ಕೆಪಿಎಸ್ಸಿ ನೇಮಕಾತಿ ವಿವಾದ; 36 ಅಧಿಕಾರಿಗಳ ಕೆಲಸಕ್ಕೆ ಕತ್ತರಿ!
ಬೆಂಗಳೂರು, ನವೆಂಬರ್ 23 : ಕರ್ನಾಟಕ ಸರ್ಕಾರ 1998 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ವಿವಾದಕ್ಕೆ ಅಂತಿಮ ತೆರೆ ಎಳೆಯಲು ತೀರ್ಮಾನಿಸಿದೆ. ಇದರಿಂದಾಗಿ 36 ಗೆಜೆಟೆಡ್ ಅಧಿಕಾರಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ.
2016ರ ಜೂನ್ 21ರಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪಿನಂತೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಪರಿಷ್ಕರಣೆ ಮಾಡಿರುವ ಪಟ್ಟಿಯನ್ನು ಸರ್ಕಾರ ತಕ್ಷಣದಿಂದಲೇ ಯಥಾವತ್ ಜಾರಿಗೆ ತರಲಿದೆ. ಈ ಮೂಲಕ ನ್ಯಾಯಾಂಗ ನಿಂದನೆಯಿಂದ ತಪ್ಪಿಸಿಕೊಳ್ಳಲು ಮುಂದಾಗಿದೆ.
1998ರ ಕೆಪಿಎಸ್ಸಿ ಹಗರಣ, ಹೈಕೋರ್ಟ್ ಮಹತ್ವದ ತೀರ್ಪು
ಸರ್ಕಾರ 2019ರ ಆಗಸ್ಟ್ 22ರಂದು ರಾಜ್ಯಪತ್ರದಲ್ಲಿ ಪ್ರಕಟಿಸಿದ ಹೊಸ ಪರಿಷ್ಕೃತ ಆಯ್ಕೆಪಟ್ಟಿ ಜಾರಿಯಿಂದಾಗಿ 11 ಐಎಎಸ್ ಅಧಿಕಾರಿಗಳು ಹಿಂಬಡ್ತಿ ಪಡೆಯಲಿದ್ದಾರೆ. 36 ಗೆಜೆಟೆಡ್ ಅಧಿಕಾರಿಗಳು ಕೆಲಸ ಕಳೆದುಕೊಳ್ಳಲಿದ್ದು, 115 ಅಧಿಕಾರಿಗಳ ಹುದ್ದೆಗಳು ಬದಲಾಗಲಿವೆ.
1998ರ ಕೆಪಿಎಸ್ಸಿ ಆಯ್ಕೆ ಪಟ್ಟಿಯಲ್ಲಿ ಗೊಂದಲ
ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ತೀರ್ಪಿನ ಪಾಲನೆಯಾಗಿಲ್ಲ ಎಂದು ನ್ಯಾಯಾಂಗ ನಿಂದನೆ ಅರ್ಜಿ ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿದೆ. ನವೆಂಬರ್ 14ರಂದು ಅರ್ಜಿಯ ವಿಚಾರಣೆ ವೇಳೆ ತೀರ್ಪು ಪಾಲನೆ ಮಾಡಲು ನ್ಯಾಯಾಲಯ 4 ವಾರಗಳ ಗಡುವು ನೀಡಿತ್ತು.
ಕೆಪಿಎಸ್ಸಿ ಎದುರು ಕೈಕಟ್ಟಿನಿಂತ ಪದವೀಧರರ ಕರುಣಾಜನಕ ಕಥೆಗಳು
ಅನರ್ಹರನ್ನು ಕೈ ಬಿಡಿ
ಕೆಪಿಎಸ್ಸಿಯ 1998ನೇ ಸಾಲಿನ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ದೂರು ದಾಖಲಾಗಿತ್ತು. ಈ ಪ್ರಕರಣ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಅನರ್ಹರನ್ನು ಕೈ ಬಿಟ್ಟು ಅರ್ಹರಿಗೆ ನೇಮಕಾತಿ ಆದೇಶ ಕೊಡಿ ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿತ್ತು. ಸುಪ್ರೀಂಕೋರ್ಟ್ ಈ ಆದೇಶವನ್ನು ಎತ್ತಿ ಹಿಡಿದಿತ್ತು. ಈ ಕುರಿತು ದಾಖಲಾಗಿದ್ದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿತ್ತು.
ಸುಗ್ರಿವಾಜ್ಞೆ ತರಲು ಯತ್ನ
ರಾಜ್ಯದಲ್ಲಿ ಆಡಳಿತ ನಡೆಸಿದ ಹಿಂದಿನ ಎರಡು ಸರ್ಕಾರಗಳು ಹಿಂಬಡ್ತಿ ಆತಂಕ ಎದುರಿಸುತ್ತಿದ್ದ ಐಎಎಸ್ ಅಧಿಕಾರಿಗಳ ರಕ್ಷಣೆಗೆ ಮುಂದಾಗಿದ್ದವು. ನ್ಯಾಯಾಲಯದ ಆದೇಶವನ್ನು ಪಾಲಿಸದೇ ಸುಗ್ರಿವಾಜ್ಞೆ ತರಲು ರಾಜ್ಯಪಾಲರಿಗೆ ಪ್ರಸ್ತಾವನೆ ಕಳಿಸಿದ್ದವು. ರಾಜ್ಯಪಾಲರು ಅಂಕಿತ ಹಾಕಲು ಒಪ್ಪಿಗೆ ನೀಡಿರಲಿಲ್ಲ. ನ್ಯಾಯಾಲಯದ ಆದೇಶ ಪಾಲಿಸಿಲ್ಲ ಎಂದು ಹೈಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಾಯಿತು.
ಮುಂಬಡ್ತಿಗೆ ತಡೆ
1998ರ ಪ್ರಕರಣ ಇತ್ಯರ್ಥವಾಗದ ಕಾರಣ 2016, 2017 ಮತ್ತು 2018ನೇ ಸಾಲಿನ ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳಿಗೆ ಮುಂಬಡ್ತಿ ನೀಡಿರಲಿಲ್ಲ. ಹೈಕೋರ್ಟ್ ಆದೇಶದ ಅನ್ವಯ ಸಿದ್ಧಪಡಿಸಿರುವ ಪಟ್ಟಿಯನ್ನು ಯಥಾವತ್ ಜಾರಿಗೆ ತರಲು ಈಗ ಸರ್ಕಾರ ಮುಂದಾಗಿದೆ. ಆದ್ದರಿಂದ, ಹಲವು ಅಧಿಕಾರಿಗಳು ಹಿಂಬಡ್ತಿ ಪಡೆಯಲಿದ್ದಾರೆ. ಕೆಲವರು ಉದ್ಯೋಗ ಕಳೆದುಕೊಳ್ಳಲಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಪರಿಷ್ಕೃತ ಪಟ್ಟಿಯನ್ನು ಜಾರಿಗೊಳಿಸಿ ಎಂದು ನಿರ್ದೇಶನ ನೀಡಿದ್ದಾರೆ. ಪರಿಷ್ಕೃತ ಪಟ್ಟಿ ಜಾರಿಗೆ ಬಂದರೆ 11 ಐಎಎಸ್ ಅಧಿಕಾರಿಗಳು ಹಿಂಬಡ್ತಿ ಪಡೆಯಲಿದ್ದಾರೆ. 36 ಗೆಜೆಟೆಡ್ ಅಧಿಕಾರಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. 115 ಅಧಿಕಾರಿಗಳ ಹುದ್ದೆ ಬದಲಾಗಲಿವೆ.