ಪೊಲೀಸ್ ಪೇದೆಗಳ ನೇಮಕಾತಿಯಲ್ಲಿ ಮಹತ್ವದ ಬದಲಾವಣೆ
ಬೆಂಗಳೂರು, ಮಾರ್ಚ್ 15 : ಕರ್ನಾಟಕ ಸರ್ಕಾರ ಪೊಲೀಸ್ ಪೇದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ ತಂದಿದೆ. ರಿಸರ್ವ್ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳ ನೇಮಕಾತಿಯಲ್ಲಿ ಮೊದಲು ಲಿಖಿತ ಪರೀಕ್ಷೆ ನಡೆಸಲು ತೀರ್ಮಾನ ಕೈಗೊಂಡಿದೆ.
ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ವೃಂದ ಮತ್ತು ನೇಮಕಾತಿ) ನಿಯಮ 2020 ಎಂಬ ಕರಡು ಅಧಿಸೂಚನೆ ಪ್ರಕಟಿಸಲಾಗಿದೆ. ಈ ನಿಯಮ ಬದಲಾವಣೆ ಬಗ್ಗೆ ಆಕ್ಷೇಪಣೆಗಳು ಇದ್ದರೆ 15 ದಿನದಲ್ಲಿ ಸಲ್ಲಿಸಬಹುದಾಗಿದೆ.
ಕರ್ನಾಟಕ ಪೊಲೀಸ್ ನೇಮಕಾತಿ; 4 ಸಾವಿರ ಹುದ್ದೆ ಭರ್ತಿಗೆ ಒಪ್ಪಿಗೆ
ಈ ಅಧಿಸೂಚನೆಯು ಕರ್ನಾಟಕ ವಿಶೇಷ ಮೀಸಲು ಪಡೆ (ಕೆಎಸ್ಆರ್ಪಿ) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹುದ್ದೆಯಿಂದ ಹಿಡಿದು ಅನುಯಾಯಿ ಹುದ್ದೆಗಳ ತನಕ, ಯಾವ-ಯಾವ ಹುದ್ದೆಗಳಿಗೆ ಹೇಗೆ ನೇಮಕಾತಿ ನಡೆಯಲಿದೆ ಎಂಬ ವಿವರವನ್ನು ಒಳಗೊಂಡಿದೆ.
ಪ್ರಸ್ತುತ ನೇಮಕಾತಿ ಸಂದರ್ಭದಲ್ಲಿ ಮೊದಲು ಸಹಿಷ್ಣುತೆ ಮತ್ತು ದೈಹಿಕ ಪರೀಕ್ಷೆ ನಡೆಸಿ ಅರ್ಹರಾದವರಿಗೆ ಮಾತ್ರ ಲಿಖಿತ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ, ಇನ್ನು ಮುಂದೆ ಲಿಖಿತ ಪರೀಕ್ಷೆ ಮೊದಲು ನಡೆಯಲಿದೆ ಎಂದು ಅಧಿಸೂಚನೆ ಸ್ಪಷ್ಟಪಡಿಸಿದೆ.
ಈಗಾಗಲೇ ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಮೊದಲು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು 1:5 ಅನುಪಾತದಲ್ಲಿ ಫಿಸಿಕಲ್ ಟೆಸ್ಟ್ ಮತ್ತು ಸಹಿಷ್ಣುತೆ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ.
ಕೆಪಿಎಸ್ಸಿ ನೇಮಕಾತಿ; 1080 ದ್ವಿತೀಯ ದರ್ಜೆ ಸಹಾಯಕ ಹುದ್ದೆ ಭರ್ತಿ
ಈಗ ವಿಶೇಷ ಮೀಸಲು ಪಡೆಯ ಎಲ್ಲಾ ಹುದ್ದೆಗಳಿಗೆ ಈ ಮಾದರಿಯಲ್ಲಿಯೇ ನೇಮಕಾತಿ ನಡೆಸಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಇನ್ನು ಮುಂದೆ ನೇಮಕಾತಿ ಸಂದರ್ಭದಲ್ಲಿ ಶೇ 25ರಷ್ಟು ಹೆಚ್ಚು ಅಭ್ಯರ್ಥಿಗಳ ಹೆಚ್ಚುವರಿ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
ಒಂದು ವೇಳೆ ಅಂತಿಮ ಪಟ್ಟಿಯಲ್ಲಿನ ಅಭ್ಯರ್ಥಿಗಳು ಹುದ್ದೆ ನಿರಾಕರಿಸಿದಲ್ಲಿ ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. ಇದರಿಂದಾಗಿ ನಿಗದಿಯಷ್ಟು ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗಲಿದೆ.