ಕರ್ನಾಟಕ ಸೇರಿ ದೇಶಾದ್ಯಂತ ನೈಋತ್ಯ ಮುಂಗಾರು ದುರ್ಬಲ
ಬೆಂಗಳೂರು ಆಗಸ್ಟ್ 12: ಮುಂಗಾರು ಆರಂಭವಾದ ಜೂನ್ 1ರಿಂದ ಆಗಸ್ಟ್ 10ರವರೆಗೆ ಭಾರತದ ಕೆಲವು ರಾಜ್ಯ ಹೊರತುಪಡಿಸಿ ಬಹುತೇಕ ಎಲ್ಲ ಭಾಗಗಳಲ್ಲಿ ಮುಂಗಾರು ಮಾರುತಗಳು ಸಕ್ರಿಯವಾಗಿದ್ದವು. ನಿತ್ಯ ಒಂದಲ್ಲಾ ಒಂದು ಭಾಗದಲ್ಲಿ ಮಳೆ ಅಬ್ಬರ ಸಾಮಾನ್ಯವಾಗಿತ್ತು. ಸದ್ಯ ದೇಶಾದ್ಯಂತ ಮಳೆ ಇಳಿಮುಖವಾಗುತ್ತಿದೆ.
ದೇಶದ ಹಿಮಾಚಲ ಪ್ರದೇಶ, ಅಸ್ಸಾಂ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕನಿಷ್ಠ ವಾರಪೂರ್ತಿ ಭಾರೀ ಮಳೆ ಸುರಿದು ಆವಾಂತರ ಸೃಷ್ಟಿಯಾಗಿತ್ತು. ಇಂದಿಗೂ ಗುಡ್ಡಗಾಡು, ತಗ್ಗು ಪ್ರದೇಶಗಳಲ್ಲಿರುವ ಗ್ರಾಮಗಳಲ್ಲಿ ಅತಿವೃಷ್ಟಿಯ ಛಾಯೆ ಕಾಣಬಹುದು.
ಸಾಲುತ್ತಿಲ್ಲ ಮಳೆ: ಮುಂಗಾರು ಹಂಗಾಮಿನಲ್ಲಿ ಶೇ.13ರಷ್ಟು ಭತ್ತ ಬಿತ್ತನೆ ಕುಸಿತ
ಇದೀಗ ಆ ಎಲ್ಲಾ ಭಾಗದಲ್ಲೂ ಮುಂಗಾರು ದುರ್ಬಲಗೊಂಡಿದೆ. ಕೆಲವು ಕಡೆಗಳಲ್ಲಿ ಮಾತ್ರ ಮಳೆ ಸಾಧಾರಣದಿಂದ ಭಾರೀ ಮಳೆ ದಾಖಲಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಹಿತಿ ನೀಡಿದೆ.
ಮುಂಗಾರು ಆರಂಭಿಕ ಹಂತದಲ್ಲಿ ಬೆಳೆ ಬೆಳೆದ ರೈತರು ಮಳೆಗೆ ಕಂಗಾಲಾಗಿದ್ದಾರೆ. ಕೊಯ್ಲಿಗೆ ಬಂದ ಬೆಳೆಯನ್ನು ರಕ್ಷಿಸಿಕೊಳ್ಳಲಾಗದೇ ಆತಂಕಕ್ಕೀಡಾಗಿದ್ದಾರೆ. ಎಲ್ಲೆಡೆ ಅಬ್ಬರಿಸುತ್ತಿದ್ದ ವರುಣ ಬಹುತೇಕ ತಣ್ಣಗಾಗಿರುವುದು ದೇಶದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ಬಿಸಿಲಿನ ದರ್ಶನವಾಗುತ್ತಿದ್ದಂತೆ ಬೆಳೆ ಕಟಾವಿಗೆ ರೈತರು ಮುಂದಾಗಿದ್ದಾರೆ.
ದೇಶಾದ್ಯಂತ ಮುಂಗಾರು ದುರ್ಬಲ
ದೇಶದ ಬಹುತೇಕ ಎಲ್ಲ ಕಡೆಗಳಲ್ಲಿ ಮುಂಗಾರು ಮಾರುತಗಳು ದುರ್ಬಲವಾಗಿವೆ. ಇದಕ್ಕೆ ಕರ್ನಾಟಕ ಹೊರತಾಗಿಲ್ಲ. ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಇಳಿಮುಖವಾಗಿದೆ. ಆಗಾಗ ಸಾಧಾರಣ ಮಳೆ ಆಗುತ್ತಿದೆ. ಈ ವಾತಾವರಣ ಕರ್ನಾಟಕ ಸೇರಿದಂತೆ ದೇಶದೆಲ್ಲಡೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದ ಕರಾವಳಿಗೆ ಮಳೆ ನಿರೀಕ್ಷೆ
ನಿರಂತರವಾಗಿ ಸುರಿದ ಅತ್ಯಧಿಕ ಮಳೆ ಅನೇಕ ಆವಾಂತರಗಳನ್ನು ಉಂಟು ಮಾಡಿತ್ತು. ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಜನ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿವೆ. ಕರಾವಳಿ ಮೂರು ಜಿಲ್ಲೆಗಳು, ಮಲೆನಾಡಿನ ಮೂರು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದ್ದು, ಶನಿವಾರ ಒಂದು ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ.
ನಗರದಲ್ಲಿ ಉಷ್ಣಾಂಶ ಹೆಚ್ಚಾಗುವ ನಿರೀಕ್ಷೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಕವಿದಿದ್ದ ಮೋಡ ಮರೆಯಾಗಿ ಬಿಸಿಲಿನ ದರ್ಶನವಾಗುವ ಸಾಧ್ಯತೆ ಇದೆ. ಕೆಲವೆಡೆ ಮಾತ್ರ ತುಂತುರು ಮಳೆ ಸಂಭವವಿದೆ. ಸದ್ಯಕ್ಕೆ ಎಲ್ಲಿಯೂ ಭಾರೀ ಮಳೆ ನಿರೀಕ್ಷೆ ಇಲ್ಲ. ಮುಂದಿನ 48ಗಂಟೆಯಲ್ಲಿ ನಗರದೆಲ್ಲಡೆ ಉಷ್ಣಾಂಶ ಪ್ರಮಾಣ ಏರಿಕೆ ಆಗಲಿದೆ. ಗರಿಷ್ಠ 28ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20 ಡಿ.ಸೆ. ದಾಖಲಾಗುವ ಸಾಧ್ಯತೆ ಇದೆ. ಇದರ ಹೊರತು ಗಮನಾರ್ಹ ಬದಲಾವಣೆ ಇಲ್ಲ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದ ತೇವಾಂಶ, ಉಷ್ಣಾಂಶದ ವಿವರ
ಬೆಂಗಳೂರಿನಲ್ಲಿ 27 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶವಿದ್ದರೆ, ತೇವಾಂಶ 73ರಷ್ಟು, ಗಾಳಿಯ ವೇಗ ಗಂಟೆಗೆ 40ಕಿ.ಮೀ., ಬಾಗಲಕೋಟೆ 29ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 65ತೇವಾಂಶ ದಾಖಲಾಗಿದೆ. ಮಂಗಳೂರು 29ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 81ರಷ್ಟು ತೇವಾಂಶ ಇದ್ದು, ಶಿವಮೊಗ್ಗದಲ್ಲಿ 27ಡಿ.ಸೆ. ಗರಿಷ್ಠ ಉಷ್ಣಾಂಶ ಮತ್ತು 75ರಷ್ಟು ತೇವಾಂಶ ಇದೆ. ಮೈಸೂರಿನಲ್ಲಿ 28ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ತೇವಾಂಶ 75, ಬಳ್ಳಾರಿಯಲ್ಲಿ 32ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಮತ್ತು ತೇವಾಂಶ 60 ಕಂಡು ಬಂದಿದೆ.
ರಾಯಚೂರಲ್ಲಿ 32ಡಿಗ್ರಿ ಸೆಲ್ಸಿಯಸ್ ಗರಿಷ್ಠ, 60ರಷ್ಟು ತೇವಾಂಶ, ಚಿತ್ರದುರ್ಗದಲ್ಲಿ 28ಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಇದ್ದು, 68ರಷ್ಟು ತೇವಾಂಶ ಇದೆ. ಕಲಬುರಗಿಯಲ್ಲಿ 32 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 81ರಷ್ಟು ತೇವಾಂಶ, ಚಿಕ್ಕಮಗಳೂರಲ್ಲಿ28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 83ರಷ್ಟು ತೇವಾಂಶ ಇದೆ.