ದೇವಸ್ಥಾನ ತೆರವು ಸಿಎಂ ಬೊಮ್ಮಾಯಿ ಅವರಿಗೆ ಮೊದಲೇ ಗೊತ್ತಿತ್ತಾ?: ಸರ್ಕಾರದ ಆದೇಶದಲ್ಲೇನಿದೆ?
ಬೆಂಗಳೂರು, ಸೆ. 15: ಉಚ್ಚಗಣಿಯ ಮಹದೇವಮ್ಮ ದೇವಸ್ಥಾನ ತೆರವು ವಿಚಾರ ರಾಜ್ಯ ಬಿಜೆಪಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಸ್ವಪಕ್ಷೀಯರಿಂದಲೇ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಅದಕ್ಕೆ ಕಾರಣವೂ ಇದೆ.
ಮೈಸೂರು ಜಿಲ್ಲಾಡಳಿತ ನಂಜನಗೂಡು ತಾಲೂಕಿನ ಹರದನಹಳ್ಳಿ ಉಚ್ಚಗಣಿಯ ಮಹದೇವಮ್ಮ ದೇವಸ್ಥಾನವನ್ನು ತೆರವುಗೊಳಿಸಿತ್ತು. ದೇವಸ್ಥಾನ ನೆಲಸಮ ಮಾಡಿರುವುದಕ್ಕೆ ವಿರೋಧ ಪಕ್ಷದ ನಾಯಕರು ಮಾತ್ರವಲ್ಲ, ತಮ್ಮ ಸಂಪುಟದ ಸಹೋದ್ಯೋಗಿಗಳಿಂದಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ವಿರೋಧವನ್ನು ಎದುರಿಸುವಂತಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿಗೆ ಕಾರಣ ಕೇಳಿ ನೋಟಿಸ್ ಕೊಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಜಾಯಿಷಿ ಕೊಟ್ಟಿದ್ದಾರೆ.
ಆದರೆ 2009ಕ್ಕಿಂತ ಮೊದಲು ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಧಾರ್ಮಿಕ ಕಟ್ಟಡಗಳ ತೆರವಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಸರ್ಕಾರ ಮಾಡಿದ್ದ ಆದೇಶ 'ಒನ್ಇಂಡಿಯಾ ಕನ್ನಡ'ಕ್ಕೆ ಲಭ್ಯವಾಗಿದೆ. ಜೊತೆಗೆ ಸುಪ್ರೀಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಒಟ್ಟು 6,396 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗಳಿಸಲು ಸರ್ಕಾರ ಆದೇಶ ಮಾಡಿದೆ. ಈ ಬಗ್ಗೆ ಸಮಗ್ರ ಮಾಹಿತಿ ಮುಂದಿದೆ.
ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಆದೇಶ!
2009ಕ್ಕಿಂತ ಮೊದಲು ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಧಾರ್ಮಿಕ ಕಟ್ಟಡಗಳ ತೆರವಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಮುಂದಿಟ್ಟುಕೊಂಡು ಅವಸರದಿಂದ ತುರ್ತು ಕ್ರಮ ಜರುಗಿಸಿ, ದೇವಸ್ಥಾನಗಳನ್ನು ಒಡೆಯಬೇಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
"ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯಾಕೆ ಕ್ರಮ ಕೈಗೊಂಡಿದ್ದೀರಿ ಎಂದು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ" ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದ್ದಾರೆ. ಆದರೆ ಮುಖ್ಯಮಂತ್ರಿಗಳ ಆದೇಶ ಜನರ ಕಣ್ಣೋರೆಸುವ ತಂತ್ರ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಅದಕ್ಕೆ ಕಾರಣ ಸರ್ಕಾರವೇ ಹೊರಡಿಸಿದ್ದ ಆದೇಶ.
ತೆರವುಗೊಳಿಸಿ ಪ್ರತಿ ತಿಂಗಳು ವರದಿ ಕೊಡಲು ಸೂಚನೆ!
ಸುಪ್ರೀಂಕೋರ್ಟ್ ಆದೇಶದಂತೆ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಳೆದ ಜುಲೈ 01, 2021 ರಂದು ಸುತ್ತೋಲೆ ಹೊರಡಿಸಿದ್ದರು. ಜುಲೈ 15ರ ಬಳಿಕ ಪ್ರತಿಯೊಂದು ತಾಲೂಕಿನಲ್ಲಿ ವಾರಕ್ಕೆ ಕನಿಷ್ಠ 1 ಅನಧಿಕೃತ ಧಾರ್ಮಿಕ ಕಟ್ಟಡ ತೆರವುಗೊಳಿಸಲು ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಬೇಕು.
ಜೊತೆಗೆ ತೆರವುಗಳಿಸಿದ್ದನ್ನು ದಾಖಲೆ ಸಹಿತ ಪ್ರತಿ ತಿಂಗಳು 7ನೇ ತಾರೀಖಿನೊಳಗೆ ಗೃಹ ಇಲಾಖೆಯ ಮುಖ್ಯಕಾರ್ಯದರ್ಶಿಗೆ ವರದಿ ಸಲ್ಲಿಸಬೇಕು ಎಂದು ಆದೇಶ ಮಾಡಿದ್ದರು. ಆ ಆದೇಶದಂತೆ ಮೈಸೂರು ಜಿಲ್ಲಾಧಿಕಾರಿಗಳು ನಡೆದುಕೊಂಡಿದ್ದಾರೆ.
|
ಸರ್ಕಾರಕ್ಕೆ ತಿಳಿಸದೇ ಆದೇಶ ಹೊರಡಿಸುವುದು ಸಾಧ್ಯವಾ?
ಈ ಆದೇಶ ಹೊರಡಿಸುವಾಗ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗ ಗೃಹ ಇಲಾಖೆ ಸಚಿವರಾಗಿದ್ದರು. ಹೀಗಾಗಿ ಅವರಿಗೆ ಅರಿವಿಲ್ಲದಂತೆ ಆದೇಶ ಹೊರಡಿಸಿರುವ ಸಾಧ್ಯತೆಗಳಿಲ್ಲ. ಈಗ ಸಂಬಂಧಿಸಿದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಕೊಟ್ಟಿರುವುದೇ ಸರಿಯಲ್ಲ ಎಂಬ ಮಾತುಗಳು ಅಧಿಕಾರಿ ವರ್ಗದಿಂದಲೇ ಕೇಳಿ ಬರುತ್ತಿವೆ.
ಈ ಬಗ್ಗೆ ಸುಪ್ರೀಂಕೋರ್ಟ್ ಆದೇಶ ಬಂದಾಗಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಸಮಸ್ಯೆಯನ್ನು ರಾಜ್ಯ ಸಚಿವ ಸಂಪುಟದಲ್ಲಿಟ್ಟು ಚರ್ಚೆ ಮಾಡಿ ಪರಿಹರಿಸಬಹುದಿತ್ತು ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ರಾಜ್ಯ ಬಿಜೆಪಿ ನಾಯಕರೊಬ್ಬರು. ಹೀಗಾಗಿ ಇದೇ ವಿಚಾರವೀಗ ಮೂಲ ಬಿಜೆಪಿಗರು ಹಾಗೂ ವಿರೋಧ ಪಕ್ಷಗಳಿಗೆ ರಾಜ್ಯ ಸರ್ಕಾರದ ಮೇಲೆ ಮುಗಿಬೀಳಲು ಆಯುಧ ಸಿಕ್ಕಂತಾಗಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ದೇವಸ್ಥಾನ ತೆರವಿಗೆ ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಸಚಿವ ಕೆ.ಎಸ್. ಈಶ್ವರಪ್ಪ ತೀವ್ರ ವಿರೋಧ!
ಉಚ್ಚಗಣಿಯ ಮಹದೇವಮ್ಮ ದೇವಸ್ಥಾನ ತೆರವುಗೊಳಿಸಿರುವುದಕ್ಕೆ ಬೊಮ್ಮಾಯಿ ಸಂಪುಟದ ಸದಸ್ಯ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತೀವ್ರವಾಗಿ ವಿರೋಧಿಸಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿರುವ ಅವರು, "ಈ ಪ್ರಕರಣದಿಂದ ಇಡೀ ರಾಜ್ಯದಲ್ಲಿ ದೇವಸ್ಥಾನ ಒಡೆದು ಹಾಕುವ ಆತಂಕ ಭಯ ವ್ಯಕ್ತವಾಗಿದೆ. ನಮ್ಮದೇ ಬಿಜೆಪಿ ಸರ್ಕಾರ ಇರುವಾಗ ದೇವಸ್ಥಾನ ಒಡೆದು ಹಾಕಿದ್ದು ತಪ್ಪು. ಸುಪ್ರಿಂ ಕೋರ್ಟ್ ಇಂತಹ ಅನೇಕ ಆದೇಶಗಳನ್ನು ಮಾಡಿದೆ. ಬಿಜೆಪಿ ಸಂಸ್ಕೃತಿ ನಂಬಿಕೊಂಡು ಇರುವ ಪಕ್ಷ. ರಾಜ್ಯದ ಒಂದೇ ಒಂದು ದೇವಸ್ಥಾನ ಒಡೆಯುವುದು ತಪ್ಪೆ. ಕಾಂಗ್ರೆಸ್ ನಾಯಕರು ಹೇಳಿದ್ದರಲ್ಲೂ ಯಾವುದೇ ತಪ್ಪಿಲ್ಲ. ಈ ಸಂಬಂಧ ಸಿಎಂ ಬೊಮ್ಮಾಯಿ ಜೊತೆಗೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ರಾಜ್ಯದಲ್ಲಿ ತೆರವುಗಳಿಸಲು ಎಷ್ಟೇ ದೇವಸ್ಥಾನಗಳನ್ನು ಪಟ್ಟಿ ಮಾಡಿರಲಿ, ಯಾವುದನ್ನೂ ಒಡೆಯಬಾರದು" ಎಂದು ತಮ್ಮ ಸರ್ಕಾರವನ್ನು ಈಶ್ವರಪ್ಪ ಆಗ್ರಹಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದು ಮುಂದಿದೆ.
ಮುಖ್ಯಮಂತ್ರಿ ಗಮನಕ್ಕೆ ತರದೇ ಯಾವುದೇ ಆದೇಶ ಆಗುವುದಿಲ್ಲ!
ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತರದೇ ಸರ್ಕಾರದ ಮುಖ್ಯಕಾರ್ಯದರ್ಶಿ ಸುತ್ತೋಲೆ ಬರೆಯುವುದು ಸಾಧ್ಯವಿಲ್ಲ. ಹೀಗಾಗಿ ಎಲ್ಲವೂ ಸರ್ಕಾರದ ಗಮನದಲ್ಲಿತ್ತು. ಜುಲೈ 15ರಿಂದ ಜಿಲ್ಲಾಧಿಕಾರಿ, ತಹಶಿಲ್ದಾರರು ದೇವಸ್ಥಾನ ತೆರವುಗೊಳಿಸಬೇಕು ಅಂತ ಸೂಚಿಸಿದ್ದರು. ಈಗ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ಬಣ್ಣ ಬದಲಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
"ಇವರು ಹೇಳುವುದು ಮಾತ್ರ ಹಿಂದುತ್ವ, ಹಿಂದು ವಿರೋಧಿಯಾಗಿ ನಡೆದುಕೊಳ್ಳುವವರೂ ಆವರೇ. ಬಿಜೆಪಿಯವರು ಮಾಡೋದು ಮಾತ್ರ ರಾಮನ ಜಪ. ಭಕ್ತರ ಗಮನಕ್ಕೆ ತಂದು, ಪರ್ಯಾಯ ವ್ಯವಸ್ಥೆ ಮಾಡಬಹುದಿತ್ತು, ಆದರೆ ಮಾಡಿಲ್ಲ. ಅವರು ಮಾಡಿರುವ ಕೃತಿಯಲ್ಲಿ ಅವರ ಡೋಂಗಿತನ ಕಾಣುತ್ತಿದೆ, ಹುಸಿ ಹಿಂದುತ್ವವಾದಿ ಕಾಣುತ್ತದೆ. ಹಿಂದುತ್ವ, ಹಿಂದೂತನದ ವಿರೋಧ ಕಾಣುತ್ತಿದೆ" ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.