ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ
ಬೆಂಗಳೂರು ಆಗಸ್ಟ್ 08: ಕರ್ನಾಟಕದಾದ್ಯಂತ ಮುಂಗಾರು ಮಳೆಯ ಅಬ್ಬರ ತುಸು ಕಡಿಮೆಯಾಗಿದೆ. ಭಾನುವಾರಕ್ಕೆ ಹೋಲಿಕೆ ಮಾಡಿದರೆ ಕರಾವಳಿ, ಮಲೆನಾಡು ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಅಬ್ಬರ ತುಸು ತಗ್ಗಿದ್ದು, ಕೆಲವು ಜಿಲ್ಲೆಗಳಲ್ಲಿ ಮಾತ್ರ ವರುಣಾರ್ಭಟ ಮುಂದುವರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ಒಟ್ಟು 31ಜಿಲ್ಲೆಗಳ ಪೈಕಿ ಸುಮಾರು ಏಳು ಜಿಲ್ಲೆಗಳಲ್ಲಿ ಮಾತ್ರ ಮುಂದಿನ ಎರಡು ದಿನ ಮಳೆ ಅಬ್ಬರಿಸುವ ಸಾಧ್ಯತೆ ಇದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಬೀದರ್, ಕಲಬುರಗಿ ಈ ಏಳು ಜಿಲ್ಲೆಗಳ ಹಲವೆಡೆ ಭಾರೀ ಮಳೆ ಆಗಬಹುದು. ಉಳಿದ ಕಡೆಗಳಲ್ಲಿ ಸಾಧಾರಣ ಮಳೆ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ.
ರಾಮನಗರ: ಮಳೆ, ನೆರೆ ಪರಿಹಾರ ವಿತರಿಸಿದ ಅಶ್ವಥ್ ನಾರಾಯಣ
ಕರ್ನಾಟಕದಲ್ಲಿ ಹಲವು ಕಡೆಗಳಲ್ಲಿ ಬುಧವಾರದ ವರೆಗೆ ಹೆಚ್ಚು ಮಳೆ ಸುರಿಯಲಿದೆ. ನಂತರ ಹಂತ ಹಂತವಾಗಿ ಮಳೆ ಕಡಿಮೆಯಾಗಲಿದೆ. ಈ ಸುದ್ದಿ ತೀವ್ರ ಮಳೆ ಬಿದ್ದು ಸಂಕಷ್ಟದಲ್ಲಿ ದಿನ ದೂಡುತ್ತಿರುವ ನೆರೆ ಪ್ರದೇಶದ ಜನರಲ್ಲಿ ತುಸು ನೆಮ್ಮದಿ ತಂದಿದೆ. ಇದರ ಹೊರತು ಹವಾಮಾನದಲ್ಲಿ ಯಾವುದೇ ಗಂಭೀರ ರೀತಿಯ ಬದಲಾವಣೆಗಳು ಇಲ್ಲ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದೇಶದ ಕೆಲವೆಡೆ ಮಳೆ ಮುಂದುವರಿಕೆ
ಕರ್ನಾಟಕದ ಸೇರಿದಂತೆ ಭಾರತದ ಕೆಲವು ರಾಜ್ಯಗಳಾದ ಪೂರ್ವ ಮತ್ತು ಪಶ್ಚಿಮ ಉತ್ತರ ಪ್ರದೇಶ, ಉತ್ತರಾಖಂಡ, ಹರ್ಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ರಾಜಸ್ಥಾನ, ಪುದುಚೇರಿಗಳಲ್ಲಿ ಮಳೆ ಆರ್ಭಟ ಬಹುತೇಕ ಕಡಿಮೆ ಆಗಿದೆ. ಉಳಿದಂತೆ ಮಧ್ಯಪ್ರದೇಶ, ಗುಜರಾತ್, ಗೋವಾ, ಉತ್ತರ ಪೂರ್ವ ಮತ್ತು ಪಶ್ಚಿಮ ಮಧ್ಯಪ್ರದೇಶ, ಛತ್ತಿಸ್ಗಢ್, ತೆಲಂಗಾಣ ಭಾಗದಲ್ಲಿ ಮಳೆ ಮುಂದುವರಿದೆ. ಕಳೆದ 24ಗಂಟೆಗಳಲ್ಲಿ ಈ ರಾಜ್ಯದಲ್ಲಿ ಭಾರೀ ಮಳೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಎಲ್ಲಿ ಭಾರೀ ಮಳೆ ಸಾಧ್ಯತೆ ಇದೆ
ಕರಾವಳಿಯ ಮೂರು, ಉತ್ತರ ಒಳನಾಡಿನ ಎರಡು ಹಾಗೂ ದಕ್ಷಿಣ ಒಳನಾಡಿನ ಎರಡು ಜಿಲ್ಲೆಗಳಲ್ಲಿ ಮಾತ್ರ ಭಾರೀಯಿಂದ ಅತೀ ಭಾರೀ ಮಳೆ ಆಗಬಹುದು. ಈ ಜಿಲ್ಲೆಗಳ ಹೊರತು ಆಯಾ ಭಾಗಗಳ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಬರುವ ಸಾಧ್ಯತೆ ಇದೆ. ರಾಜ್ಯಾದ್ಯಂತ ಚಳಿಯ ವಾತಾವರಣ ನಿರ್ಮಾಣವಾಗಿದ್ದು, ಮುಂದಿನ ನಾಲ್ಕೈದು ಜಿಟಿಜಿಟಿ ಮಳೆ ಮತ್ತು ತಂಪು ವಾತಾವರಣ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಿಲಿಕನ್ ಸಿಟಿಯಲ್ಲಿ ಸಾಮಾನ್ಯ ಮಳೆ ಸಾಧ್ಯತೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಇಡಿ ದಿನ ಮೋಡ ಮುಸುಕಿನ ವಾತಾವರಣ ಕಂಡು ಬಂದಿದೆ. ನಗರದ ಯಾವ ಪ್ರದೇಶದಲ್ಲಿ ಅಷ್ಟಾಗಿ ಮಳೆ ಬಿದ್ದಿಲ್ಲ. ಬೆಳಗ್ಗೆಯಿಂದಲೇ ತಣ್ಣನೆಯ ವಾತಾವರಣ ಉಂಟಾಗಿದೆ. ಇದೇ ರೀತಿಯ ವಾತಾವರಣ ಮುಂದಿನ ನಾಲ್ಕು ದಿನವು ಮುಂದುವರಿಯಲಿದೆ. ಈ ವೇಳೆ ಗರಿಷ್ಠ ಉಷ್ಣಾಂಶ 27ಡಿ.ಸೆ. ಹಾಗೂ ಕನಿಷ್ಠ ಉಷ್ಣಾಂಶ 19ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಹವಾಮಾನ ಕೇಂದ್ರ ತಿಳಿಸಿದೆ.
ವಿವಿಧ ನಗರಗಳ ಉಷ್ಣಾಂಶ ಬಗ್ಗೆ ಮಾಹಿತಿ
ಬೆಂಗಳೂರಿನಲ್ಲಿ 26ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶವಿದ್ದರೆ, ತೇವಾಂಶ 78, ಗಾಳಿಯ ವೇಗ ಗಂಟೆಗೆ 61ಕಿ.ಮೀ. ಕಂಡು ಬಂದಿದೆ. ಅದೇ ರೀತಿ ಬಾಗಲಕೋಟೆಯಲ್ಲಿ 26ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 81ತೇವಾಂಶ ಇದೆ. ಇನ್ನು ಮಂಗಳೂರಲ್ಲಿ 28ಡಿಗ್ರಿ ಸೆಲ್ಸಿಯಸ್ ಗರಿಷ್ಠ ಇದ್ದು, ಇಲ್ಲಿ 88ರಷ್ಟು ತೇವಾಂಶ ಇದೆ. ಶಿವಮೊಗ್ಗದಲ್ಲಿ 25 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 82ರಷ್ಟು ತೇವಾಂಶ ದಾಖಲಾಗಿದೆ. ಇನ್ನು ಮೈಸೂರಲ್ಲಿ 27ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ತೇವಾಂಶ 77, ಬಳ್ಳಾರಿಯಲ್ಲಿ 28ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಮತ್ತು ತೇವಾಂಶ 73 ದಾಖಲಾಗಿದೆ.
ರಾಯಚೂರಲ್ಲಿ 29ಡಿಗ್ರಿ ಸೆಲ್ಸಿಯಸ್ ಗರಿಷ್ಠ ಇದ್ದು, 70ರಷ್ಟು ತೇವಾಂಶ, ಚಿತ್ರದುರ್ಗದಲ್ಲಿ 25ಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 81ರಷ್ಟು ತೇವಾಂಶ ಇದೆ. ಕಲಬುರಗಿಯಲ್ಲಿ 26 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 84ರಷ್ಟು ತೇವಾಂಶ ಇದೆ. ಚಿಕ್ಕಮಗಳೂರಲ್ಲಿ25 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 83ರಷ್ಟು ತೇವಾಂಶ ಕಂಡು ಬಂದಿದೆ.