಗೂ ಹಕ್ಕಿಗಾಗಿ ನಮ್ಮ ಇಲಾಖೆಯು ಅನೇಕ ತಿದ್ದುಪಡಿಗಳನ್ನು ತಂದಿದ್ದೇವೆ ಎಂದು ಹೇಳಿದರು.
ಮೈಸೂರಿನಲ್ಲಿ ಕಳೆದ ಅನೇಕ ದಿನಗಳಿಂದ ಉದ್ಯೋಗ ಸಮಸ್ಯೆ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಉದ್ಯೋಗ ಸಮಸ್ಯೆ ನಿವಾರಿಸಲು ಹಲವಾರು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.
ಈ ಉದ್ಯೋಗ ಮೇಳದಲ್ಲಿ ಒಟ್ಟು 113 ಕಂಪನಿಗಳು ಭಾಗಿಯಾಗಿದ್ದವು, ಒಟ್ಟು 13,028 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ಒಟ್ಟು 1379(679 ಪುರಷರು/700 ಮಹಿಳೆಯರು) ಉದ್ಯೋಗಾಕಾಂಕ್ಷಿಗಳಿಗೆ ಸ್ಥಳದಲ್ಲಿ ನೇಮಕಾತಿ ಪತ್ರ ನೀಡಲಾಗಿದೆ. ಒಟ್ಟು 8,755 ಉದ್ಯೋಗಕ್ಕಾಗಿ ಅರ್ಜಿ ಹಾಕಿರುವವರು ಕೊನೆಯ ಸುತ್ತಿನ ಸಂದರ್ಶನಕ್ಕಾಗಿ ಆಯ್ಕೆಯಾಗಿದ್ದಾರೆ.