ಅಗ್ನಿಪಥ್ ಯೋಜನೆಯಡಿ ಭಾರತೀಯ ವಾಯು ಸೇನೆ ಸೇರ್ಪಡೆಗೆ 56,960 ಅರ್ಜಿ
ನವದೆಹಲಿ, ಜೂನ್ 26: ಅಗ್ನಿಪಥ್ ನೇಮಕಾತಿ ಯೋಜನೆಯಡಿಯಲ್ಲಿ ಭಾರತೀಯ ವಾಯುಪಡೆಯು (IAF) ಭಾನುವಾರದ ವೇಳೆಗೆ ಒಟ್ಟು 56,960 ಅರ್ಜಿಗಳನ್ನು ಸ್ವೀಕರಿಸಿದೆ ಎಂದು ತಿಳಿದು ಬಂದಿದೆ. ಕಳೆದ ಶುಕ್ರವಾರ ನೋಂದಣಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಮೂರು ದಿನಗಳಲ್ಲಿ ಗರಿಷ್ಠ ಪ್ರಮಾಣದ ಅರ್ಜಿಗಳನ್ನು ಸ್ವೀಕರಿಸಲಾಗಿದೆ.
"56960! ಎನ್ನುವುದು https://agnipathvayu.cdac.in ನಲ್ಲಿ ಅಗ್ನಿಪಥ್ ನೇಮಕಾತಿ ಅರ್ಜಿ ಪ್ರಕ್ರಿಯೆಗೆ ಪ್ರತಿಕ್ರಿಯೆಯಾಗಿ ಭವಿಷ್ಯದ ಅಗ್ನಿವೀರ್ಗಳಿಂದ ಇಲ್ಲಿಯವರೆಗೆ ಸ್ವೀಕರಿಸಲಾದ ಒಟ್ಟು ಅರ್ಜಿಗಳ ಸಂಖ್ಯೆಯಾಗಿದೆ. ನೋಂದಣಿ ಜುಲೈ 5ರಂದು ಮುಕ್ತಾಯಗೊಳ್ಳುತ್ತದೆ", ಎಂದು ಐಎಎಫ್ ಭಾನುವಾರ ಟ್ವಿಟರ್ನಲ್ಲಿ ತಿಳಿಸಿದೆ.
ಅಗ್ನಿಪಥ್ ಯೋಜನೆಯಡಿ ವಾಯುಸೇನೆಗೆ ನೇಮಕಾತಿ : ಅರ್ಜಿ ಸಲ್ಲಿಸುವುದು ಹೇಗೆ?
ಕಳೆದ ಜೂನ್ 14 ರಂದು ಅಗ್ನಿಪಥ್ ಯೋಜನೆಯನ್ನು ಜಾರಿಗೊಳಿಸಿದ ಕೇಂದ್ರ ಸರ್ಕಾರವು 17 ಮತ್ತು 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ಸೇನೆಗೆ ಸೇರಿಸಲಾಗುವುದು ಮತ್ತು ಅವರಲ್ಲಿ ಶೇ.25ರಷ್ಟು ಸೈನಿಕರನ್ನು ನಿಯಮಿತ ಸೇವೆಗೆ ಸೇರಿಸಲಾಗುವುದು ಎಂದು ಹೇಳಿತು.
ಅಗ್ನಿವೀರರಿಗೆ ಉದ್ಯೋಗದ ವಿಶ್ವಾಸ; ಕೇಂದ್ರ ಸರ್ಕಾರವು ಜೂನ್ 16ರಂದು ಅಗ್ನಿಪಥ್ ಯೋಜನೆಯಡಿಯಲ್ಲಿ ನೇಮಕಾತಿಗಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು 2022ನೇ ವರ್ಷಕ್ಕೆ 21 ರಿಂದ 23 ವರ್ಷಗಳಿಗೆ ಹೆಚ್ಚಿಸಿತು. ಅಗ್ನಿವೀರರ ನಿವೃತ್ತಿಯ ನಂತರದಲ್ಲಿ ಆದ್ಯತೆಯ ಮೇರೆಗೆ ಕೇಂದ್ರ ಅರೆಸೇನಾ ಪಡೆಗಳು ಮತ್ತು ರಕ್ಷಣಾ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಉದ್ಯೋಗ ನೀಡುವುದರ ಬಗ್ಗೆ ಭರವಸೆ ನೀಡಲಾಯಿತು. ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳಲ್ಲಿ 'ಅಗ್ನಿವೀರರು' ಎಂದು ಘೋಷಿಸಿರುವ ಸೈನಿಕರನ್ನು ಪೊಲೀಸ್ ಪಡೆಗಳಲ್ಲಿ ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದವು.
ಕೇಂದ್ರ ಸರ್ಕಾರದ ಯೋಜನೆ ವಿರುದ್ಧ ಪ್ರತಿಭಟನೆ: ಕೇಂದ್ರ ಸರ್ಕಾರ ಮತ್ತು ರಾಜ್ಯಗಳ ಭರವಸೆ ಹೊರತಾಗಿಯೂ ದೇಶಾದ್ಯಂತ ಅಗ್ನಿಪಥ್ ನೇಮಕಾತಿ ಯೋಜನೆ ವಿರುದ್ಧ ಉಗ್ರ ಸ್ವರೂಪದ ಪ್ರತಿಭಟನೆಗಳು ನಡೆದವು. ಉತ್ತರ ಪ್ರದೇಶ, ಬಿಹಾರ, ಹರ್ಯಾಣ, ಮಧ್ಯಪ್ರದೇಶ ಸೇರಿದಂತೆ ಎಂಟು ರಾಜ್ಯಗಳಲ್ಲಿ ಪ್ರತಿಭಟನೆಯು ಹಿಂಸಾಚಾರಕ್ಕೂ ಕಾರಣವಾಗಿತ್ತು.
ಅಗ್ನಿಪಥ್ ನೇಮಕಾತಿ ಯೋಜನೆ: ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯು ದೇಶದ ಮೂರು ಸೇನೆಗಳಿಗೆ ಯೋಧರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದ್ದಾಗಿದೆ. 17.5 ರಿಂದ 23 ವಯೋಮಾನ ಯುವಕರನ್ನು ಒಪ್ಪಂದದ ಮೇರೆಗೆ ನಾಲ್ಕು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಅವಧಿಯಲ್ಲಿ 6 ತಿಂಗಳು ತರಬೇತಿಯೂ ಸೇರಿರುತ್ತದೆ. ನಾಲ್ಕು ವರ್ಷದ ಸೇವಾವಧಿಯಲ್ಲಿ ಮಾಸಿಕ 30 ರಿಂದ 40 ಸಾವಿರ ರೂಪಾಯಿ ವೇತನದ ಜೊತೆಗೆ ವೈದ್ಯಕೀಯ ವಿಮೆ ಮತ್ತು ಆರೋಗ್ಯ ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ. ಆದರೆ ನಾಲ್ಕು ವರ್ಷಗಳ ನಂತರ ಅಗ್ನಿಪಥ್ ಯೋಜನೆಯಡಿ ನೇಮಕಗೊಂಡ ಶೇ.75ರಷ್ಟು ಯೋಧರನ್ನು ಸೇನೆಯಿಂದ ವಿಮುಕ್ತಿಗೊಳಿಸಲಾಗುವುದು. ತದನಂತರದಲ್ಲಿ ಈ ಯೋಧರಿಗೆ ಯಾವುದೇ ರೀತಿ ಪಿಂಚಣಿ ಸೌಲಭ್ಯವನ್ನು ನೀಡಲಾಗುವುದಿಲ್ಲ.
Recommended Video
ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಅಗ್ನಿಪಥ್ ಯೋಜನೆ ಅಡಿಯಲ್ಲಿ ಸುಮಾರು 10 ಲಕ್ಷ ಯುವಕರಿಗೆ ಉದ್ಯೋಗವನ್ನು ಕಲ್ಪಿಸುವ ಗುರಿಯೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು.