ಅನುಪಯುಕ್ತ ಹುದ್ದೆಗಳಿಗೆ ಕತ್ತರಿ; ವಿವಿಧ ಇಲಾಖೆಯ ಸರಣಿ ಸಭೆ
ಬೆಂಗಳೂರು, ಸೆಪ್ಟೆಂಬರ್ 27: ಕರ್ನಾಟಕ ಸರ್ಕಾರ ಕೆಲವು ವರ್ಷಗಳ ಹಿಂದೆ ಅನುಪಯುಕ್ತ ಹುದ್ದೆಗಳನ್ನು ರದ್ದುಗೊಳಿಸುವುದು ಮತ್ತು ವಿವಿಧ ಇಲಾಖೆಗಳನ್ನು ವಿಲೀನ ಮಾಡುವ ಕುರಿತು ತೀರ್ಮಾನ ಕೈಗೊಂಡಿತ್ತು.
ಈ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರ್ಕಾರದ ವಿವಿಧ ಇಲಾಖೆ/ ಕಚೇರಿಗಳ ವಿಲೀನಾತಿ/ ರದ್ದುಗೊಳಿಸುವಿಕೆ ಬಗ್ಗೆ ವಿವಿಧ ವೃಂದದಲ್ಲಿ ಅನುಪಯುಕ್ತವೆಂದು ಕಂಡು ಬಂದಂತಹ ಹುದ್ದೆಗಳ ಮಾಹಿತಿ ಒದಗಿಸಲು ಸರಣಿ ಸಭೆ ನಡೆಸುತ್ತಿದೆ.
ಹೆಸ್ಕಾಂ ಅಪ್ರೆಂಟಿಸ್ ನೇಮಕಾತಿ; ಆಸಕ್ತರು ಅರ್ಜಿ ಹಾಕಿ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧ್ಯಕ್ಷರ ನೇತೃತ್ವದಲ್ಲಿ ಬಹುಮಹಡಿ ಕಟ್ಟಡದಲ್ಲಿ ಸೋಮವಾರದಿಂದ ವಿವಿಧ ಇಲಾಖೆಗಳ ಸಭೆ ನಡೆಯುತ್ತಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಆರ್ಥಿಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಭೆ ಮೊದಲು ನಡೆಯಲಿದೆ.
ಈ ಸಭೆಗಳ ಕುರಿತು ಈಗಾಗಲೇ ಸಂಬಂಧಿಸಿದ ಸಚಿವಾಲಯ ಇಲಾಖೆಗಳ ನೋಡಲ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸಭೆಗೆ ಯಾವ ರೀತಿ ಮಾಹಿತಿ ತರಬೇಕು ಎಂದು ನಮೂನೆಯನ್ನು ಕಳಿಸಲಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎನ್. ಎಸ್. ಗಾಯಿತ್ರಿದೇವಿ ಈಗಾಗಲೇ ಕಳಿಸಿರುವ ಅಗತ್ಯ ನಮೂನೆ ಜೊತೆಗೆ ಅಗತ್ಯ ಮಾಹಿತಿ ಜೊತೆಗೆ ತಪ್ಪದೇ ಸಭೆಗೆ ಹಾಜರಾಗಬೇಕು ಎಂದು ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕರ್ನಾಟಕದ ಹೈಕೋರ್ಟ್ ನೇಮಕಾತಿ; ಸ್ನಾತಕೋತ್ತರ ಪದವೀಧರರು ಅರ್ಜಿ ಹಾಕಿ
ಸೆಪ್ಟೆಂಬರ್ 27ರ ಸೋಮವಾರದಿಂದ ಅಕ್ಟೋಬರ್ 21ರ ತನಕ ವಿವಿಧ ಇಲಾಖೆಗಳ ಸಭೆಗಳು ನಡೆಯಲಿವೆ. ಸಭೆಯ ಬಳಿಕ ಮುಂದಿನ ಕ್ರಮದ ಬಗ್ಗೆ ಸರ್ಕಾರ ತೀರ್ಮಾನವನ್ನು ಕೈಗೊಳ್ಳಲಿದೆ. ಅನಗತ್ಯ ಹುದ್ದೆಗಳನ್ನು ರದ್ದುಗೊಳಿಸುವುದು, ಹೆಚ್ಚುವರಿ ಹುದ್ದೆಗಳಲ್ಲಿ ಇರುವವರನ್ನು ಮಾತೃ ಇಲಾಖೆಗೆ ವಾಪಸ್ ಕಳಿಸುವುದು, ಕೆಲವು ಇಲಾಖೆಗಳ ವಿಲೀನದ ಬಗ್ಗೆ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ವಿವಿಧ ಇಲಾಖೆಗಳ ವಿಲೀನ, ನಿಗಮ-ಮಂಡಳಿಗಳ ಹೆಚ್ಚುವರಿ ಹುದ್ದೆ ರದ್ದು ಈ ಕ್ರಮಗಳಿಂದ ಸರ್ಕಾರಕ್ಕೆ ವಾರ್ಷಿಕ 2 ಸಾವಿರ ಕೋಟಿ ರೂ. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.
ಜಲಸಂಪನ್ಮೂಲ ಇಲಾಖೆಯಲ್ಲಿ 5 ಸಾವಿರಕ್ಕೂ ಅಧಿಕ ಹುದ್ದೆ ಭರ್ತಿ
ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಸರ್ಕಾರ ಆಡಳಿತ ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಇದೇ ವಿಚಾರವಾಗಿ ಕಂದಾಯ ಸಚಿವ ಆರ್. ಅಶೋಕ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ಸಹ ರಚನೆ ಮಾಡಲಾಗಿತ್ತು.
ಈ ಹಿಂದೆ ಸಹ ಸರ್ಕಾರ ಆಡಳಿತ ಸುಧಾರಣೆಗಾಗಿ ವರದಿಗಳನ್ನು ಮಾಡಿಸಿತ್ತು. ವೀರಪ್ಪ ಮೊಯಿಲಿ ಮತ್ತು ಹಾರನಹಳ್ಳಿ ರಾಮಸ್ವಾಮಿ ಅಧ್ಯಕ್ಷತೆಯ ಆಯೋಗಗಳು ವರದಿಯನ್ನು ಸಲ್ಲಿಸಿದ್ದವು. ಇಲಾಖೆಗಳ ವಿಲೀನದ ಮೂಲಕ ಸರ್ಕಾರದ ಮೇಲಿನ ಆರ್ಥಿಕ ಹೊರೆ ತಗ್ಗಿಸುವ ಜೊತೆಗೆ ಕಡತ ವಿಲೇವಾರಿಗೆ ಸಹ ವೇಗ ನೀಡಲು ಸರ್ಕಾರ ಚಿಂತನೆ ನಡೆಸಿದೆ.
ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಹಾರನಹಳ್ಳಿ ರಾಮಸ್ವಾಮಿ ಅಧ್ಯಕ್ಷತೆಯ ಆಡಳಿತ ಸುಧಾರಣಾ ಆಯೋಗ ರಚಿಸಲಾಗಿತ್ತು. 25,000 ಹುದ್ದೆಗಳನ್ನು ವಿಆರ್ಎಸ್ ಮೂಲಕ ಕಡಿತಗೊಳಿಸಲು ಆಯೋಗ ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು.
ಯಾವ ಇಲಾಖೆ ಸಭೆ ಎಂದು?; ಸೆಪ್ಟೆಂಬರ್ 29ರಂದು ಕಂದಾಯ, ಕಾನೂನು, ಕೃಷಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಸಭೆ ನಡೆಯಲಿದೆ. ಅಕ್ಟೋಬರ್ 1ರಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಸಮಾಜ ಕಲ್ಯಾಣ, ಲೋಕೋಪಯೋಗಿ ಮತ್ತು ಹಿಂದುಳಿದ ವರ್ಷಗಳ ಕಲ್ಯಾಣ ಇಲಾಖೆ ಸಭೆ ಇದೆ.
ಅಕ್ಟೋಬರ್ 4ರಂದು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ, ಕಾರ್ಮಿಕ ಇಲಾಖೆ, ತೋಟಗಾರಿಕಾ ಇಲಾಖೆ ಸಭೆ ಇದೆ. ಅಕ್ಟೋಬರ್ 7ರಂದು ಅಲ್ಪ ಸಂಖ್ಯಾತರ ಕಲ್ಯಾಣ ಅಭಿವೃದ್ಧಿ ಇಲಾಖೆ, ಸಂಸದೀಯ ವ್ಯವಹಾರ ಮತ್ತು ಶಾಸನ ರಚನಾ ಇಲಾಖೆ, ಸಹಕಾರ, ಸಣ್ಣ ನೀರಾವರಿ ಇಲಾಖೆ ಸಭೆ ನಿಗದಿಯಾಗಿದೆ.
ಅಕ್ಟೋಬರ್ 11ರಂದು ಸಾರಿಗೆ, ಅಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸಭೆ ಇದೆ.
ಅಕ್ಟೋಬರ್ 13ರಂದು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಭೆ ನಿಗದಿಗೊಂಡಿದೆ.
ಅಕ್ಟೋಬರ್ 18ರಂದು ಕನ್ನಡ ಮತ್ತು ಸಂಸ್ಕೃತಿ, ವಸತಿ ಇಲಾಖೆ, ಇಂಧನ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) ಸಭೆ ಇದೆ.
ಅಕ್ಟೋಬರ್ 21ರಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಭೆ ಇದೆ ಜೊತೆಗೆ ಮೂಲಸೌಲಭ್ಯ ಅಭಿವೃದ್ಧಿ, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಭೆ ನಡೆಯಲಿದೆ.