ಬೆಂಗಳೂರು: ಸಹಕಾರ ನಗರದಲ್ಲಿ ಮೇ 28ರಂದು ಉದ್ಯೋಗ ಮೇಳ
ಬೆಂಗಳೂರು ಮೇ 26: ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಹಾಗೂ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೃಷ್ಣ ಭೈರೇಗೌಡ ಅವರ ಸ್ವಯಂ ಸೇವಕರ ತಂಡದ ವತಿಯಿಂದ ಶನಿವಾರ ಮೇ 28 ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಎಸ್ಎಸ್ಎಲ್ಸಿ, ಐಟಿಐ, ಇಂಜಿನಿಯರಿಂಗ್ ಸೇರಿದಂತೆ ಯಾವುದೇ ಪದವಿಧರರು ಕೂಡಾ ಈ ಮೇಳದಲ್ಲಿ ಭಾಗವಹಿಸಿ ಉದ್ಯೋಗಾವಕಾಶಗಳ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಸಹಕಾರ ನಗರದ ದೇವ್-ಇನ್ ಶಾಲೆಯಲ್ಲಿ ಶನಿವಾರ ಬೆಳಗ್ಗೆ 9 ಗಂಟೆಯಿಂದ ಈ ಮೇಳ ಪ್ರಾರಂಭವಾಗಲಿದೆ. ಹೆಚ್ಚಿನ ಮಾಹಿತಿಗಾಗಿ 080-23626678 ಗೆ ಸಂಪರ್ಕಿಸಲು ಕೋರಿದೆ.
110 ಕ್ಕೂ ಹೆಚ್ಚು ಕಂಪನಿಗಳು ಭಾಗಿ:
ಈ ಕುರಿತು ಪ್ರೆಸ್ಕ್ಲಬ್ನಲ್ಲಿ ಮೀನಾಕ್ಷಿ ಕೃಷ್ಣ ಭೈರೇಗೌಡ ಮಾತನಾಡಿ, "ಸತತವಾಗಿ ಕಳೆದ 5 ವರ್ಷಗಳಿಂದ ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸುತ್ತಾ ಬಂದಿದೇವೆ. ಕರೋನಾ ಸಾಂಕ್ರಾಮಿಕದ ಕಾರಣ ಕಳೆದ ಎರಡು ವರ್ಷಗಳಿಂದ ಈ ಮೇಳವನ್ನು ಆಯೋಜಿಸಲು ಆಗಿರಲಿಲ್ಲ. ಈ ಬಾರಿ ಸಾಂಕ್ರಾಮಿಕ ಕಡಿಮೆ ಆಗಿರುವ ನಿಟ್ಟಿನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ," ಎಂದು ಹೇಳಿದರು.
ಕರೋನಾ ಲಾಕ್ಡೌನ್ ನಿಂದ ಬಹಳಷ್ಟು ಜನರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ವಿದ್ಯಾಭ್ಯಾಸ ಮುಗಿಸಿರುವ ಯುವಕ ಯುವತಿಯರಿಗೆ ಉತ್ತಮ ಅವಕಾಶ ಕಲ್ಪಿಸಿಕೊಡುವುದು ನಮ್ಮ ಉದ್ದೇಶವಾಗಿದೆ. ಕಳೆದ ನಾಲ್ಕು ಮೇಳದಲ್ಲಿ ಭಾಗವಹಿಸಿದ್ದ 17 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ಈ ಬಾರಿ ಇನ್ಪೋಸಿಸ್ ಬಿಪಿಓ, ಅಪೊಲೋ, ಹೆಚ್ಡಿಎಫ್ಸಿ, ಎಸ್ಬಿಐ, ಎಲ್ಐಸಿ, ಟೆಕ್ ಮಹಿಂದ್ರ, ಐಸಿಐಸಿ, ರಿಯಲನ್ಸ್ ನಂತಹ 110 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿದ್ದು, 3 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶಗಳ ಲಭ್ಯತೆಯಿದೆ ಎಂದು ಹೇಳಿದರು.
ಕಾಂಗ್ರೆಸ್ ಬೆಂಗಳೂರು ಉತ್ತರದ ಪ್ರಧಾನ ಕಾರ್ಯದರ್ಶಿ ರಾಮಶಂಕರ್ ಹಾಜರಿದ್ದರು.
Recommended Video