Infographics: ಜನವರಿ 08ರಂದು ರಾಜ್ಯದ ವಿವಿಧ ಜಿಲ್ಲೆಗಳ ಹವಾಮಾನ ಹೇಗಿದೆ?
ಬೆಂಗಳೂರು, ಜನವರಿ 08: ರಾಜ್ಯದ ಉತ್ತರ ಒಳನಾಡಿನ ನಾಲ್ಕು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೀದರ್, ಕಲಬುರಗಿ, ರಾಯಚೂರು ಹಾಗೂ ಯಾದಗಿರಿಯಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹೇಳಲಾಗಿದೆ. ಕಳೆದ ಎರಡು ದಿನಗಳಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದ ಜೊತೆ ಶೀತ ಗಾಳಿ ಆರಂಭಗೊಂಡಿತ್ತು. ಬೀದರ್ , ಯಾದಗಿರಿ , ರಾಯಚೂರು ಮತ್ತು ಕೋಲಾರ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ. ಇನ್ನುಳಿದ ಭಾಗಗಳಲ್ಲಿ ಚಳಿ ಮುಂದುವರೆದರೆ, ಕೆಲವು ಕಡೆ ಶೀತದ ಪರಿಣಾಮ ತಗ್ಗುತ್ತಿದೆ.
ಬೆಳಗ್ಗೆ ಸುಮಾರು 8 ಗಂಟೆವರೆಗೂ ದಟ್ಟವಾದ ಮಂಜು ಆವರಿಸಲಿದ್ದು, ವಾಹನ ಸವಾರರು ಪರದಾಡು ಪರಿಸ್ಥಿತಿ ಮಲೆನಾಡು ಭಾಗಗಳಲ್ಲಿ ನಿರ್ಮಾಣವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 27 ಮತ್ತು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ಬೆಂಗಳೂರು 27-18, ಮೈಸೂರು 28-17, ಚಾಮರಾಜನಗರ 29-19, ರಾಮನಗರ 29-19, ಮಂಡ್ಯ 29-18, ಬೆಂಗಳೂರು ಗ್ರಾಮಾಂತರ 27-18, ಚಿಕ್ಕಬಳ್ಳಾಪುರ 26-16, ಕೋಲಾರ 27-17, ಹಾಸನ 29-17, ಚಿಕ್ಕಮಗಳೂರು 28-17, ದಾವಣಗೆರೆ 31-18, ಶಿವಮೊಗ್ಗ 31-19, ಕೊಡಗು 28-16, ತುಮಕೂರು 29-18, ಉಡುಪಿ 31-23.
ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಚಂಡಮಾರುತದ ಪರಿಚಲನೆಯೊಂದಿಗೆ ದೆಹಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಮಳೆ ಶುರುವಾಗಿದೆ. ಜನವರಿ 7ರವರೆಗೆ ಈ ರಾಜ್ಯಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ.
ಜನವರಿ 9ರ ಸುಮಾರಿಗೆ ಹೆಚ್ಚಿನ ಮಳೆಯಾಗಲಿದೆ. ಜನವರಿ 9 ರವರೆಗೂ ಈ ರಾಜ್ಯಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ. 9, 10ರಂದು ಪಂಜಾಬ್ ಮತ್ತು ಹರಿಯಾಣದ ಉತ್ತರ ಭಾಗಗಳು ಮತ್ತು ದೆಹಲಿಯಲ್ಲಿ ಆಲಿಕಲ್ಲು ಮಳೆ ಬೀಳಲಿದೆ. ಇದು ಈ ರಾಜ್ಯಗಳಿಗೆ ಆತಂಕಕಾರಿ ಪರಿಸ್ಥಿತಿಯಾಗಿರಬಹುದು ಮತ್ತು ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕೆಲವು ಬೆಳೆ ಹಾನಿಯಾಗುವ ಸಾಧ್ಯತೆಯೂ ಇದೆ.
ಪೂರ್ವ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ, ಒಡಿಶಾ, ಗಂಗಾನದಿ ಪಶ್ಚಿಮ ಬಂಗಾಳ, ಪಶ್ಚಿಮ ಅಸ್ಸಾಂ ಮತ್ತು ಮೇಘಾಲಯ, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಇಂದು ದಟ್ಟವಾದ ಮಂಜು ಇರಲಿದೆ. ಜನವರಿ 10ರ ಸೋಮವಾರದಿಂದ ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ, ವಿಶೇಷವಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಕೂಡ ಮಳೆಯಾಗಲಿದೆ.
ಭಾರತೀಯ ಹವಾಮಾನ ಇಲಾಖೆ (IMD)ಯ ಇತ್ತೀಚಿನ ಮುನ್ಸೂಚನೆಯು ಜನವರಿ 10ರಿಂದ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಮಳೆಯ ಚಟುವಟಿಕೆಯು ಹೆಚ್ಚಾಗುವ ಸಾಧ್ಯತೆಯಿದೆ. ವಾಸ್ತವವಾಗಿ, ತಮಿಳುನಾಡಲ್ಲಿ ಮುಂದಿನ ಸೋಮವಾರ ಮತ್ತು ಮಂಗಳವಾರ ಭಾರೀ ಮಳೆಯಾಗಲಿದೆ.
ಚೆನ್ನೈ, ಕಾಂಚೀಪುರಂ, ತಿರುವಲ್ಲೂರ್, ಕಡಲೂರ್ ಮುಂತಾದ ಕಡೆಗಳಲ್ಲಿ ಇಂದು ಮಳೆಯಾಗಲಿದ್ದು, ಹಳದಿ ಅಲರ್ಟ್ ಘೋಷಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಹಿಮಪಾತ ಮತ್ತು ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.