5 ಸಾವಿರ ಉಪನ್ಯಾಸಕ, 708 ಪ್ರಾಂಶುಪಾಲ ಹುದ್ದೆಗೆ ಅರ್ಜಿ ಹಾಕಿ
ಬೆಂಗಳೂರು, ಮೇ 07 : ಕರ್ನಾಟಕದ ಉನ್ನತ ಶಿಕ್ಷಣ ಇಲಾಖೆ ಪದವಿ ಕಾಲೇಜುಗಳ ಉಪನ್ಯಾಸಕ ಮತ್ತು ಪ್ರಾಂಶುಪಾಲ ಹುದ್ದೆಗಳ ಭರ್ತಿಗೆ ನೇಮಕಾತಿ ಮಾಡಿಕೊಳ್ಳಲಿದೆ. ಮೇ 23ರ ಬಳಿಕ ಅಧಿಸೂಚನೆ ಹೊರಬೀಳಲಿದೆ.
ಸ್ನಾತಕೋತ್ತರ ಪದವಿ ಮುಗಿಸಿ ಪದವಿ ಕಾಲೇಜಿನ ಉಪನ್ಯಾಸಕರಾಗುವ ನಿರೀಕ್ಷೆಯಲ್ಲಿರುವವರಿಗೆ ಶೀಘ್ರವೇ ಸಿಹಿ ಸುದ್ದಿ ಸಿಗಲಿದೆ. 5,100 ಉಪನ್ಯಾಸಕ ಹಾಗೂ 708 ಪ್ರಾಂಶುಪಾಲ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ.
ಪ್ರಸ್ತುತ ಖಾಲಿ ಇರುವ ಉಪನ್ಯಾಸಕ ಮತ್ತು ಪ್ರಾಂಶುಪಾಲ ಹುದ್ದೆಗಳ ಜೊತೆಗೆ ಹೊಸದಾಗಿ ಸೃಷ್ಟಿಸುವ ಸ್ಥಾನಗಳಿಗೂ ಒಟ್ಟಿಗೆ ನೇಮಕಾತಿ ನಡೆಯಲಿದೆ. ಅತಿಥಿ ಉಪನ್ಯಾಸಕರ ಗೌರವಧವನ್ನು ಹೆಚ್ಚಳ ಮಾಡಲು ಉನ್ನತ ಶಿಕ್ಷಣ ಇಲಾಖೆ ಹಣಕಾಸು ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ.
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಏಪ್ರಿಲ್ 18 ಮತ್ತು 23ರಂದು ನಡೆದಿದೆ. ಆದರೆ, ಚುನಾವಣಾ ನೀತಿ ಸಂಹಿತೆ ಇನ್ನೂ ಜಾರಿಯಲ್ಲಿದೆ. ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, ಬಳಿಕ ನೀತಿ ಸಂಹಿತೆ ತೆರವಾಗಲಿದೆ. ಬಳಿಕ ನೇಮಕಾತಿ ಅಧಿಸೂಚನೆ ಪ್ರಕಟವಾಗಲಿದೆ....
ಹುದ್ದೆಗಳ ವಿವರ
ಉನ್ನತ ಶಿಕ್ಷಣ ಇಲಾಖೆ ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 5,100 ಉಪನ್ಯಾಸಕರು ಹಾಗೂ 708 ಪ್ರಾಂಶುಪಾಲ ಹುದ್ದೆಗಳನ್ನು ಭರ್ತಿ ಮಾಡಲಿದೆ.
ಸರ್ಕಾರಿ ಕಾಲೇಜುಗಳಲ್ಲಿ ಖಾಲಿ ಇರುವ 396 ಪ್ರಾಂಶುಪಾಲ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಜೊತೆಗೆ ಅನುದಾನಿತ ಕಾಲೇಜುಗಳಲ್ಲಿ ಹೊಸದಾಗಿ 312 ಹುದ್ದೆಗಳನ್ನು ಸೃಷ್ಟಿಸಲಾಗುತ್ತಿದೆ.
ಉಪನ್ಯಾಸಕರ ನೇಮಕಾತಿ
ಪ್ರಸ್ತುತ 1,600 ಉಪನ್ಯಾಸಕ ಹುದ್ದೆಗಳು ಖಾಲಿ ಇವೆ. ಇವುಗಳ ಜೊತೆಗೆ ಹೊಸದಾಗಿ 3,500 ಸೃಷ್ಟಿ ಮಾಡಲಾಗುತ್ತಿದೆ. ಎರಡೂ ಹುದ್ದೆಗಳಿಗೆ ಒಟ್ಟಿಗೆ ನೇಮಕಾತಿ ನಡೆಯಲಿದೆ. ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ನೇಮಕಾತಿ ಆದೇಶ ಹೊರಬೀಳಲಿದೆ.
ಉಪನ್ಯಾಸಕರ ನೇಮಕ
ಉಪನ್ಯಾಸಕರ ನೇಮಕಾತಿ ಸಮಯದಲ್ಲಿ ಅತಿಥಿ ಉಪನ್ಯಾಸಕರಿಗೆ ಆದ್ಯತೆ ನೀಡಲಾಗುತ್ತದೆ. ಭರ್ತಿ ಮಾಡುವ ಹುದ್ದೆಗಳಲ್ಲ ಅರ್ಧದಷ್ಟನ್ನು ಅತಿಥಿ ಉಪನ್ಯಾಸಕರಿಗೆ ಮೀಸಲಾಗಿಡಲಾಗುತ್ತದೆ. ಹುದ್ದೆಗೆ ಬೇಕಾದ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರಿಗೆ ಆದ್ಯತೆ ಸಿಗಲಿದೆ.
ಗೌರವ ಧನ ಹೆಚ್ಚಳ
ಹೊಸ ಹುದ್ದೆಗಳ ನೇಮಕಾತಿ ಜೊತೆಗೆ ಅತಿಥಿ ಉಪನ್ಯಾಸಕರ ಗೌರವ ಧನವನ್ನು 5 ಸಾವಿರ ರೂ. ಏರಿಕೆ ಮಾಡಲಾಗುತ್ತದೆ. ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಅತಿಥಿ ಉಪನ್ಯಾಸಕರು ಪ್ರಸ್ತುತ 11,500 ಮತ್ತು ಕೆ-ಸೆಟ್ ಯಜಿಸಿ ತೇರ್ಗಡೆಯಾದವರು 13,500 ರೂ. ಗೌರವ ಧನ ಪಡೆಯುತ್ತಿದ್ದಾರೆ. ಇಬ್ಬರಿಗೂ ಸಹ ಗೌರವ ಧನವನ್ನು ಹೆಚ್ಚಳ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.