ಆಪ್ತರ ಮೇಲಿನ ಐಟಿ ದಾಳಿ ಬಿ.ವೈ. ವಿಜಯೇಂದ್ರಗೆ ಎದುರಾಗಲಿದೆ ಸಂಕಷ್ಟ!
ಬೆಂಗಳೂರು, ಅ. 07: ನೀರಾವರಿ ಇಲಾಖೆಯ ಗುತ್ತಿಗೆಗಳಲ್ಲಿನ ಅಕ್ರಮ ಹಾಗೂ ತೆರಿಗೆ ವಂಚನೆ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಹಾಗೂ ಉದ್ಯಮಿಗಳ ಮೇಲೆ ನಡೆದಿರುವ ದಾಳಿ ರಾಜಕೀಯ ಪ್ರೇರಿತ ದಾಳಿ ಎಂಬ ಆರೋಪ ಕೇಳಿ ಬಂದಿದೆ. ಯಡಿಯೂರಪ್ಪ ಸಿಎಂ ಕುರ್ಚಿಯಿಂದ ನಿರ್ಗಮಿಸಿದರೂ ಅವರ ಪುತ್ರ ವಿಜಯೇಂದ್ರ ಹಾಲಿ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಹಾನಗಲ್ ಕ್ಷೇತ್ರದ ಉಪ ಚುನಾವಣೆಗೆ ಟಿಕೆಟ್ ನೀಡುವ ವಿಚಾರದಲ್ಲಿ ಬಿಎಸ್ ವೈ ಕುಟುಂಬ ಹಾಗೂ ಆರ್ಎಸ್ಎಸ್ ನಾಯಕರ ನಡುವೆ ಮನಸ್ತಾಪ ಉಂಟಾಗಿತ್ತು. ಅಧಿಕಾರದಿಂದ ದೂರ ಇಟ್ಟರೂ ನಿಯಂತ್ರಿಸಲಾಗದ ಬಿಎಸ್ವೈ ಕುಟುಂಬ ಟಾರ್ಗೆಟ್ ಮಾಡಿ ಈ ಐಟಿ ದಾಳಿ ನಡೆಯಿತೇ ಎಂಬುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ.
ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಉಮೇಶ ಅವರ ರಾಜಾಜಿನಗರ ನಿವಾಸ, ಕಚೇರಿ ಸೇರಿದಂತೆ ಹಲವು ಕಡೆ ದಾಳಿ ನಡೆದಿದೆ. ನೀರಾವರಿ ಇಲಾಖೆಯ ಟೆಂಡರ್ಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರು, ಉದ್ಯಮಿಗಳು ಕೂಡ ಐಟಿ ದಾಳಿಗೆ ಒಳಗಾಗಿದ್ದಾರೆ. ಅಧಿಕೃತವಾಗಿ ಬಿ.ಎಸ್. ಯಡಿಯೂರಪ್ಪ, ಅಥವಾ ಅವರ ಪುತ್ರ ವಿಜಯೇಂದ್ರ ನಿವಾಸದ ಮೇಲೆ ಐಟಿ ದಾಳಿ ಆಗದೇ ಇರಬಹುದು. ಆದರೆ, ವಿಜಯೇಂದ್ರ ಅವರ ಮೇಲೆ ನೇರವಾಗಿ ಐಟಿ ದಾಳಿ ಮಾಡುವುದಕ್ಕಿಂತಲೂ ಆಪ್ತ ವರ್ಗದ ಮೇಲೆ ದಾಳಿ ನಡೆಸಿರುವುದೇ ಹೆಚ್ಚು ಭಯ ಹುಟ್ಟಿಸುವಂತದ್ದು.
ನವರಾತ್ರಿ ಸಂಭ್ರಮದಲ್ಲೇ ಬಿಎಸ್ವೈ ಪಟಾಲಂಗೆ ಶಾಕ್ ಕೊಟ್ಟ ಐಟಿ ಅಧಿಕಾರಿಗಳು
ಉದ್ಯಮಿಗಳು, ಚಾರ್ಟೆಟ್ ಅಕೌಂಟೆಟ್ ಸೇರಿದಂತೆ ಐಟಿ ಅಧಿಕಾರಿಗಳು ವಶಪಡಿಸಿಕೊಂಡಿರುವ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ವಿಜಯೇಂದ್ರ ನಂಟಿನ ಜಾಡು ಹಿಡಿದು ಅದರ ಭಾಗವಾಗಿ ಈ ದಾಳಿ ನಡೆದಿದ್ದರೂ ಅಚ್ಚರಿ ಪಡಬೇಕಿಲ್ಲ.
ಬಿಎಸ್ವೈ ಕುಟುಂಬ ಹಸ್ತಕ್ಷೇಪ ಜಾಸ್ತಿ: ಬಿ.ಎಸ್. ಯಡಿಯೂರಪ್ಪ ಸಿಎಂ ಹುದ್ದೆಯಿಂದ ನಿರ್ಗಮಿಸಿದರೂ ಅವರ ಪುತ್ರ ವಿಜಯೇಂದ್ರ ಅವರು ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಹಸ್ತಕ್ಷೇಪ ಕಡಿಮೆ ಮಾಡಿಲ್ಲ ಎನ್ನಲಾಗಿದೆ. ವರ್ಗಾವಣೆ ಹಲವು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ನೇಮಕ ವಿಚಾರದಲ್ಲಿ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಸ್ತಕ್ಷೇಪ ಮಾಡದಂತೆ ವಿಜಯೇಂದ್ರ ಅವರಿಗೆ ತಾಕೀತು ಮಾಡಿದ್ದಾರೆ. ಆದರೆ ಇದ್ಯಾವುದಕ್ಕೂ ಕಿವಿಗೊಡದ ವಿಜಯೇಂದ್ರ ಕಳೆದ ಹತ್ತು ದಿನದಿಂದ ಸಕ್ರಿಯವಾಗಿ ಸರ್ಕಾರದ ಭಾಗವಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂಬ ಮಾತು ಕೇಳಿ ಬಂದಿದ್ದವು. ಇದೀಗ ವಿಜಯೇಂದ್ರ ಹಸ್ತಕ್ಷೇಪ ಮಾಡಿದ್ದಾರೆ ಎನ್ನಲಾದ ನೀರಾವರಿ ಇಲಾಖೆಯ ಟೆಂಡರ್ಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರ ನಿವಾಸಗಳ ಮೇಲೆ ದಾಳಿ ನಡೆದಿದೆ. ಈ ಮೂಲಕ ಕೇಂದ್ರ ವರಿಷ್ಠರು ಪರೋಕ್ಷ ಸಂದೇಶ ರವಾನಿಸಲು ಐಟಿ ಅಸ್ತ್ರ ಪ್ರಯೋಗಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಮಾಜಿ ಸಿಎಂ ಯಡಿಯೂರಪ್ಪ ಪಿಎ ಉಮೇಶ್ ಮನೆ ಮೇಲೆ ಐಟಿ ದಾಳಿ ಯಾಕೆ? ಇಲ್ಲಿದೆ ಮಾಹಿತಿ!
ಹಾನಗಲ್ ಉಪ ಚುನಾವಣೆಯಲ್ಲಿ ಬಿಎಸ್ವೈ ಹಸ್ತಕ್ಷೇಪ : ಹಾನಗಲ್ ಉಪ ಚುಣಾವಣೆಯಲ್ಲಿ ಬಿ.ವೈ ವಿಜಯೇಂದ್ರ ಅವರನ್ನು ಕಣಕ್ಕೆ ನಿಲ್ಲಿಸಿ ವಿಧಾನಸೌಧ ಎಂಟ್ರಿಗೆ ಬಿ.ಎಸ್. ಯಡಿಯೂರಪ್ಪ ಚಿಂತನೆ ಮಾಡಿದ್ದರು. ಈ ನಿಟ್ಟಿನಲ್ಲಿ ಬಿ.ಎಸ್. ಯಡಿಯೂರಪ್ಪ ಪ್ರಯತ್ನ ಮಾಡಿದರು. ಮೊದಲ ಹೆಜ್ಜೆಯಲ್ಲಿಯೇ ಇದು ಸಾಧ್ಯವಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ, ಬಿಎಸ್ ವೈ ಅವರ ಪರಮಾಪ್ತ ಕುಟುಂಬ ಸಿ.ಎಂ. ಉದಾಸಿ ಅವರ ಕುಟುಂಬಕ್ಕೆ ಟಿಕೆಟ್ ಕೊಡಿಸಲು ಯಡಿಯೂರಪ್ಪ ಮತ್ತು ವಿಜಯೇಂದ್ರ ತೆರೆಮರೆಯ ಪ್ರಯತ್ನ ನಡೆಸಿದ್ದರು.
ಯಡಿಯೂರಪ್ಪ ಅವರ ಹಸ್ತಕ್ಷೇಪದ ಬಗ್ಗೆ ಕೇಂದ್ರ ವರಿಷ್ಠರಿಗೆ ದೂರು ಸಲ್ಲಿಕೆಯಾಗಿತ್ತು. ಆರ್ಎಸ್ಎಸ್ ಹಿನ್ನೆಲೆಯುಳ್ಳ ಬಿಜೆಪಿಯ ನಿಷ್ಠಾವಂತ ನಾಯಕ ಶಿವರಾಜ್ ಸಜ್ಜನರ್ ಅವರಿಗೆ ಟಿಕೆಟ್ ನೀಡಲಾಗಿದೆ. ಕಳೆದ ಜೂನ್ನಲ್ಲಿ ಮೃತಪಟ್ಟ ಸಿಎಂ ಉದಾಸಿ ಅವರ ಸೊಸೆ ರೇವತಿ ಉದಾಸಿಗೆ ಟಿಕೆಟ್ ಕೊಡಿಸುವ ಬಿಎಸ್ವೈ ಕುಟುಂಬದ ಪ್ರಯತ್ನ ವಿಫಲವಾಗಿತ್ತು. ಟಿಕೆಟ್ ನೀಡುವ ವಿಚಾರದಲ್ಲಿ ಬಿಎಸ್ವೈ ಹಾಗೂ ಬಿಜೆಪಿ ನಾಯಕರ ನಡುವೆ ದೊಡ್ಡ ಭಿನ್ನಾಭಿಪ್ರಾಯ ಮೂಡಿತ್ತು. ಅದರ ಬಿಸಿಯಲ್ಲಿ ಯಡಿಯೂರಪ್ಪ ಅವರ ಆಪ್ತರ ಮೇಲೆ ಐಟಿ ದಾಳಿ ಮಾಡಿ ಶಾಖ್ ನೀಡಲಾಗಿದೆ.
ಚುನಾವಣೆ ಉಸ್ತುವಾರಿಯಲ್ಲೂ ಭಿನ್ನತೆ : ಅಕ್ಟೋಬರ್ 30 ರಂದು ನಡೆಯಲಿರುವ ಹಾನಗಲ್ ಮತ್ತು ಸಿಂದಗಿ ಉಪ ಚುಣಾವಣೆ ಸಂಬಂಧ ಉಸ್ತುವಾರಿ ಪಟ್ಟಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹೆಸರನ್ನು ಕೈ ಬಿಡಲಾಗಿತ್ತು. ವಿಜಯೇಂದ್ರ ಅವರ ಅಭಿಮಾನಿಗಳು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಸ್ಪಷ್ಟನೆ ನೀಡಿದ್ದ ವಿಜಯೇಂದ್ರ ಕೂಡ, ಅಭಿಮಾನಿಗಳು ಯಾರೂ ಸಾಮಾಜಿಕ ಜಾಲ ತಾಣದಲ್ಲಿ ಕೆಟ್ಟದಾಗಿ ನಡೆದುಕೊಳ್ಳದಂತೆ ಮನವಿ ಮಾಡಿದ್ದರು.
ಇದರ ಬೆನ್ನಲ್ಲೇ ಇದೀಗ ಐಟಿ ದಾಳಿ ನಡೆದಿದೆ. ಬಿ.ಎಸ್. ಯಡಿಯೂರಪ್ಪ ಮತ್ತು ವಿಜಯೇಂದ್ರ ನಿಕಟವರ್ತಿ ಉದ್ಯಮದಾರರಾದ ಉಪ್ಪಾರ್ ಅಂಡ್ ಕಂ, ಜಿ. ಶಂಕರ್, ಮನೋಹರ್ ಸೇರಿದಂತೆ 28 ಗುತ್ತಿಗೆದಾರರು ದಾಳಿಗೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಉದ್ಯಮಿಗಳ ಜತೆ ವಿಜಯೇಂದ್ರ ಮೊದಲಿನಿಂದಲೂ ಒಡನಾಟ ಇಟ್ಟುಕೊಂಡಿದ್ದರು. ಅದರಲ್ಲೂ ನೀರಾವರಿ ಇಲಾಖೆಯ ವ್ಯವಹಾರವನ್ನೇ ನೋಡಿಕೊಳ್ಳುತ್ತಿದ್ದ ಬಿಎಸ್ವೈ ಕುಟುಂಬದ ಆಪ್ತ ಸಹಾಯಕ ಉಮೇಶ್ ಕೂಡ ದಾಳಿಗೆ ಒಳಗಾಗಿರುವುದು ಯಡಿಯೂರಪ್ಪ ಕುಟುಂಬಕ್ಕೆ ಸಂಕಷ್ಟ ಎದುರಾದರೂ ಅಚ್ಚರಿ ಪಡಬೇಕಿಲ್ಲ. ಪರಿಯ ಬೆಳವಣಿಗಳು ಐಟಿ ದಾಳಿಯಲ್ಲಿ ಕಂಡು ಬರುತ್ತಿವೆ.