ಕರ್ನಾಟಕ :ಹರಿಯುತ್ತಿದೆ ಆಮಿಷದ ಹೊಳೆ, ರೂ. 128 ಕೋಟಿ ಮೌಲ್ಯದ ವಸ್ತುಗಳು ವಶ
ಬೆಂಗಳೂರು, ಮೇ 2: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹಿಂದೆಂದೂ ಕಂಡು ಕೇಳರಿಯದಷ್ಟು ನಗ-ನಾಣ್ಯ, ಚಿನ್ನ, ಬೆಲೆಬಾಳುವ ವಸ್ತುಗಳ ಹೊಳೆ ಹರಿಯುತ್ತಿದೆ. ಮತದಾರರನ್ನು ಆಮಿಷವೊಡ್ಡಿ ಕೆಡವಲು ರಾಜಕೀಯ ಪಕ್ಷಗಳು ಸ್ಪರ್ಧೆಗಿಳಿದಿವೆ. ಪರಿಣಾಮ ಹಿಂದೆಂದೂ ಜಪ್ತಿ ಮಾಡದಷ್ಟು ವಸ್ತುಗಳನ್ನು ಈ ಬಾರಿ ಚುನಾವಣಾ ಆಯೋಗ ವಶಕ್ಕೆ ಪಡೆದಿದೆ.
"ಕರ್ನಾಟಕ ಚುನಾವಣೆಗೆ ಸಂಬಂಧಿಸಿದಂತೆ 2013ರಲ್ಲಿ ಕೇವಲ 14 ಕೋಟಿ ರೂಪಾಯಿ ಮೌಲ್ಯದ ಹಣ, ಐಷಾರಾಮಿ ವಸ್ತುಗಳು ಮತ್ತು ಮದ್ಯವನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ ಇವತ್ತು ಚುನಾವಣೆಗೆ ಇನ್ನೂ ಕೆಲವು ದಿನಗಳು ಬಾಕಿ ಉಳಿದಿರುವಾಗಲೇ ರೂ. 128 ಕೋಟಿ ಮೌಲ್ಯದ ಹಣ, ಚಿನ್ನ, ಬೆಳ್ಳಿ, ಐಷಾರಾಮಿ ವಸ್ತುಗಳು ಮತ್ತು ಮದ್ಯವನ್ನು ವಶಕ್ಕೆ ಪಡೆಯಲಾಗಿದೆ," ಎಂದು ಮುಖ್ಯ ಚುನಾವಣಾ ಆಯುಕ್ತರಾದ ಒ.ಪಿ. ರಾವತ್ ಹೇಳಿದ್ದಾರೆ.
ಚುನಾವಣಾ ಆಯೋಗ ವಶಪಡಿಸಿಕೊಂಡ ಹಣ, ಮದ್ಯದ ಮಾಹಿತಿ ಇಲ್ಲಿದೆ
ಕರ್ನಾಟಕ ಚುನಾವಣೆಯಲ್ಲಿ ಹಣದ ದುರುಪಯೋಗ ಮತ್ತು ಸುಳ್ಳು, ಪೇಯ್ಡ್ ನ್ಯೂಸ್ ಗಳ ಎಲ್ಲೆ ಮೀರಿದ ಬಳಕೆಯ ಬಗ್ಗೆ ಚುನಾವಣಾ ಆಯೋಗ ಆತಂಕಗೊಂಡಿದೆ. ಚುನಾವಣೆಯ ಮೇಲೆ ಇವುಗಳು ಪರಿಣಾಮ ಬೀರದಂತೆ ತಡೆಯಲು ಆಯೋಗ ಅವಿರತ ಶ್ರಮಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಹಾಗಾದರೆ ಇಲ್ಲಿಯವರೆಗೆ ವಶಕ್ಕೆ ಪಡೆದುಕೊಂಡ ವಸ್ತುಗಳೆಷ್ಟು? ಅವುಗಳ ಮೌಲ್ಯ ಏನು? ಚುನಾವಣೆಯ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಸಮಾಜ ಘಾತುಕರಿಂದ ಆಯೋಗ ಬರೆಸಿಕೊಂಡ ಬಾಂಡ್ ಗಳೆಷ್ಟು? ಹೊರಡಿಸಲಾದ ಜಾಮೀನು ರಹಿತ ವಾರಂಟ್ ಗಳೆಷ್ಟು?
ಇವುಗಳ ಲೆಕ್ಕವನ್ನು ಈ ಹಿಂದಿನ ಚುನಾವಣೆಗಳ ಜೊತೆ ಹೋಲಿಕೆ ಮಾಡಲಾಗಿದ್ದು, ಅವುಗಳ ಸಂಪೂರ್ಣ ವಿವರ ಇಲ್ಲಿದೆ.