ಬಿಪಿಒ, ಐಟಿ ವಲಯದ ವೈಭವ ದಿನಗಳು ಮುಗಿದವು: ಎಐಸಿಟಿಇ ಅಧ್ಯಕ್ಷ
ಉದ್ಯೋಗದ ವಿಚಾರದಲ್ಲಿ ಎಂಜಿನಿಯರಿಂಗ್ ಹಾಗೂ ಎಂಬಿಎ ವಿದ್ಯಾರ್ಥಿಗಳಿಗೆ ಭವಿಷ್ಯ ಕರಾಳವಾಗಿದೆ. ದೊಡ್ಡ ಅವಕಾಶಗಳಾಗಿದ್ದ ಐಟಿ ಹಾಗೂ ಬಿಪಿಒ ವಲಯಗಳಲ್ಲಿ ಇನ್ನೂ ಭಾರೀ ನೇಮಕಾತಿಗಳು ಆಗುವ ಸಾಧ್ಯತೆಯಿಲ್ಲ ಎಂದು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್ (ಎಐಸಿಟಿಇ) ಅಧ್ಯಕ್ಷ ಅನಿಲ್ ಸಹಸ್ರಬುಧೆ ಸಂದರ್ಶನವೊಂದರಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಟಿವಿ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಬೃಹತ್ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶಗಳು ಒಂದು ಹಂತಕ್ಕೆ ಬಂದು ನಿಂತುಬಿಟ್ಟಿವೆ. ಈಗ ಭರವಸೆ ಏನಿದ್ದರೂ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ಯಮಗಳ ಬಗ್ಗೆಯೇ ಎಂದು ಹೇಳಿದ್ದಾರೆ.
ಬೆಂಗಳೂರಿನ ಖ್ಯಾತ ವೈದ್ಯರೊಬ್ಬರ ಮೊದಲ 20 ನಿಮಿಷದ ಚಿಕಿತ್ಸೆ ಇದೇ ನೋಡಿ...
ಸಮೀಕ್ಷೆಗಳ ಪ್ರಕಾರ, ಐಟಿ ಮತ್ತು ಬಿಪಿಒ ವಲಯದ ಉದ್ಯೋಗಾವಕಾಶಗಳಲ್ಲಿ ಭಾರೀ ಇಳಿಕೆ ಆಗಿದೆ. ಈಗೇನಿದ್ದರೂ ಸ್ಟಾರ್ಟ್ ಅಪ್ ಗಳಲ್ಲಿ ಉದ್ಯೋಗ ಸೃಷ್ಟಿ ಆಗಬೇಕಿದೆ. ಫಾರ್ಮಾ ವಲಯದಲ್ಲೂ ಎಚ್ಚರಿಕೆಯ ಲಕ್ಷಣಗಳು ಗೋಚರಿಸುತ್ತಿವೆ.
ಈಗ ಎಂಬಿಎ ಹಾಗೂ ಬಿ ಟೆಕ್ ಕೋರ್ಸ್ ಗಳಿಗೆ ಬೇಡಿಕೆ ಇರುವಂತೆ ಕಂಡುಬರುತ್ತಿರುವುದು ನೀರ ಮೇಲಿನ ಗುಳ್ಳೆಯಂತೆ. ಇನ್ನು ಎರಡು ವರ್ಷಗಳಲ್ಲಿ ಇದು ಒಡೆದು ಹೋಗುತ್ತದೆ ಎಂದಿದ್ದಾರೆ ಸಹಸ್ರಬುಧೆ.
"ಫಾರ್ಮಾ ಸೀಟುಗಳು ಎಲ್ಲವೂ ಭರ್ತಿ ಆಗುತ್ತಿವೆ. ಇವುಗಳಿಗೆ ಭಾರೀ ಬೇಡಿಕೆ ಇರಲಿವೆ ಎಂಬ ನಿರೀಕ್ಷೆ ಜನರಲ್ಲಿದೆ. ಆದರೆ ಮ್ಯಾನೇಜ್ ಮೆಂಟ್ ಹಾಗೂ ಎಂಜಿನಿಯರಿಂಗ್ ಕೋರ್ಸ್ ಗಳಿಗಾದ ಗತಿಯೇ ಇನ್ನು ಒಂದೆರಡು ವರ್ಷದಲ್ಲಿ ಇದಕ್ಕೂ ಆಗಲಿದೆ" ಎಂದು ಅವರು ಹೇಳಿದ್ದಾರೆ.
AICTE ಅಂಕಿ- ಅಂಶದ ಪ್ರಕಾರ, 2016-17ರಲ್ಲಿ ಶೇ ಐವತ್ತಕ್ಕಿಂತ ಹೆಚ್ಚು ಎಂಬಿಎ ಪದವೀಧರರು ಕ್ಯಾಂಪಸ್ ಪ್ಲೇಸ್ ಮೆಂಟ್ ನಲ್ಲಿ ಆಯ್ಕೆ ಆಗಿಲ್ಲ. ಇನ್ನು ಮತ್ತೊಂದು ಸಮೀಕ್ಷೆ ಪ್ರಕಾರ, ದೇಶದ ಶೇ 95ರಷ್ಟು ಎಂಜಿನಿಯರ್ ಗಳು ಉದ್ಯೋಗಕ್ಕೆ ಸೂಕ್ತರಲ್ಲ.
ಇನ್ನು ಟಿ.ವಿ.ಮೋಹನ್ ದಾಸ್ ಪೈ ಹೇಳುವಂತೆ, ದೇಶದಲ್ಲಿ ಹತ್ತು ಕೋಟಿ ಮಂದಿ ಇಪ್ಪತ್ತೊಂದರಿಂದ ಮೂವತ್ತೈದರ ಹರೆಯದವರಿಗೆ ಸರಿಯಾದ ಕೌಶಲ ಇಲ್ಲ. ಇಂಥವರು ಭಾರತದ ಆರ್ಥಿಕತೆಗೆ ಸೂಕ್ತವೇ ಅಲ್ಲ.