ಸುಪ್ರೀಂ ಆದೇಶಕ್ಕಿಂತ ಹೆಚ್ಚಿನ ನೀರು ತಮಿಳುನಾಡಿಗೆ!
Recommended Video
ಬೆಂಗಳೂರು, ಆಗಸ್ಟ್ 27 : ಕರ್ನಾಟಕದಲ್ಲಿ ಈ ಬಾರಿ ಭಾರಿ ಮಳೆಯಾಗಿದೆ. ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳು ಭರ್ತಿಯಾಗಿವೆ. ತಮಿಳುನಾಡಿಗೆ ವಾರ್ಷಿಕ ಹರಿಸಬೇಕಾಗಿದ್ದಕ್ಕಿಂತಲೂ ಅಧಿಕ ನೀರನ್ನು ಮೂರು ತಿಂಗಳಿನಲ್ಲಿ ಹರಿಸಲಾಗಿದೆ.
ಸುಪ್ರೀಂಕೋರ್ಟ್ ಆದೇಶದ ಅನ್ವಯ ವಾರ್ಷಿಕ 177.25 ಟಿಎಂಸಿ ಅಡಿ ನೀರನ್ನು ಕರ್ನಾಟಕ ನೀಡಬೇಕಾಗಿದೆ. ಆದರೆ, ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ 310.549 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಬಿಡಲಾಗಿದೆ.
ತಮಿಳುನಾಡಿಗೆ ಕರ್ನಾಟಕ ಕೊಟ್ಟ ಕಾವೇರಿ ನೀರೆಷ್ಟು?
ಮಂಡ್ಯ ಜಿಲ್ಲೆಯ ಕೆಆರ್ಎಸ್ ಜಲಾಶಯದಿಂದ 149.509 ಟಿಎಂಸಿ ನೀರು, ಕಬಿನಿ ಜಲಾಶಯದಿಂದ 161.04 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಮೆಟ್ಟೂರು ಡ್ಯಾಂ ಆಗಸ್ಟ್ ತಿಂಗಳಿನಲ್ಲಿಯೇ 3 ಬಾರಿ ಭರ್ತಿಯಾಗಿದೆ.
ಕಾವೇರಿ ವಿವಾದದ ಅಂತಿಮ ತೀರ್ಪು ನೀಡುವಾಗ ಸುಪ್ರೀಂಕೋರ್ಟ್ ಜೂನ್ ತಿಂಗಳಿನಲ್ಲಿ 9.23 ಟಿಎಂಸಿ, ಜುಲೈ ತಿಂಗಳಿನಲ್ಲಿ 31.93 ಟಿಎಂಸಿ ಮತ್ತು ಆಗಸ್ಟ್ನಲ್ಲಿ 46.16 ಟಿಎಂಸಿ ನೀರನ್ನು ಹರಿಸಬೇಕು ಎಂದು ಆದೇಶ ನೀಡಿತ್ತು.
ಕೆಆರ್ಎಲ್ ಜಲಾಶಯದ ಗೇಟ್ಗಳನ್ನು ತೆರೆದರೆ ಕಾವೇರಿ ನದಿ ನೀರು ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ಸೇರುತ್ತದೆ. ಆಗಸ್ಟ್ 15 ರಿಂದ 4 ದಿನಗಳ ಕಾಲ 1 ಲಕ್ಷ ಕ್ಯೂಸೆಕ್ಗೂ ಅಧಿಕ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ.
ಮೂರು ತಿಂಗಳ ಅವಧಿಯಲ್ಲಿ ಇಷ್ಟೊಂದು ನೀರನ್ನು ತಮಿಳುನಾಡಿಗೆ ಹರಿಸಿದ್ದು ಇತಿಹಾಸವಾಗಿದೆ. 86 ವರ್ಷಗಳ ಬಳಿಕ ಇಷ್ಟೊಂದು ನೀರನ್ನು ಮೂರು ತಿಂಗಳಿನಲ್ಲಿ ಜಲಾಶಯದಿಂದ ಹೊರಬಿಡಲಾಗಿದೆ.