ಡಿಸೆಂಬರ್ 07ರಂದು ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ
ಬೆಂಗಳೂರು, ಡಿಸೆಂಬರ್ 07: ರಾಜ್ಯದ ಕೆಲವೆಡೆ ಮುಂದಿನ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಮಳೆ ಕೊಂಚ ಕಡಿಮೆಯಾಗಿದ್ದು, ಇಂದು ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ರಾಮನಗರ, ತುಮಕೂರು, ಬಳ್ಳಾರಿ, ಮಂಡ್ಯ ಜಿಲ್ಲೆಗಳ ಒಂದೆರಡು ಕಡೆ ಸಾಧಾರಣ ಮಳೆಯಾಗಲಿದೆ. ಹಾಸನ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಯ ಕೆಲವೆಡೆ ಇಂದು ಮಳೆಯಾಗಲಿದ್ದು, ಉಳಿದೆಡೆ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ಕೆಲವು ಭಾಗಗಳಲ್ಲಿ ಮತ್ತೆ ಮಳೆಯ ಅಬ್ಬರ ಮುಂದುವರಿದಿದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆಯಾಗಲಿದೆ. ನಿನ್ನೆ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮಳೆ ಸುರಿದಿದೆ.
ಇಂದು ಕೊಡಗು ಮತ್ತು ಹಾಸನದಲ್ಲಿ ಮಳೆಯಾಗಲಿದೆ. ಇನ್ನೆರಡು ದಿನ ಉತ್ತರ ಒಳನಾಡಿನಲ್ಲಿ ಒಣ ಹವೆ ಇರಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿಯ ಒಂದೆರಡು ಕಡೆ ಮುಂದಿನ ನಾಲ್ಕು ದಿನಗಳಲ್ಲಿ ಮಳೆಯಾಗಲಿದೆ. ಉತ್ತರ ಕನ್ನಡದಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ವಾಯುವ್ಯ ಬಂಗಾಳ ಕೊಲ್ಲಿ ಮತ್ತು ಪಕ್ಕದ ಪಶ್ಚಿಮ ಬಂಗಾಳ-ಬಾಂಗ್ಲಾದೇಶ ಕರಾವಳಿಯಲ್ಲಿ ಕಡಿಮೆ ಒತ್ತಡದ ಪ್ರದೇಶವಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವರದಿ ಮಾಡಿತ್ತು. ನಿನ್ನೆ ಅಸ್ಸಾಂ, ಮೇಘಾಲಯ, ಮಿಜೋರಾಂ ಮತ್ತು ತ್ರಿಪುರಾದ ಹಲವು ಸ್ಥಳಗಳಲ್ಲಿ ಮಳೆಯಾಗಿತ್ತು. ಕಚಾರ್, ಹೈಲಕಂಡಿ, ಕರೀಮ್ಗಂಜ್, ತಮೆಂಗ್ಲಾಂಗ್, ಜಿರಿಬಾಮ್, ನೋನೆ, ಚಾಂಡೆಲ್, ಚುರಾಚಂದ್ಪುರ, ಫೆರ್ಜಾಲ್, ಮಮಿತ್, ಕೊಲಾಸಿಬ್, ಐಜ್ವಾಲ್ ಮತ್ತು ಚಂಪೈ ಸೇರಿದಂತೆ ಈಶಾನ್ಯದ ಹಲವಾರು ಜಿಲ್ಲೆಗಳಲ್ಲಿ ನಿನ್ನೆ ಗುಡುಗು ಮತ್ತು ಬಿರುಗಾಳಿ ಸಹಿತ ಭಾರೀ ಮಳೆಯಾಗಿತ್ತು.
ಡಿ. 8ರವರೆಗೆ ಅಸ್ಸಾಂ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಮಣಿಪುರ ಮತ್ತು ತ್ರಿಪುರಾಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಅಸ್ಸಾಂ, ಮೇಘಾಲಯ, ತ್ರಿಪುರಾ ಮತ್ತು ಮಿಜೋರಾಂನಲ್ಲಿ ಮುಂದಿನ 24 ಗಂಟೆಗಳವರೆಗೆ 100 ಮಿಮೀ ವರೆಗೆ ಒಟ್ಟು ಶೇಖರಣೆಯಾಗುವ ಸಾಧ್ಯತೆಯಿದೆ. ಇಂದು ಅರುಣಾಚಲ ಪ್ರದೇಶದ ಎತ್ತರದ ಪ್ರದೇಶಗಳಲ್ಲಿ ಹಿಮವು ಬೆರೆಯಬಹುದು. ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಮಿಂಚು ಸಹಿತ ಪ್ರತ್ಯೇಕ ಮಳೆಯಾಗುವ ಸಾಧ್ಯತೆಯಿದೆ. ಅಸ್ಸಾಂ, ಮೇಘಾಲಯ, ಒಡಿಶಾ ಮತ್ತು ಪಶ್ಚಿಮ ಉತ್ತರ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಬೆಳಗಿನ ಸಮಯದಲ್ಲಿ ಸಾಧಾರಣದಿಂದ ದಟ್ಟವಾದ ಮಂಜು ಉಂಟಾಗುವ ಸಾಧ್ಯತೆಯಿದೆ.
ಈಗಾಗಲೇ ಜವಾದ್ ಚಂಡಮಾರುತದ ಅಬ್ಬರಕ್ಕೆ ಜನ ತತ್ತರಿಸಿದ್ದಾರೆ. ಜವಾದ್ ಚಂಡಮಾರುತ ತೀವ್ರತೆ ಕಳೆದುಕೊಂಡು ವಾಯುಭಾರ ಕುಸಿತವಾಗಿದ್ದರೂ, ಅದರ ಪರಿಣಾಮವಾಗಿ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರವಾಗಿ ಮಳೆಯಾಗಿದೆ. ಒಡಿಶಾ ಹಾಗೂ ಆಂಧ್ರಪ್ರದೇಶ ಕರಾವಳಿಯಲ್ಲಿ ಭೀತಿ ಸೃಷ್ಟಿಸಿದ್ದ ಜವಾದ್ ಚಂಡಮಾರುತ ದುರ್ಬಲಗೊಂಡಿದೆ. ಈಗಾಗಲೇ 'ಗುಲಾಬ್' ಹಾಗೂ 'ಯಾಸ್' ಚಂಡಮಾರುತದಿಂದ ತತ್ತರಿಸಿದ್ದ ಉಭಯ ರಾಜ್ಯಗಳ ಕರಾವಳಿ ಜನರು ಇದರಿಂದ ನಿಟ್ಟುಸಿರು ಬಿಟ್ಟಿದ್ದಾರೆ.
ಭಾನುವಾರವೇ ಜವಾದ್ ಚಂಡಮಾರುತ ಒಡಿಶಾದ ಪುರಿ ಕಡಲತೀರಕ್ಕೆ ಅಪ್ಪಳಿಸಬೇಕಿತ್ತು. ಈ ಚಂಡಮಾರುತದ ಪರಿಣಾಮ ಒಟ್ಟು 7 ರಾಜ್ಯಗಳಲ್ಲಿ ಸಾಮಾನ್ಯದಿಂದ ಭಾರೀ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಒಡಿಶಾ, ಆಂಧ್ರ, ಬಂಗಾಳದ ಕರಾವಳಿಯಿಂದ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿತ್ತು. ಆದರೆ, ಶನಿವಾರ ಇದರ ತೀವ್ರತೆ ಕ್ಷೀಣಿಸಿತ್ತು. ಜವಾದ್ ಚಂಡಮಾರುತದ ಅವಶೇಷವು ಈಶಾನ್ಯ ಭಾರತದ ಭಾಗಗಳ ಮೇಲೆ ಪರಿಣಾಮ ಬೀರಲಿದ್ದು, ಅದು ಇಂದು ಕಡಿಮೆ ಒತ್ತಡದ ಪ್ರದೇಶವಾಗಿ ದುರ್ಬಲಗೊಂಡಿದೆ.
ಯಾವ ಜಲಾಶಯದಲ್ಲಿ ಎಷ್ಟು ನೀರು ಸಂಗ್ರಹ ಸಾಮರ್ಥ್ಯವಿದೆ, ಯಾವ ಜಲಾಶಯದಲ್ಲಿ ಈಗ ಎಷ್ಟು ನೀರಿದೆ ಎಂಬುದರ ಮಾಹಿತಿ ಇಲ್ಲಿದೆ. ವಿನ್ಯಾಸ ಭರತ್ ಎಚ್ಸಿ
ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ
ಲಿಂಗನಮಕ್ಕಿಯಲ್ಲಿ ಪೂರ್ಣಮಟ್ಟ 554.44 ಮೀಟರ್ ಇದ್ದು, ಇಂದು 552.18 ಮೀಟರ್ ಇದೆ. ಹಾರಂಗಿಯಲ್ಲಿ ಪೂರ್ಣಮಟ್ಟ 871.38 ಮೀಟರ್ ಇದ್ದು, ಇಂದು 870.37ರಷ್ಟಿದೆ. ಇನ್ನು ಹೇಮಾವತಿಯಲ್ಲಿ ನೀರಿನ ಮಟ್ಟ 890.58 ಮೀಟರ್ ಇದ್ದು ಇಂದು 888.09ಮೀಟರ್ನಷ್ಟಿದೆ.
ಕಬಿನಿ ಜಲಾಶಯದ ಮಟ್ಟ
ಕಬಿನಿಯಲ್ಲಿ ಪೂರ್ಣ ಮಟ್ಟ 696.13 ಮೀಟರ್ನಷ್ಟಿದ್ದು, ಇಂದು 696.05 ರಷ್ಟಿದೆ, ಕೆಆರ್ಎಸ್ನಲ್ಲಿ 38.04 ಸಾಮರ್ಥ್ಯವಿದ್ದು ನೀರಿನ ಮಟ್ಟ 38.04 ಮೀಟರ್ನಷ್ಟಿದೆ, ಭದ್ರಾದಲ್ಲಿ ನೀರಿನ ಸಾಮರ್ಥ್ಯ 657.73ರಷ್ಟಿದ್ದು, ಇಂದಿನ ಮಟ್ಟ 657.73ಷ್ಟಿದೆ.
ತುಂಗಭದ್ರಾ ಜಲಾಶಯ
ತುಂಗಭದ್ರದಲ್ಲಿ 497.71 ಮೀಟರ್ ಸಾಮರ್ಥ್ಯವಿದ್ದು, ಇಂದು 497.71 ಮೀಟರ್ನಷ್ಟು ನೀರಿದೆ, ಆಲಮಟ್ಟಿಯಲ್ಲಿ ಸಾಮರ್ಥ್ಯ 519.60ರಷ್ಟಿದ್ದರೂ ಇಂದು 519.15ಮೀಟರ್ನಷ್ಟಿದೆ. ಇನ್ನು ನಾರಾಯಣಪುರದಲ್ಲಿ 492.25ಮೀಟರ್ನಷ್ಟು ನೀರಿನ ಸಾಮರ್ಥ್ಯವಿದ್ದರೂ 492.20ಮೀಟರ್ನಷ್ಟು ನೀರಿದೆ.
ಸೂಪಾ ಜಲಾಶಯದ ನೀರಿನ ಮಟ್ಟ
ಸೂಪಾ ಜಲಾಶಯದಲ್ಲಿ 564.00 ನೀರಿನ ಸಾಮರ್ಥ್ಯ ಹೊಂದಿದೆ, 554.549ರಷ್ಟು ನೀರು ಸಂಗ್ರಹವಾಗಿದೆ. ಘಟಪ್ರಭಾದಲ್ಲಿ 662.91 ಮೀಟರ್ನಷ್ಟು ನೀರಿನ ಸಾಮರ್ಥ್ಯವಿದ್ದು, 660.22ರಷ್ಟು ನೀರಿದೆ, ಮಲಪ್ರಭಾದಲ್ಲಿ 633.80 ಮೀಟರ್ ನೀರಿನ ಸಾಮರ್ಥ್ಯವಿದ್ದು, 633.15 ನೀರು ಸಂಗ್ರಹವಾಗಿದೆ.