ಕರ್ನಾಟಕದಲ್ಲಿ ಮತ್ತೆ ಎರಡು ದಿನ ಭಾರಿ ಮಳೆ ಅಬ್ಬರಿಸಲಿದೆ
ಬೆಂಗಳೂರು ಆಗಸ್ಟ್ 19: ಕರ್ನಾಟಕ ರಾಜ್ಯದಾದ್ಯಂತ ಬಹುತೇಕ ಎಲ್ಲ ಕಡೆಗಳಲ್ಲೂ ತಣ್ಣಗಾಗಿದ್ದ ಮಳೆ ಅಬ್ಬರ ಮತ್ತೆ ಶುರುವಾಗಲಿದೆ. ಎರಡು ದಿನ ಕರ್ನಾಟಕ ಕೆಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಜೋರಾಗಿ ಸುರಿಯಲಿದೆ ಎಂದು ಎಂದು ಕರ್ನಾಟಕ ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.
ಹವಾಮಾನದಲ್ಲಿ ಉಂಟಾಗಿರುವ ಬದಲಾವಣೆಗಳ ಪರಿಣಾಮವಾಗಿ ಮುಂಗಾರು ಮಾರುತಗಳು ಮತ್ತೆ ಕರ್ನಾಟಕದಲ್ಲಿ ಚುರುಕುಗೊಂಡಿವೆ. ಇದರಿಂದ ಕರಾವಳಿಯ ಮೂರು ಜಿಲ್ಲೆಗಳು ಮತ್ತು ಮಲೆನಾಡು ಒಳಗೊಂಡಿರುವ ದಕ್ಷಿಣ ಒಳನಾಡಿನ ನಾಲ್ಕು ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಗುಡುಗು ಸಹಿತ ಜೋರು ಮಳೆ ಆಗುವ ಸಾಧ್ಯತೆ ಇದೆ.
ಕರಾವಳಿ ಕರ್ನಾಟಕ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಹಾಗೂ ಚಿಕ್ಕಮಗಳೂರು, ಮಡಿಕೇರಿ, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳ ಹಲವೆಡೆ ಸಾಧಾರಣದಿಂದ ಭಾರಿ ಮಳೆ ಬೀಳುವ ಸಾಧ್ಯತೆ ಹೆಚ್ಚಿದೆ. ಈ ಕಾರಣದಿಂದ ಆಗಸ್ಟ್ 23 ಹಾಗೂ ಆಗಸ್ಟ್ 24ರಂದು ಎರಡು ದಿನ ಈ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹವಾಮಾನ ವೈಪರಿತ್ಯದಿಂದ ಮಳೆ ಚುರುಕು
ಬಹುತೇಕ ದೇಶಾದ್ಯಂತ ಕಳೆದೊಂದು ವಾರದಿಂದ ತಣ್ಣಗಾಗಿದ್ದ ಮಳೆ ಮತ್ತೆ ಎರಡು ದಿನಕಾಲ ಶುರುವಾಗುವ ಲಕ್ಷಣಗಳು ಇವೆ. ಕರ್ನಾಟಕ ಸೇರಿದಂತೆ ಚತ್ತೀಸ್ಗಢ, ಗೋವಾ, ಮಹಾರಾಷ್ಟ್ರ, ಉತ್ತರಾಖಂಡ, ಜಾರ್ಖಂಡ್, ಬಿಹಾರ್, ಅಂಡಮಾನ್, ಅರುಣಾಚಲ ಪ್ರದೇಶ, ಪೂರ್ವ ಮತ್ತು ಪಶ್ಚಿಮ ರಾಜಸ್ಥಾನ ಭಾಗಗಳಲ್ಲಿ ಅಲ್ಲಲ್ಲಿ ಮುಂದಿನ ಒಂದೆರಡು ದಿನ ಜೋರು ಮಳೆ ಆಗಲಿದೆ. ಇದಕ್ಕೆ ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಹಾಗೂ ರಾಯಲ್ಸೀಮಾ ದಿಂದ ಕನ್ಯಾಕುಮಾರಿವರೆಗೆ ಎದ್ದಿರುವ ಮೇಲ್ಮೈ ಸುಳಿಗಾಳಿ ತೀವ್ರತೆ ಕಾರಣ ಎನ್ನಲಾಗಿದೆ.
ಕರ್ನಾಟಕದಲ್ಲಿ ವ್ಯಾಪಕ ಮಳೆ ನಿರೀಕ್ಷೆ
ಈಗಾಗಲೇ ಕಳೆದ 24 ಗಂಟೆಯಲ್ಲಿ ಉತ್ತರ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲಿ ಹಗುರದಿಂದ ಸಾಧಾರಣ ಮಳೆ ಬಿದ್ದಿದೆ. ಮುಂದಿನ 48ಗಂಟೆ ಮಳೆ ಹೀಗೆ ವ್ಯಾಪಕವಾಗಿ ಮಳೆ ಮುಂದುವರಿಯಲಿದೆ. ಆಗಸ್ಟ್ 23ರ ಹೊತ್ತಿಗೆ ಮಳೆಯಲ್ಲಿ ಏರಿಕೆ ಆಗಲಿದೆ. ಆಗಸ್ಟ್ 24ರ ನಂತರ ಮಳೆ ಮತ್ತೆ ದುರ್ಬಲಗೊಳ್ಳುವ ಸಾಧ್ಯತೆ ಇದೆ. ಇದರ ಹೊರತು ಹವಾಮಾನದಲ್ಲಿ ಯಾವುದೇ ಗಂಭೀರ ರೂಪದ ಬದಲಾವಣೆ ಇಲ್ಲ ಎಂದು ರಾಜ್ಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಅಲ್ಲಲ್ಲಿ ಸೋನೆ ಮಳೆ ನಿರೀಕ್ಷೆ
ಬೆಂಗಳೂರಿನಾದ್ಯಂತ ಬಹುತೇಕ ಎಲ್ಲ ಕಡೆಗಳಲ್ಲಿ ಮಳೆ ಆರ್ಭಟ ನಿಂತಿದೆ. ಇತ್ತೀಚೆಗೆ ಯಾವ ಪ್ರದೇಶದಲ್ಲೂ ಮಳೆ ಬಿದ್ದ ಬಗ್ಗೆ ವರದಿಯಾಗಿಲ್ಲ. ಕೇವಲ ಮೋಡ ಮುಸುಕಿನ ಮಬ್ಬು ವಾತಾವರಣ ಕಂಡು ಬಂದಿದೆ. ಈ ವಾತಾವರಣ ನಗರದಲ್ಲಿ ಮುಂದಿನ ಕೆಲವು ದಿನ ಹೀಗೆ ಮುಂದುವರಿಯಲಿದ್ದು, ಉಷ್ಣಾಂಶ ತುಸು ಹೆಚ್ಚಾಗಲಿದೆ. ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 21ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದರು.
ಜಿಲ್ಲೆಗಳ ತಾಪಮಾನ ಪಟ್ಟಿ ಹೀಗಿದೆ
ಬೆಂಗಳೂರು ನಗರದಲ್ಲಿ 28ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಇದ್ದು, ತೇವಾಂಶ 64 ಮತ್ತು ಗಾಳಿಯ ವೇಗ ಗಂಟೆಗೆ 39ಕಿ.ಮೀ. ಇದೆ. ಬಾಗಲಕೋಟೆ 30ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಇದ್ದು, 45 ತೇವಾಂಶ ಕಂಡು ಬಂದಿದೆ. ರಾಯಚೂರಿನಲ್ಲಿ 33ಡಿಗ್ರಿ ಸೆಲ್ಸಿಯಸ್ ಗರಿಷ್ಠ, 49ತೇವಾಂಶ ಇದ್ದು, ಚಿತ್ರದುರ್ಗದಲ್ಲಿ 28ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 64ರಷ್ಟು ತೇವಾಂಶ, ಕಲಬುರಗಿ 32ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 55ರಷ್ಟು ತೇವಾಂಶ ದಾಖಲಾಗಿದೆ. ಚಿಕ್ಕಮಗಳೂರಲ್ಲಿ 28 ಡಿ.ಸೆ. ಗರಿಷ್ಠ ತಾಪಮಾನ, 58ರಷ್ಟು ತೇವಾಂಶ ಇದೆ.
ಮಂಗಳೂರು 30ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಮತ್ತು ಶೇ.68ರಷ್ಟು ತೇವಾಂಶ ಇದ್ದು, ಶಿವಮೊಗ್ಗ 28ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ, ತೇವಾಂಶ 61ರಷ್ಟಿದೆ. ಮೈಸೂರು ಜಿಲ್ಲೆಯಲ್ಲಿ 29ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಮತ್ತು 62ರಷ್ಟು ತೇವಾಂಶ ಇದ್ದು, ಬಳ್ಳಾರಿ 32ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಹಾಗೂ 51ರಷ್ಟು ತೇವಾಂಶ ಕಂಡು ಬಂದಿದೆ.