ನೇಮಕಾತಿ ಸ್ಥಗಿತ; ಹಲವರ ಕೈ ತಪ್ಪಲಿದೆ ಸರ್ಕಾರಿ ಉದ್ಯೋಗ!
ಬೆಂಗಳೂರು, ನವೆಂಬರ್ 23 : ಕೋವಿಡ್ ಹರಡದಂತೆ ಲಾಕ್ ಡೌನ್ ಘೋಷಣೆ ಮಾಡಿದ ಪರಿಣಾಮ ಸರ್ಕಾರಕ್ಕೆ ಅಪಾರವಾದ ನಷ್ಟ ಉಂಟಾಗಿದೆ. ಕರ್ನಾಟಕ ಸರ್ಕಾರ ಹಲವು ಇಲಾಖೆಗಳ ನೇಮಕಾತಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ, ಇದರಿಂದಾಗಿ ಸರ್ಕಾರಿ ಕೆಲಸಕ್ಕೆ ಸೇರುವ ಉತ್ಸಾಹದಲ್ಲಿದ್ದ ಅಭ್ಯರ್ಥಿಗಳಿಗೆ ಆತಂಕ ಉಂಟಾಗಿದೆ.
ಲಾಕ್ ಡೌನ್ ತೆರವುಗೊಳಿಸಿದ ಬಳಿಕ ಆರ್ಥಿಕ ಪರಿಸ್ಥಿತಿ ಮತ್ತು ವಿವಿಧ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಹಲವು ಇಲಾಖೆಗಳ ನೇಮಕಾತಿಯನ್ನು ಸರ್ಕಾರ ರದ್ದುಪಡಿಸಿದೆ. ಅತಿ ಅಗತ್ಯ ಇರುವ ಹುದ್ದೆಗಳನ್ನು ಮಾತ್ರ ಭರ್ತಿ ಮಾಡುತ್ತಿದೆ.
ಕರ್ನಾಟಕ; ಸರ್ಕಾರಿ ನೇಮಕಾತಿಗಳು ಸಂಪೂರ್ಣ ಸ್ಥಗಿತ
ಸರ್ಕಾರಿ ಇಲಾಖೆಗಳ ನೇಮಕಾತಿ ಮತ್ತೆ ಯಾವಾಗ ಆರಂಭವಾಗಲಿದೆ? ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ನೇಮಕಾತಿ ಮುಂದೂಡಿರುವುದರಿಂದ ವಯೋಮಿತಿ ಹೆಚ್ಚಾಗಲಿದ್ದು, ಹಲವಾರು ಅಭ್ಯರ್ಥಿಗಳ ಸರ್ಕಾರಿ ಕೆಲಸದ ಕನಸಿಗೆ ಹಿನ್ನಡೆ ಉಂಟಾಗಿದೆ.
ಬಿಎಂಆರ್ಸಿಎಲ್ ನೇಮಕಾತಿ ರದ್ದು; ಪರೀಕ್ಷಾ ಶುಲ್ಕ ವಾಪಸ್
ನೇಮಕಾತಿ ಸ್ಥಗಿತ? : ಲೋಕೋಪಯೋಗಿ, ಕೆಪಿಟಿಸಿಎಲ್, ಬಿಎಂಆರ್ಸಿಎಲ್, ಕೆಪಿಸಿಎಲ್, ಕೆಎಸ್ಆರ್ಟಿಸಿ ಸೇರಿದಂತೆ ವಿವಿಧ ಇಲಾಖೆ, ಸಂಸ್ಥೆಗಳಲ್ಲಿ ನೇಮಕಾತಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.
ಕೆಪಿಎಸ್ಸಿ ಮುಖ್ಯ ಪರೀಕ್ಷೆ 2021 ಮುಂದೂಡಿಕೆ
ಕೆಲವು ಇಲಾಖೆಗಳಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗಿತ್ತು, ಕೆಲವು ಕಡೆ ನೇಮಕಾತಿ ಆದೇಶ ಕೈಗೆ ಬರುವುದು ಬಾಕಿ ಇತ್ತು. ಆದರೆ, ಕೋವಿಡ್ ಕಾರಣದಿಂದಾಗಿ ಎಲ್ಲಾ ನೇಮಕಾತಿಗಳನ್ನು ಮುಂದೂಡಲಾಗಿದೆ, ಕೆಲವುಗಳನ್ನು ರದ್ದುಗೊಳಿಸಲಾಗಿದೆ.
ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡು ಸರ್ಕಾರಿ ಕೆಲಸ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಾದವರು, ಪರೀಕ್ಷೆ ಬರೆದವರು ಈಗ ಆತಂಕಕ್ಕೆ ಒಳಗಾಗಿದ್ದಾರೆ. ಯಾವಾಗ ನೇಮಕಾತಿ ಮತ್ತೆ ಆರಂಭವಾಗಲಿದೆ? ಎಂಬುದು ಇನ್ನೂ ಖಚಿತವಾಗಿಲ್ಲ.
ವಯೋಮಿತಿ ಸಮಸ್ಯೆ: ಪುನಃ ನೇಮಕಾತಿ ಆರಂಭವಾಗುವಾಗ ಹಲವಾರು ಅಭ್ಯರ್ಥಿಗಳ ವಯೋಮಿತಿ ಏರಿಕೆಯಾಗಿರುತ್ತದೆ. ಆದ್ದರಿಂದ, ಅವರು ಕಷ್ಟಪಟ್ಟು ಓದಿದ್ದರೂ ಸಹ ವಯೋಮಿತಿ ಕಾರಣಕ್ಕೆ ಸರ್ಕಾರಿ ಉದ್ಯೋಗದಿಂದ ವಂಚಿತರಾಗಲಿದ್ದಾರೆ.
ಕೆಎಸ್ಆರ್ಟಿಸಿ, ಬಿಎಂಆರ್ಸಿಎಲ್ ಈಗಾಗಲೇ ನೇಮಕಾತಿ ಸ್ಥಗಿತಗೊಳಿಸಿರುವುದಾಗಿ ಪ್ರಕಟಣೆ ಹೊರಡಿಸಿವೆ. 2020ರ ಮಾರ್ಚ್, ಏಪ್ರಿಲ್ನಲ್ಲಿ ಕರೆದಿದ್ದ ಹುದ್ದೆಗಳನ್ನು ರದ್ದು ಮಾಡಲಾಗಿದ್ದು, ಉದ್ಯೋಗಾಕಾಂಕ್ಷಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
Recommended Video
ವಿವಿಧ ಇಲಾಖೆಗಳ ನೇಮಕಾತಿಗಾಗಿ ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತದೆ. ಈ ಪರೀಕ್ಷೆಗಾಗಿ ಹಗಲಿರುಳು ಓದಿದ ಅಭ್ಯರ್ಥಿಗಳು ಈಗ ಸರ್ಕಾರದ ತೀರ್ಮಾನದಿಂದಾಗಿ ಅಸಮಾಧಾನಗೊಂಡಿದ್ದಾರೆ. ಲಾಕ್ ಡೌನ್ ಪರಿಣಾಮ ಸರ್ಕಾರಕ್ಕೆ ಆರ್ಥಿಕ ನಷ್ಟವಾಗಿದ್ದು ವೆಚ್ಚಕ್ಕೆ ಕಡಿವಾಣ ಹಾಕಲಾಗುತ್ತಿದೆ. ಇದರ ಭಾಗವಾಗಿಯೇ ನೇಮಕಾತಿ ಸ್ಥಗಿತಗೊಳಿಸಲಾಗಿದೆ.