ಕರ್ನಾಟಕದಲ್ಲಿ ಶೇ.1ರಷ್ಟು ಶಿಕ್ಷಕ ಉದ್ಯೋಗಗಳು ತೃತೀಯ ಲಿಂಗಿಗಳಿಗೆ ಮೀಸಲು
ಬೆಂಗಳೂರು, ಫೆಬ್ರವರಿ 24: ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಇದೀಗ ಅಂತಿಮ ನಿಯಮಗಳನ್ನು ಬಿಡುಗಡೆ ಮಾಡಿದೆ.
ಕಳೆದ ಜನವರಿ 21ರಂದು ಸದರಿ ಹುದ್ದೆಗಳ ನೇಮಕಾತಿಗೆ ಕರಡು ನಿಯಮಾವಳಿಗಳನ್ನು ಪ್ರಕಟಿಸಿತ್ತು. ಸದರಿ ನಿಯಮಗಳಿಗೆ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ ಇದೀಗ ಅಂತಿಮ ನಿಯಮಗಳನ್ನು ಪ್ರಕಟ ಮಾಡಿದೆ.
ಮೈಸೂರು ವಿವಿಯಲ್ಲಿ ತೃತೀಯ ಲಿಂಗಿಗಳಿಗೆ ಸೀಟು ಮೀಸಲು
ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಶೀಘ್ರದಲ್ಲೇ ಕರ್ನಾಟಕದಲ್ಲಿ ಬೋಧನಾ ಕ್ಷೇತ್ರಕ್ಕೆ ಪ್ರವೇಶಿಸಲಿದ್ದಾರೆ, ಮುಂಬರುವ ನೇಮಕಾತಿಯಲ್ಲಿ ಅವರಿಗೆ ಶೇ.1ರಷ್ಟು ಉದ್ಯೋಗಗಳನ್ನು ಕಾಯ್ದಿರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಶಿಕ್ಷಣ ಇಲಾಖೆಯಲ್ಲಿ ತೃತೀಯ ಲಿಂಗಿ ಸಮುದಾಯದ ಅಭ್ಯರ್ಥಿಗಳು ನೇಮಕಗೊಳ್ಳುತ್ತಿರುವುದು ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲಾಗಿದೆ.
ಮುಂದಿನ ಎಲ್ಲಾ ನೇಮಕಾತಿಗಳಲ್ಲಿ ಸಮುದಾಯಕ್ಕೆ ಶೇ.1ರಷ್ಟು ಮೀಸಲಾತಿ ಕಲ್ಪಿಸಲು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ನಿರ್ಧರಿಸಿದೆ. ರಾಜ್ಯಾದ್ಯಂತ ವಿವಿಧ ಸರ್ಕಾರಿ ಶಾಲೆಗಳಿಗೆ 15,000 ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ಕರಡು ನಿಯಮಗಳಲ್ಲಿಯೂ ಇದನ್ನು ಪ್ರಕಟಿಸಿದೆ.
ಕರಡು ಅಧಿಸೂಚನೆಯ ಪ್ರಕಾರ ಮುಂಬರುವ ನೇಮಕಾತಿಯಲ್ಲಿ ಕನಿಷ್ಠ 150 ಹುದ್ದೆಗಳನ್ನು ತೃತೀಯ ಲಿಂಗಿ (ಟ್ರಾನ್ಸ್ಜೆಂಡರ್) ಅಭ್ಯರ್ಥಿಗಳಿಗೆ ಮೀಸಲಿಡಲಾಗುತ್ತದೆ. ಇಲಾಖೆಯ ಅಧಿಕಾರಿಗಳು ವಿವರಿಸಿದಂತೆ, ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ಗೆ ಮಾಡಿದ ತಿದ್ದುಪಡಿಗಳನ್ನು ಆಧರಿಸಿ ನಿರ್ಧಾರವನ್ನು ಮಾಡಲಾಗಿದೆ. 2021ರಲ್ಲಿ ಕರ್ನಾಟಕ ಹೈಕೋರ್ಟ್ನಲ್ಲಿ ಸಲ್ಲಿಸಲಾದ ಅರ್ಜಿಯ ನಂತರ ತಿದ್ದುಪಡಿಗಳನ್ನು ಮಾಡಲಾಗಿದೆ.
ಕರ್ನಾಟಕದಲ್ಲಿ ತೃತೀಯ ಲಿಂಗಿಗಳು KSRP & IRB ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ
"ಕರ್ನಾಟಕ ನಾಗರಿಕ ಸೇವಾ ನಿಯಮಗಳಿಗೆ ತಿದ್ದುಪಡಿಗಳನ್ನು ತಂದ ನಂತರ ನಾವು ಮಾಡುತ್ತಿರುವ ಮೊದಲ ನೇಮಕಾತಿ ಇದಾಗಿದೆ. ತಿದ್ದುಪಡಿಗಳು ಮತ್ತು ರಾಜ್ಯ ಸರ್ಕಾರದ ಅಧಿಸೂಚನೆಯ ನಂತರ, ನಾವು ತೃತೀಯ ಲಿಂಗಿ (ಟ್ರಾನ್ಸ್ಜೆಂಡರ್) ಸಮುದಾಯಕ್ಕೆ ಶೇ.1ರಷ್ಟು ಹುದ್ದೆಗಳನ್ನು ಕಾಯ್ದಿರಿಸುತ್ತಿದ್ದೇವೆ," ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ವಿಶಾಲ್ ಆರ್. ತಿಳಿಸಿದ್ದಾರೆ.
"ಯಾವುದೇ ಅರ್ಜಿದಾರರು ಇಲ್ಲದಿದ್ದರೆ ಅಥವಾ ಶೇ.1ಕ್ಕಿಂತ ಕಡಿಮೆ ಅರ್ಜಿಗಳು ಇದ್ದಲ್ಲಿ, ಹುದ್ದೆಗಳನ್ನು ಸ್ವಯಂಚಾಲಿತವಾಗಿ ಇತರ ವರ್ಗಗಳಿಗೆ ಪರಿವರ್ತಿಸಲಾಗುತ್ತದೆ," ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಲಾಖೆಯು ತೃತೀಯ ಲಿಂಗಿಗಳಿಗೆ ಮೀಸಲಾತಿಯನ್ನು ಘೋಷಿಸಿದ್ದರೂ, ಸಮುದಾಯದ ಸದಸ್ಯರಿಗೆ ಅರ್ಹತಾ ಮಾನದಂಡದಲ್ಲಿ ಯಾವುದೇ ಸಡಿಲಿಕೆ ಸಿಗುವ ಸಾಧ್ಯತೆಯಿಲ್ಲ. ಅವರು ಯಾವುದೇ ವಿಷಯದಲ್ಲಿ ಪದವೀಧರರಾಗಿರಬೇಕು ಮತ್ತು ಬಿ.ಎಡ್ ಪದವಿಗಳನ್ನು ಪಡೆದಿರಬೇಕು ಮತ್ತು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಅನ್ನು ತೇರ್ಗಡೆ ಹೊಂದಿರಬೇಕು.
15,000 ಶಿಕ್ಷಕರ ನೇಮಕಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಶೀಘ್ರದಲ್ಲೇ ನಡೆಸಲಾಗುವುದು ಮತ್ತು 6ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋಧಿಸಲು ವಿವಿಧ ಸರ್ಕಾರಿ ಶಾಲೆಗಳಿಗೆ ನಿಯೋಜಿಸಲಾಗುವುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Recommended Video