ಏಪ್ರಿಲ್ 14: ಎಲ್ಲೆಡೆ ಸುರಿದ ಮಳೆ, ರಾಜ್ಯದಲ್ಲೀಗ ತಂಪಾದ ವಾತಾವರಣ
ಕರ್ನಾಟಕದ ವಿವಿಧೆಡೆ ಬುಧವಾರ ಮಧ್ಯಾಹ್ನದ ವೇಳೆ ಮಳೆ ಸುರಿದಿದೆ. ಬೆಂಗಳೂರಿನಲ್ಲಿ ಏ.14ರಂದು ಬೆಳಗ್ಗಿನಿಂದಲೇ ಮೋಡಕವಿದ ವಾತಾವರಣವಿದ್ದು, ಅಲ್ಲಲ್ಲಿ ಮಳೆಯಾಗಿತ್ತು, ಮಧ್ಯಾಹ್ನದ ವೇಳೆ ಹಲವೆಡೆ ಸಾಧಾರಣದಿಂದ ಭಾರಿ ಮಳೆಯಾಗಿದೆ. ಇದೇ ರೀತಿ ವಾತಾವರಣ ಇನ್ನೂ ಮೂರು ದಿನಗಳ ಕಾಲ ರಾಜ್ಯದೆಲ್ಲೆಡೆ ಮುಂದುವರೆಯಲಿದೆ ಎಂದು ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಇನ್ನು ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆದಿದ್ದರೂ ಹಲವೆಡೆ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಮತ್ತೆ ಮಳೆ ಶುರು, 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ನಿರೀಕ್ಷೆಯಂತೆ ಏಪ್ರಿಲ್ 13ರಿಂದ ರಾಜ್ಯದ ಹಲವೆಡೆ ಹವಾಮಾನ ಬದಲಾಗುತ್ತಿದ್ದು, ಹಲವೆಡೆ ಮಳೆ ನಿರೀಕ್ಷೆಯಿದೆ. ಈಗಾಗಲೇ ಶಿವಮೊಗ್ಗ, ಚಿಕ್ಕಮಗಳೂರು, ಶಿರಸಿ ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಲ್ಲಿ ಮಳೆ ಸುರಿದಿದೆ.
ದಕ್ಷಿಣ ಒಳನಾಡಿನ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆ, ಮಂಗಳೂರು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸತತವಾಗಿ ಮಳೆಯಾಗುವ ಲಕ್ಷಣಗಳಿದ್ದು, ಹಲವೆಡೆ ಯೆಲ್ಲೂ ಅಲರ್ಟ್ ಘೋಷಿಸಲಾಗಿದೆ.
ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಕಳೆದ 24 ಗಂಟೆಗಳ ಕರ್ನಾಟಕದ ಮಳೆ ನಕ್ಷೆ ನೀಡಿದ್ದು, ಅತ್ಯಧಿಕ 80ಮಿ.ಮೀ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಜ್ಪೆಯಲ್ಲಿ ದಾಖಲಾಗಿದೆ. ರಾಜ್ಯದ ಯಾವ ಜಿಲ್ಲೆಯಲ್ಲಿ ತಾಪಮಾನ ಎಷ್ಟಿದೆ? ಎಂಬುದರ ಸಚಿತ್ರ ವರದಿ ಇಲ್ಲಿದೆ ವಿನ್ಯಾಸ: ಭರತ್ ಎಚ್. ಸಿ
ಬೆಂಗಳೂರಿನ ನಗರ ಪ್ರದೇಶದಲ್ಲಿ ವಾತಾವರಣ
ಬೆಂಗಳೂರಿನ ನಗರ ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು, ಒಂದೆರಡು ಕಡೆಗಳಲ್ಲಿ ಭಾರಿ ಮಳೆ ನಿರೀಕ್ಷಿಸಬಹುದು, ಮಿಕ್ಕಂತೆ ಇನ್ನು ಎರಡು ಮೂರು ದಿನ ಸಾಧಾರಣ ಮಳೆಯಾಗಲಿದೆ, ಇದು ಪೂರ್ವ ಮುಂಗಾರು ಮಳೆ ಎಂದು ಹವಾಮಾನ ಇಲಾಖೆ ಉಸ್ತುವಾರಿ ನಿರ್ದೇಶಕ ಸುಂದರ್ ಮೇತ್ರಿ ಹೇಳಿದ್ದಾರೆ.
ಎಲ್ಲೆಲ್ಲಿ ಮಳೆ ಸಾಧ್ಯತೆ?, ಯೆಲ್ಲೂ ಅಲರ್ಟ್
ಮಳೆ ಮುನ್ಸೂಚನೆ: ದಕ್ಷಿಣ ಕನ್ನಡ, ಮೈಸೂರು, ಕೊಡಗು, ಹಾಸನ, ಉತ್ತರ ಕನ್ನಡ, ಶಿವಮೊಗ್ಗ, ಬೆಳಗಾವಿ, ಚಿಕ್ಕಮಗಳೂರು, ಹಾವೇರಿ, ಧಾರವಾಡ ಮತ್ತ ಬಾಗಲಕೋಟೆ ಜಿಲ್ಲೆಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್ ಹೇಳಿದ್ದಾರೆ. ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಯೆಲ್ಲೂ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆ
ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಏಪ್ರಿಲ್ 14, 15ರಂದು ಚದುರಿದಂತೆ ಮಳೆಯಾಗುವ ಸಾಧ್ಯತೆಯಿದೆ, ಮಿಕ್ಕಂತೆ ಒಣಹವೆ ಮುಂದುವರೆಯಲಿದೆ.
ಗರಿಷ್ಠ ಹಾಗೂ ಕನಿಷ್ಠ ತಾಪಮಾನ
ಕಲಬುರಗಿಯಲ್ಲಿ 37.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ದಾವಣಗೆರೆಯಲ್ಲಿ 19 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ರಾಜ್ಯದೆಲ್ಲೆಡೆ ಬಹುತೇಕ ಸರಾಸರಿ 24 ರಿಂದ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ದಕ್ಷಿಣ ಒಳನಾಡಿನ ಕೋಲಾರ, ಬಳ್ಳಾರಿ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.
Recommended Video
ರಾಜ್ಯದ ಹಲವೆಡೆ ಮಳೆ ನಿರೀಕ್ಷೆ
ಬೆಂಗಳೂರಲ್ಲಿ 35 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಏಪ್ರಿಲ್ ಮೊದಲ ವಾರದಲ್ಲಿ ಅಧಿಕವಾಗಿದ್ದ ತಾಪಮಾನ ಇನ್ಮುಂದೆ ಸ್ವಲ್ಪ ತಗ್ಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಸತತ ಮಳೆ ಸುರಿದಿದ್ದು ಪಣಂಬೂರು ಅತ್ಯಧಿಕ 8 ಸೆಂಮೀ ಮಳೆ ದಾಖಲಿಸಿದೆ, ಧರ್ಮಸ್ಥಳ, ಯಲ್ಲಾಪುರ, ನಿಪ್ಪಾಣಿಯಲ್ಲಿ 3 ಸೆಂ.ಮೀ ಮಳೆಯಾಗಿದೆ.