ಕೆಎಸ್ಆರ್ಟಿಸಿಗೆ ಹೊರಗುತ್ತಿಗೆ ಆಧಾರದಲ್ಲಿ ಚಾಲಕರ ನೇಮಕಾತಿ
ಬೆಂಗಳೂರು, ಆಗಸ್ಟ್ 01: ಬಸ್ ಚಾಲಕರ ಕೊರತೆಯನ್ನು ನಿರ್ವಹಣೆ ಮಾಡುವುದಕ್ಕೆ ರಾಜ್ಯ ಸರ್ಕಾರ ಹೊಸ ಯೋಜನೆ ಹಾಕಿಕೊಂಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್ಆರ್ಟಿಸಿ) ನೀತಿಯಲ್ಲಿ ಪ್ರಮುಖ ಬದಲಾವಣೆ ಮಾಡಿಕೊಳ್ಳಲಾಗಿದ್ದು, ಹೊರಗುತ್ತಿಗೆ ಆಧಾರದಲ್ಲಿ ಚಾಲಕನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭಿಸಿದೆ.
ಖಾಸಗಿ ಕಂಪನಿಗಳ ಮೂಲಕ ಒಟ್ಟು 10 ಕೋಟಿ ರೂಪಾಯಿ ವೆಚ್ಚದಲ್ಲಿ 350 ಚಾಲಕರನ್ನು ಏಜೆನ್ಸಿ ಮುಖೇನ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತದೆ. ಆ ಮೂಲಕ ಸಿಬ್ಬಂದಿ ಕೊರತೆ ನೀಗಿಸಿಕೊಳ್ಳಲು ಯೋಜನೆ ಹಾಕಿಕೊಳ್ಳಲಾಗಿದೆ.
ಸಿಬ್ಬಂದಿ ಕೊರತೆ: ಕಂಡಕ್ಟರ್ ರಹಿತ ಬಸ್ ಸೇವೆಗೆ ಮಾರ್ಗ ಗುರುತಿಸುತ್ತಿರುವ ಬಿಎಂಟಿಸಿ
ರಾಜ್ಯದಲ್ಲಿ ಸಿಬ್ಬಂದಿ ಕೊರತೆಯ ಹೊರತಾಗಿ ಕೆಎಸ್ಆರ್ಟಿಸಿಯು ಮಂಗಳೂರು, ಪುತ್ತೂರು ಮತ್ತು ಚಾಮರಾಜನಗರ ವಿಭಾಗಗಳಂತಹ ಕರ್ತವ್ಯ ನಿಲ್ದಾಣಗಳಿಂದ ವರ್ಗಾವಣೆಗೆ ಆದ್ಯತೆ ನೀಡುವ ಸಮಸ್ಯೆಯನ್ನೂ ಎದುರಿಸುತ್ತಿದೆ.
ಸಿಬ್ಬಂದಿ ಕೊರತೆ ನಿರ್ವಹಣೆಗಾಗಿ ಹೊಸ ನೀತಿ
ಈ ರೀತಿಯ ಮೊದಲ ವ್ಯವಸ್ಥೆಯು ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿರುವ ವಿಭಾಗಗಳಲ್ಲಿ ಅವಶ್ಯಕತೆಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ. ಸರ್ಕಾರದ ನೀತಿಯಲ್ಲಿ ಯಶಸ್ವಿ ಆಗುವ ಬಿಡ್ ದಾರರು ಮಂಗಳೂರಿಗೆ 150, ಪುತ್ತೂರಿಗೆ 100, ರಾಮನಗರಕ್ಕೆ 50 ಮತ್ತು ಚಾಮರಾಜನಗರ ವಿಭಾಗಕ್ಕೆ 50 ಚಾಲಕರನ್ನು ಒದಗಿಸುತ್ತಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಗುತ್ತಿಗೆೆ ಆಧಾರದಲ್ಲಿ ಚಾಲಕರ ನೇಮಕ ಮಾಡುತ್ತಿರುವುದು ಏಕೆ?
"ನಮ್ಮ ಆರ್ಥಿಕ ಸ್ಥಿತಿಯಲ್ಲಿ ಹೊಸದಾಗಿ ಚಾಲಕರನ್ನು ನೇಮಿಸಿಕೊಳ್ಳಲು ಸರ್ಕಾರದಿಂದ ಅನುಮತಿ ಪಡೆಯುವುದಕ್ಕೆ ಸಾಧ್ಯವಿಲ್ಲ. ಅಲ್ಲದೇ ಸದ್ಯ ಉದ್ಯೋಗದಲ್ಲಿ ಇರುವ ಸಾರಿಗೆ ನೌಕರರು ಮಂಗಳೂರು ಮತ್ತು ಪುತ್ತೂರಿನಂತಹ ಸ್ಥಳಗಳಲ್ಲಿ ಕೆಲಸ ಮಾಡಲು ಬಯಸುವುದಿಲ್ಲ. ಮತ್ತೊಂದೆಡೆ, ಸಾರಿಗೆ ಸೇವೆಗಳನ್ನು ಒದಗಿಸಲು ನಮಗೆ ಕನಿಷ್ಠ 1,000 ಹೆಚ್ಚುವರಿ ಚಾಲಕರು ಬೇಕು. ಪ್ರಯಾಣದ ಬೇಡಿಕೆಗೆ ಅನುಗುಣವಾಗಿ, ಈ ಟೆಂಡರ್ ಮೂಲಕ, ನಾವು ಚಾಲಕರನ್ನು ಗುತ್ತಿಗೆಯ ಮೇಲೆ ಪಡೆಯುವ ಕಾರ್ಯಸಾಧ್ಯತೆಯನ್ನು ಪರೀಕ್ಷಿಸುತ್ತೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹೊಸ ನೀತಿಯಿಂದ ಚಾಲಕರ ವೇತನ ವೆಚ್ಚ ಕಡಿತ
ಕೆಎಸ್ಆರ್ಟಿಸಿಯ ಈ ಕ್ರಮವು ವೇತನ ವೆಚ್ಚವನ್ನು ಕಡಿತಗೊಳಿಸುವ ಆಶಯವನ್ನು ಹೊಂದಿದೆ. ನಿಗಮವು ತಿಂಗಳಿಗೆ ಕನಿಷ್ಠ 25 ದಿನಗಳ ಹಾಜರಾತಿಗೆ ಪ್ರತಿ ಚಾಲಕನಿಗೆ ಸಂಭಾವನೆಯಾಗಿ 23,000 ರೂಪಾಯಿ ನೀಡುತ್ತದೆ. ಇದರ ಜೊತೆಗೆ ಚಾಲಕನ ಸೇವೆಯನ್ನು 25 ದಿನಗಳವರೆಗೆ ಬಳಸಿಕೊಳ್ಳದಿದ್ದರೆ, ಪ್ರತಿ ಗಂಟೆಗೆ ಸ್ಟೀರಿಂಗ್ ಮತ್ತು ಇತರ ಪ್ರೋತ್ಸಾಹಕಗಳಾಗಿ 100 ರೂಪಾಯಿ ವೇತನವನ್ನು ನಿಗದಿಪಡಿಸಲಾಗುತ್ತದೆ. ಆದರೆ ನಿಯಮಿತ ನೌಕರರಿಗೆ ನೀಡುವ ಯಾವುದೇ ಭತ್ಯೆಯನ್ನು ಚಾಲಕರು ಪಡೆಯುವುದಿಲ್ಲ.
ಸುರಕ್ಷತಗೆ ಆದ್ಯತೆ ನೀಡಲು ಇಲಾಖೆಯಿಂದ ಕ್ರಮ
ಹೊರಗುತ್ತಿಗೆ ಆಧಾರದಲ್ಲಿ ತೆಗೆದುಕೊಂಡ ಚಾಲಕರು ಉತ್ತಮ ನಡವಳಿಕೆಯಲ್ಲಿ ಕೆಲಸ ಮಾಡುತ್ತಾರೆ. ಇದನ್ನು ಖಚಿತಪಡಿಸಿಕೊಳ್ಳಲು ದಂಡ ಸೇರಿದಂತೆ ಅಗತ್ಯ ಷರತ್ತುಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು, ಕಳ್ಳತನ ಅಥವಾ ವಂಚನೆಯಂತಹ ಚಾಲಕರ ದುರ್ವರ್ತನೆಗಳಿಗೆ ಏಜೆನ್ಸಿಯನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಹೊರಗುತ್ತಿಗೆ ಷರತ್ತುಗಳ ಪ್ರಕಾರ, ಕಡಿಮೆ ಮೊತ್ತದ ಕಮಿಷನ್ ಕೋಟ್ ಮಾಡುವ ಖಾಸಗಿ ಏಜೆನ್ಸಿಗೆ ಗುತ್ತಿಗೆ ನೀಡಲಾಗುವುದು. ಬಿಎಂಟಿಸಿಯಲ್ಲಿ ಸಿಬ್ಬಂದಿ ಕೊರತೆ ನೀಗಿಸುವ ನಿಟ್ಟಿನಲ್ಲಿ ಜನಸಂದಣಿ ಇಲ್ಲದ ಬಸ್ಗಳಿಂದ ಕಂಡಕ್ಟರ್ಗಳನ್ನು ತೆಗೆದು ಬೇರೆ ಮಾರ್ಗಗಳಲ್ಲಿ ಮರು ನಿಯೋಜನೆ ಮಾಡುವುದಕ್ಕೆ ಮಾರ್ಗಗಳ ಅಧ್ಯಯನ ನಡೆಸಲಾಗುತ್ತಿದೆ. ಬಿಎಂಟಿಸಿ ಕ್ರಮದ ಬೆನ್ನಲ್ಲೇ ಕೆಎಸ್ಆರ್ಟಿಸಿ ಈ ಹೊಸ ನೀತಿ ಅಳವಡಿಸಿಕೊಳ್ಳಲು ಸಿದ್ದವಾಗಿದೆ.
ಕೆಎಸ್ಆರ್ಟಿಸಿ ಖಾಸಗೀಕರಣದ ಮೊದಲ ಹೆಜ್ಜೆ
ಕೆಎಸ್ಆರ್ಟಿಸಿ ಖಾಸಗೀಕರಣಕ್ಕೆ ಈ ಕ್ರಮವು ಮೊದಲ ಹೆಜ್ಜೆಯಾಗಿದೆ ಎಂದು ಕೆಎಸ್ಆರ್ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕರ ಸಮಿತಿಯ ಎಚ್. ವಿ. ಅನಂತ ಸುಬ್ಬರಾವ್ ಹೇಳಿದ್ದಾರೆ. "ಇದು ಖಾಸಗೀಕರಣದತ್ತ ಸ್ಪಷ್ಟ ಹೆಜ್ಜೆಯಾಗಿದೆ. ಸಾರ್ವಜನಿಕ ಸಾರಿಗೆಯ ಕಲ್ಪನೆಗೆ ದೊಡ್ಡ ಹೊಡೆತವಾಗಿದೆ. ಚಾಲಕನ ಕೆಲಸವು ಹೆಚ್ಚು ಕೌಶಲ್ಯಪೂರ್ಣವಾಗಿದ್ದು, ಬಹಳಷ್ಟು ಅಪಾಯಗಳನ್ನು ಒಳಗೊಂಡಿರುತ್ತದೆ. ಅವರು ಕೇವಲ 25,000 ರೂಪಾಯಿಗೆ ಕೆಲಸ ಮಾಡುತ್ತಾರೆ ಎಂದು ನಾವು ಹೇಗೆ ನಿರೀಕ್ಷಿಸಬಹುದು? ಮೇಲಾಗಿ, ಖಾಸಗಿ ಉದ್ಯೋಗಿ ಕೆಎಸ್ಆರ್ಟಿಸಿ ನೌಕರರಂತೆ ಎಂದಿಗೂ ಬದ್ಧರಾಗಿರಲಾರರು" ಎಂದು ಹೇಳಿದ್ದಾರೆ.
Recommended Video