ಇನ್ನೊಂದು ವಾರದಲ್ಲೇ 15 ಸಾವಿರ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ; ಶಿಕ್ಷಣ ಸಚಿವ
ಕಾರವಾರ, ಮಾರ್ಚ್ 13: ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 15 ಸಾವಿರ ಶಿಕ್ಷಕರ ನೇಮಕಾತಿ ಸಂಬಂಧ, ಇನ್ನೊಂದು ವಾರದಲ್ಲೇ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಶನಿವಾರದಂದು ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ 1886ರಲ್ಲಿ ಆರಂಭವಾಗಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನಾಡು ಮಾಸ್ಕೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿದ ಸಚಿವ ಬಿ.ಸಿ. ನಾಗೇಶ್, ವಿದ್ಯಾರ್ಥಿಗಳು, ಶಿಕ್ಷಕರ ಜೊತೆಗೆ ಮಾತನಾಡಿದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದರು. ಮುಂದಿನ ಶೈಕ್ಷಣಿಕ ವರ್ಷದಲ್ಲಿ 20 ಸಾವಿರ ಶಾಲೆಯಲ್ಲಿ ಅರ್ಲಿ ಚೈಲ್ಡ್ ಎಜುಕೇಷನ್ ಪರಿಚಯ ಮಾಡುತ್ತಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ 15 ಸಾವಿರ ಅತಿಥಿ ಶಿಕ್ಷಕರ ನೇಮಕ: ಸದನದಲ್ಲಿ ಬಿ.ಸಿ. ನಾಗೇಶ್ ಸ್ಪಷ್ಟನೆ
ಈ ಬಾರಿ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಹೈಕೋರ್ಟ್ ಏನು ಆದೇಶ ಮಾಡುತ್ತದೋ ಅದನ್ನು ಪಾಲಿಸಲೇಬೇಕು. ಈ ಪರೀಕ್ಷೆಗೆ ಗೈರು ಹಾಜರಾದರೆ, ಮತ್ತೆ ಪ್ರತ್ಯೇಕ ಪರೀಕ್ಷೆ ಕೊಡುವುದಿಲ್ಲ. ಮುಂದಿನ ಪರೀಕ್ಷೆಯಲ್ಲಿಯೇ ಪರೀಕ್ಷೆ ತೆಗೆದುಕೊಳ್ಳಬೇಕು ಎಂದರು.
ಇನ್ನೊಂದು ವಾರದಲ್ಲಿ ಶಿಕ್ಷಕರ ನೇಮಕಾತಿಗಾಗಿ ನೋಟಿಫಿಕೇಷನ್ ಹೊರಡಿಸಲಾಗುತ್ತದೆ. 15 ಸಾವಿರ ಶಿಕ್ಷಕರ ನೇಮಕಾತಿಯನ್ನು ಮಾಡಿಕೊಳ್ಳಲಾಗುವುದು. 5 ಸಾವಿರ ಕಲ್ಯಾಣ ಕರ್ನಾಟಕ, 10 ಸಾವಿರ ಕರ್ನಾಟಕ ಭಾಗಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು.