ಕೊಡಗು ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಆಯ್ಕೆಗೆ ಅರ್ಜಿ ಆಹ್ವಾನ
ಮಡಿಕೇರಿ ಮೇ.25: ಪ್ರಧಾನಮಂತ್ರಿ ಅವರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯ(ಪಿಎಂಎಫ್ಎಂಇ) ಮೂಲ ಉದ್ದೇಶವು ಆಹಾರ ಸಂಸ್ಕರಣೆಯ ಅಸಂಘಟಿತ ಅತೀ ಸಣ್ಣ ಉದ್ಯಮ ಕ್ಷೇತ್ರದ ಕೊಡುಗೆ ಹಾಗೂ ಅವುಗಳ ಕಾರ್ಯಕ್ಷಮತೆಗೆ ತೊಡಕಾಗುತ್ತಿರುವ ಸವಾಲುಗಳನ್ನು ಗಣನೆಗೆ ತೆಗೆದುಕೊಂಡು, ಅತೀ ಸಣ್ಣ ಉದ್ಯಮಗಳು ಸಾಮಾನ್ಯ ಸೇವೆಗಳನ್ನು ಪಡೆದುಕೊಳ್ಳುವಂತೆ ಉತ್ತೇಜಿಸುವುದಾಗಿದೆ.
ಈ ಯೋಜನೆಯಡಿ, ವೈಯುಕ್ತಿಕ ಕಿರು ಆಹಾರ ಸಂಸ್ಕರಣಾ ಘಟಕಗಳ ಉನ್ನತೀಕರಣ, ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಗುಂಪುಗಳು, ಉತ್ಪಾದಕರ ಸಹಕಾರ ಸಂಘಗಳು ಹಾಗೂ ಸಹಕಾರ ಸೊಸೈಟಿಗಳಿಗೆ ಬಂಡವಾಳ ಹೂಡಿಕೆ, ಸಾಮಾನ್ಯ ಮೂಲಭೂತ ಸೌಕರ್ಯಕ್ಕಾಗಿ ಬ್ರ್ಯಾಂಡಿಂಗ್ ಹಾಗೂ ಮಾರುಕಟ್ಟೆಗೆ ಬೆಂಬಲ ನೀಡಲಾಗುತ್ತದೆ.
ಈ ಯೋಜನೆಯಡಿ ಒದಗಿಸುವ ಸಾಲ ಸೌಲಭ್ಯಗಳಿಗೆ ಹಾಲಿ ಇರುವ ಶೇ.35 ರಷ್ಟು ಸಹಾಯಧನಕ್ಕೆ ರಾಜ್ಯ ಸರ್ಕಾರದ ಶೇ.15 ರಷ್ಟು ಹೆಚ್ಚುವರಿ ಸಹಾಯಧನದೊಂದಿಗೆ ಒಟ್ಟು ಸಹಾಯಧನವನ್ನು ಶೇ.35 ರಿಂದ ಶೇ.50ಕ್ಕೆ (ಗರಿಷ್ಟ ಮಿತಿ 15 ಲಕ್ಷ) ಹೆಚ್ಚಿಸಲಾಗಿದೆ.
ಈ ಯೋಜನೆಗೆ ಸಂಬಂಧಿಸಿದಂತೆ ಸೂಕ್ತ ಫಲಾನುಭವಿಗಳನ್ನು ಗುರುತಿಸುವಿಕೆ, ಯೋಜನಾ ವರದಿ ಸಿದ್ಧತೆ, ಫಲಾನುಭವಿಗಳು ಸಾಲ ಪಡೆಯಲು ಬ್ಯಾಂಕ್ನೊಂದಿಗೆ ಸಂಪರ್ಕ, ಘಟಕಗಳ ನೋಂದಣಿ ಹಾಗೂ ಕೈ ಆಸರೆ ಬೆಂಬಲ ನೀಡುವುದಕ್ಕೆ ಜಿಲ್ಲಾ ಮಟ್ಟಕ್ಕೆ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಶೈಕ್ಷಣಿಕ ಅರ್ಹತೆ: ಯಾವುದೇ ಕ್ಷೇತ್ರದಲ್ಲಿ ಸ್ನಾತಕ ಪದವಿ ಹೊಂದಿರಬೇಕು ಅಥವಾ ಸಮಾನವಾದ ಪದವಿ ಹೊಂದಿರಬೇಕು. ಆಹಾರ ಸಂಸ್ಕರಣಾ ಕೈಗಾರಿಕೆ/ ಬ್ಯಾಂಕಿಂಗ್, ಡಿಪಿಆರ್ ಸಿದ್ದಪಡಿಸುವಿಕೆಯಲ್ಲಿ ಹಾಗೂ ತರಬೇತಿಯಲ್ಲಿ ಅನುಭವವುಳ್ಳ ವ್ಯಕ್ತಿಗಳನ್ನೂ ಪರಿಗಣಿಸಲಾಗುವುದು.
ಸಂಪನ್ಮೂಲ ವ್ಯಕ್ತಿಗಳಿಗೆ ನೀಡಲಾಗುವ ಹಣ ಪಾವತಿಯನ್ನು ಅವರು ಬೆಂಬಲಿಸಿದಂತಹ ಪ್ರತಿ ಫಲಾನುಭವಿಯನ್ನು ಆಧರಿಸಿ, ಬ್ಯಾಂಕಿನಿಂದ ಸಾಲ ಮಂಜೂರಾದ ನಂತರ ಬ್ಯಾಂಕಿನಿಂದ ಮಂಜೂರಾದ ಪ್ರತಿ ಸಾಲವನ್ನು ಆಧರಿಸಿ ರೂ.20 ಸಾವಿರಗಳನ್ನು 2 ಕಂತುಗಳಲ್ಲಿ ಪಾವತಿಸಲಾಗುವುದು.
ಈ ಪೈಕಿ ಶೇ.50 ರಷ್ಟು ಮೊತ್ತವನ್ನು ಬ್ಯಾಂಕಿನಿಂದ ಸಾಲ ಮಂಜೂರಾದ ನಂತರ ಹಾಗೂ ಉಳಿದ ಶೇ.50 ಹಣವನ್ನು ಘಟಕಗಳು ಜಿಎಸ್ಟಿ ಮತ್ತು ಉದ್ಯೋಗ್ ಆಧಾರ್ ನೋಂದಣಿಯನ್ನು ಪಡೆದ ನಂತರ ಎಫ್ಎಸ್ಎಸ್ಎಐ ವತಿಯಿಂದ ಪ್ರಮಾಣೀಕೃತ ಅನುಸರಣೆಯನ್ನು ಪಡೆದ ನಂತರ ನೀಡಲಾಗುವುದು. ಆದ್ದರಿಂದ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಅರ್ಜಿಯನ್ನು ಸಲ್ಲಿಸುವಂತೆ ಜಂಟಿ ಕೃಷಿ ನಿರ್ದೇಶಕರಾದ ಶಬಾನಾ ಎಂ.ಶೇಕ್ ಅವರು ತಿಳಿಸಿದ್ದಾರೆ.