ಕರ್ನಾಟಕದಲ್ಲಿ ಮುಂದುವರಿಯಲಿರುವ ಸಾಧಾರಣ ಮಳೆ
ಬೆಂಗಳೂರು ಆಗಸ್ಟ್ 16: ಕರ್ನಾಟಕದ ಕರಾವಳಿ ಭಾಗದ ಜಿಲ್ಲೆಗಳು ಹಾಗೂ ರಾಜ್ಯದ ಒಳನಾಡಿನ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದಾದ್ಯಂತ ನಿರಂತವಾಗಿ ಸುರಿದ ಅಬ್ಬರಿಸಿದ್ದ ಮುಂಗಾರು ಮಳೆ ಕೆಲವು ದಿನಗಳಿಂದ ಶಾಂತವಾಗಿದೆ. ಒಳನಾಡಿನ ಜಿಲ್ಲೆಗಳ ಹಲವೆಡೆ ಆಗಾಗ ಜಿಟಿ ಜಿಟಿ ರೂಪದ ಮಳೆ ಮುಂದುವರಿದೆ. ಇದರ ಹೊರತು ಎಲ್ಲಿಯೂ ಜೋರು, ಅತ್ಯಧಿಕ ಮಳೆ ದಾಖಲಾಗುವ ಬಗ್ಗೆ ಹಾಗೂ ವಾತಾವರಣದಲ್ಲಿ ಯಾವುದೇ ರೀತಿಯ ಗಮನಾರ್ಹ ಬದಲಾವಣೆಗಳು ಇಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಮುಂದಿನ ಎರಡು ದಿನ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಒಳನಾಡು ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ಹಾವೇರಿ, ಗದಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಡಿಕೇರಿ ಜಿಲ್ಲೆ ಸೇರಿದಂತೆ ಕೆಲವು ಜಿಲ್ಲೆಗಳ ಸಾಕಷ್ಟು ಪ್ರದೇಶಗಳಲ್ಲಿ ಹಗುರ ಇಲ್ಲವೇ ಜಿಟಿ ಜಿಟಿ ಮಳೆ ಬೀಳುವ ಸಂಭವವಿದೆ ಎಂದು ಅಂದಾಜಿಸಲಾಗಿದೆ.
ಕರ್ನಾಟಕದಲ್ಲಿ ಜಿಟಿ ಜಿಟಿ ಮಳೆ ಸಾಧ್ಯತೆ
ಭಾರತದಾದ್ಯಂತ ಚುರುಕಾಗಿದ್ದ ಮಳೆ ಆರ್ಭಟ ಬಹುತೇಕ ಕಡಿಮೆಯಾಗಿದೆ. ಪೂರ್ವ ರಾಜಸ್ತಾನ್, ಪಶ್ಚಿಮ ಮಧ್ಯ ಪ್ರದೇಶ, ಗುಜರಾತ್ ಗೋವಾ, ಮಹಾರಾಷ್ಟ್ರದ ಮಧ್ಯ ಭಾಗ, ಹಿಮಾಚಲ್ ಪ್ರದೇಶ ಹಾಗೂ ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ನಿರೀಕ್ಷಿಸಬಹುದು. ಉಳಿದ ರಾಜ್ಯಗಳಲ್ಲಿ ಮಳೆ ಇಲ್ಲದಾಗಿದೆ. ಇದರ ಹೊರತು ಹವಾಮಾನದಲ್ಲಿ ಯಾವುದೇ ಗಂಭೀರ ರೂಪದ ಬದಲಾವಣೆಗಳು ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಕರಾವಳಿ ಕರ್ನಾಟಕದಲ್ಲಿ ಸಾಧಾರಣ ಮಳೆ ಬಿದ್ದಿದೆ
ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆ ದಾಖಲಾಗಿದೆ. ಈ ಪೈಕಿ ಕರಾವಳಿ ಭಾಗದಲ್ಲಿ ಹೆಚ್ಚು ಮಳೆ ಸುರಿದಿದ್ದು, ಉತ್ತರ ಕನ್ನಡ ಜಿಲ್ಲೆಯ ನಿಲ್ಕುಂದ್ ನಲ್ಲಿ 5ಸೆಂ.ಮೀ.ಮಳೆ ಬಿದ್ದಿದೆ. ಉಳಿದಂತೆ ಉತ್ತರ ಕನ್ನಡದ ಕ್ಯಾಸಲ್ ರಾಕ್, ಯಾದಗಿರಿಯ ಕವಡಿಮಟ್ಟಿಯಲ್ಲಿ ತಲಾ 3ಸೆಂ.ಮೀ. ಮಳೆ ಆಗಿದೆ. ಹೊನ್ನಾವರ್, ಬೀದರ್, ಕಲಬುರಗಿಯಲ್ಲಿ ಸಹ ತಲಾ 2ಸೆಂ.ಮೀ. ಮಳೆ ಆಗಿದೆ. ಕಾರವಾರ, ಯಲ್ಲಾಪುರ, ಬೆಳಗಾವಿ, ವಿಜಯಪುರ, ರಾಯಚೂರು ಹಾಗೂ ಇನ್ನಿತರ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಸಾಧಾರಣ ಮಳೆ ಆಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ವರದಿ ತಿಳಿಸಿದೆ.
ಬೆಂಗಳೂರಿಗೆ ಮೋಡ ಕವಿದ ವಾತಾವರಣದ ಮುನ್ಸೂಚನೆ
ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಮಳೆ ದಾಖಲಾಗಿಲ್ಲ.ಬದಲಾಗಿ ಎಲ್ಲೆಡೆ ಮೋಡ ಮುಸುಕಿನ ವಾತಾವರಣವೇ ಕಂಡು ಬಂದಿದೆ. ಉಷ್ಣಾಂಶ ಜತೆಗೆ ಚಳಿಯ ಪ್ರಮಾಣವು ಇಳಿಕೆ ಆಗಿದೆ. ಮುಂದಿನ 48 ಗಂಟೆಯೂ ನಗರದ ವಾತಾವರಣ ಹೀಗೆ ಮುಂದುವರಿಯಲಿದೆ. ಒಂದೆರಡು ಕಡೆಗಳಲ್ಲಿ ಮಾತ್ರ ಸೋನೆ ಮಳೆ ಇಲ್ಲವೇ ಹಗುರ ಮಳೆ ಆಗಬಹುದು. ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಂಭವವಿದೆ.
ರಾಜ್ಯದ ಪ್ರಮುಖ ಪಟ್ಟಣಗಳ ತಾಪಮಾನ ವಿವರ
ಬೆಂಗಳೂರಿನಲ್ಲಿ 29ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ತೇವಾಂಶ 52, ಗಾಳಿಯ ವೇಗ ಗಂಟೆಗೆ 29ಕಿ.ಮೀ. ದಾಖಲಾಗಿದೆ. ಬಾಗಲಕೋಟೆ 29ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 57ತೇವಾಂಶ, ರಾಯಚೂರು 34ಡಿಗ್ರಿ ಸೆಲ್ಸಿಯಸ್ ಗರಿಷ್ಠ, 40ರಷ್ಟು ತೇವಾಂಶ, ಚಿತ್ರದುರ್ಗ 28ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 61ರಷ್ಟು ತೇವಾಂಶ ಇದೆ. ಕಲಬುರಗಿ 31ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 55ರಷ್ಟು ತೇವಾಂಶ ಇದೆ, ಚಿಕ್ಕಮಗಳೂರು 28ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ, 63ರಷ್ಟು ತೇವಾಂಶ ದಾಖಲಾಗಿದೆ.
ಮಂಗಳೂರು 30ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ, 68ರಷ್ಟು ತೇವಾಂಶ ಇದ್ದು, ಶಿವಮೊಗ್ಗ 28ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ, ತೇವಾಂಶ 60ರಷ್ಟು ಇದ್ದು, ಮೈಸೂರಲ್ಲಿ 31ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಮತ್ತು 48 ತೇವಾಂಶ ಇದೆ. ಬಳ್ಳಾರಿಯಲ್ಲಿ33ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಹಾಗೂ 48ರಷ್ಟು ತೇವಾಂಶ ಕಂಡು ಬಂದಿದೆ.